ಮಗ ಬರುತ್ತಿರುವುದೇ ನಂಗೆ ದೊಡ್ಡ ಹಬ್ಬ ಎಂದು ಭಾವುಕರಾದ ಡಿಕೆಶಿ ತಾಯಿ ಗೌರಮ್ಮ
ರಾಮನಗರ, ಅಕ್ಟೋಬರ್ 23: ಕನಕಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ಗೆ ಇಂದು ಜಾಮೀನು ಸಿಕ್ಕಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಹುಟ್ಟೂರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ಸಂಭ್ರಮಾಚರಣೆ ನಡೆಸಿದ್ದಾರೆ. ಚನ್ನಪಟ್ಟಣ, ಕನಕಪುರ, ಸಾತನೂರ್, ಕಬ್ಬಾಳು ಸೇರಿದಂತೆ ಡಿಕೆಶಿ ಹುಟ್ಟೂರು ದೊಡ್ಡ ಅಲಹಳ್ಳಿಯಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿದೆ.
ಕನಕಪುರದ ಕೋಡಿಹಳ್ಳಿ ನಿವಾಸದಲ್ಲಿ ಡಿಕೆಶಿ ತಾಯಿ ಗೌರಮ್ಮ ತಮ್ಮ ಮಗನಿಗೆ ಜಾಮೀನು ದೊರೆತು ಮನೆಗೆ ಮರಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. '' ನನ್ನ ಮಗನಿಗೆ ಜಾಮೀನು ಸಿಕ್ಕಿರೋದು ಸಂತಸವಾಗಿದೆ. ಕಳೆದ ಗೌರಿ ಹಬ್ಬ, ದಸರಾಗೆ ನನ್ನ ಮಗ ಬಂದಿರಲಿಲ್ಲ. ಈಗ ದೀಪಾವಳಿಗೆ ಜೊತೆಗಿರುತ್ತಾನೆ. ನನ್ನ ಮಗ ಬರುತ್ತಿರುವುದೋ ನನಗೆ ದೊಡ್ಡ ಹಬ್ಬ" ಎಂದಿದ್ದಾರೆ.
ಇದೇ ಅಕ್ಟೋಬರ್ 14ರಂದು ಡಿಕೆಶಿ ತಾಯಿ ಗೌರಮ್ಮ ಅವರಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು. ನಂತರ ಹತ್ತು ದಿನಗಳ ಕಾಲ ಗೌರಮ್ಮ ಅವರ ವಿಚಾರಣೆ ನಡೆಸದಿರಲು ಹೈಕೋರ್ಟ್ ಸೂಚನೆ ನೀಡಿತ್ತು. ಡಿಕೆಶಿ ಅವರಿಗೆ ಜಾಮೀನು ಮಂಜೂರು ಮಾಡುವಂತೆ ಗೌರಮ್ಮ ಅವರೂ ಮನೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಜಾಮೀನು ದೊರೆತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭ ಡಿಕೆಶಿ ಅಭಿಮಾನಿಗಳು ಕಬ್ಬಾಳಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನಕಾಯಿ ಒಡೆದು ಅರಕೆ ಸಲ್ಲಿಸಿದ್ದಾರೆ. ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ. ಡಿಕೆಶಿ ಪರ ಜೈಕಾರ ಹಾಕಿ ಸಂಭ್ರಮಾಚರಣೆ ನಡೆಸಿದ್ದಾರೆ.
ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಪಟಾಕಿ ಸಿಡಿಸಿ, ಡಿಕೆಶಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ.












Click it and Unblock the Notifications