4 ತಿಂಗಳ ನಂತರ ಕಾರ್ಯಾರಂಭ ಮಾಡಿತು ರಾಮನಗರ ಜಿಲ್ಲಾ ಕಾರಾಗೃಹ
ರಾಮನಗರ, ಜುಲೈ 17: ಕೊರೊನಾ ಭೀತಿಯಿಂದ ಸೀಲ್ ಡೌನ್ ಮಾಡಲಾಗಿದ್ದ ರಾಮನಗರ ಜಿಲ್ಲಾ ಕಾರಾಗೃಹವು ಇಂದಿನಿಂದ ಪುನರಾರಂಭವಾಗಿದೆ. ಕಳೆದ 4 ತಿಂಗಳುಗಳಿಂದ ಜಿಲ್ಲಾ ಕಾರಾಗೃಹವನ್ನು ಮುಚ್ಚಲಾಗಿತ್ತು.
Recommended Video
ಈ ಮುನ್ನ ಹಲವರ ವಿರೋಧದ ನಡುವೆಯೂ ಪಾದರಾಯನಪುರ ಪುಂಡರನ್ನು ರಾಮನಗರದ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಪಾದರಾಯನಪುರದ ಆರೋಪಿಗಳಲ್ಲಿ ನಾಲ್ಕು ಮಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬೆಂಗಳೂರಿಗೆ ಶಿಫ್ಟ್ ಮಾಡಿ ನಂತರ ಜಿಲ್ಲಾ ಕಾರಾಗೃಹವನ್ನು ಸೀಲ್ ಡೌನ್ ಮಾಡಲಾಗಿತ್ತು.
ರಾಮನಗರ ಜೈಲಿನಲ್ಲಿದ್ದ ಸುಮಾರು 160 ಜನ ವಿಚಾರಣಾಧೀನ ಕೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿತ್ತು. ನಂತರದ ದಿನಗಳಲ್ಲಿ ಕಾರಾಗೃಹದ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ ಹಿನ್ನೆಲೆಯಲ್ಲಿ ಮತ್ತೆ ಎರಡನೇ ಬಾರಿಗೆ ಕಾರಾಗೃಹವನ್ನು ಸೀಲ್ ಡೌನ್ ಮಾಡಲಾಗಿತ್ತು.

ಸತತ ನಾಲ್ಕು ತಿಂಗಳಿಂದ ಕಾರಾಗೃಹ ಸೀಲ್ ಡೌನ್ ಆಗಿದ್ದ ಕಾರಣ ಸ್ಥಳೀಯ ವಿಚಾರಣಾಧೀನ ಕೈದಿಗಳನ್ನು ಬೆಂಗಳೂರಿನಿಂದ ವಿಚಾರಣೆಗೆ ರಾಮನಗರಕ್ಕೆ ಕರೆತಂದು ಮತ್ತೆ ಬೆಂಗಳೂರಿನ ಪರಪ್ಪನ ಜೈಲಿಗೆ ಬಿಡಬೇಕಾದ ಅನಿವಾರ್ಯತೆ ಪೊಲೀಸರಿಗೆ ಎದುರಾಗಿತ್ತು. ಅಲ್ಲದೇ ಜೈಲಿನಲ್ಲಿದ್ದ ಕೈದಿಗಳ ಸಂಬಂಧಿಕರು ಕೈದಿಗಳನ್ನು ನೋಡಲು ಬೆಂಗಳೂರಿಗೆ ಅಲೆಯಬೇಕಿತ್ತು. ಇದೀಗ ಜಿಲ್ಲಾ ಕಾರಾಗೃಹ ಕಾರ್ಯಾರಂಭ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ವಲ್ಪ ನಿರಾಳರಾಗಿದ್ದಾರೆ.












Click it and Unblock the Notifications