ಚನ್ನಪಟ್ಟಣದಲ್ಲಿ ದೇವೇಗೌಡರ 6.9 ಅಡಿ ಕಂಚಿನ ಪ್ರತಿಮೆ ಸ್ಥಾಪನೆ
ಚನ್ನಪಟ್ಟಣ, ನವೆಂಬರ್ 11 : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ 6.9 ಎತ್ತರದ ಕಂಚಿನ ಪ್ರತಿಮೆಯನ್ನು ಚನ್ನಪಟ್ಟಣದಲ್ಲಿ ಸ್ಥಾಪನೆ ಮಾಡಲಾಗುತ್ತದೆ. 36 ಲಕ್ಷ ವೆಚ್ಚದಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಬಿಡದಿಯ ಕೇತನಾನಹಳ್ಳಿ ರಸ್ತೆಯಲ್ಲಿರುವ ಚಂದ್ರಿಕಾ ಲೋಹ ಶಿಲ್ಪಕಲಾ ಕೇಂದ್ರ, ಜಿ.ಎಸ್.ಕ್ರಿಯೇಷನ್ಸ್ ಲೋಹ ಶಿಲ್ಪಿ ಸುನೀಲ್ ಕುಮಾರ್ ಮತ್ತು 15 ಜನರ ತಂಡದವರು ದೇವೇಗೌಡರ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
ಶುಕ್ರವಾರ ಬಿಡದಿಯಿಂದ ಚನ್ನಪಟ್ಟಣಕ್ಕೆ ಪ್ರತಿಮೆಯನ್ನು ಸ್ಥಳಾಂತರ ಮಾಡಲಾಯಿತು. ಚನ್ನಪಟ್ಟಣದಲ್ಲಿನ ಇಗ್ಗಲೂರು ಜಲಾಶಯಕ್ಕೆ 2 ಕಿ.ಮೀ. ದೂರದಲ್ಲಿರುವ ಸಾವಂದಿಪುರ ಅವಳಿ ಗ್ರಾಮಗಳ ನಡುವಿನ ವೃತ್ತದಲ್ಲಿ ದೇವೇಗೌಡರ 6.9 ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ.

ಕಾವೇರಿ ಕಣಿವೆ ಮೂಲದಿಂದ ಚನ್ನಪಟ್ಟಣ ತಾಲೂಕು ಕೆರೆಗಳಿಗೆ ಇಗ್ಗಲೂರು ಜಲಾಶಯ (ಎಚ್.ಡಿ.ದೇವೇಗೌಡ ಬ್ಯಾರೇಜ್) ಸ್ಥಾಪನೆಗೆ ಎಚ್.ಡಿ.ದೇವೇಗೌಡ ಕಾರಣಿಭೂತರಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಇಗ್ಗಲೂರು ಅಣೆಕಟ್ಟೆ ಯೋಜನೆ ಆರಂಭದಲ್ಲಿಯೇ ನೆನೆಗುದಿಗೆ ಬಿದ್ದಿತ್ತು. 1979ರಲ್ಲಿ ವಿರೇಂದ್ರ ಪಾಟೀಲರ ಅವಧಿಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ ಎಂ.ಬಿ.ರಾಜಶೇಖರನ್ ಅವರ ಒತ್ತಡ ಈ ಯೋಜನೆ ಮರುಜೀವ ಪಡೆಯಿತು. ಆದರೆ, ಯೋಜನೆ ಕಾರ್ಯಗತವಾಗಿಲ್ಲ.
1983ರಲ್ಲಿ ರಾಜ್ಯದ ನೀರಾವರಿ ಮತ್ತು ಲೋಕೋಪಯೋಗಿ ಸಚಿವರಾಗಿದ್ದ ದೇವೇಗೌಡರು ಹಾಗೂ ಸ್ಥಳೀಯ ಶಾಸಕರಾಗಿದ್ದ ಎಂ.ವರದೇಗೌಡರು ಈ ನೀರಾವರಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು.
ಇಂದು ತಾಲೂಕು ಹಚ್ಚಹಸಿರಾಗಲು, ಜನರಿಗೆ ಕುಡಿಯುವ ನೀರು ಸಿಗಲು ಅವರು ಕಾರಣೀಭೂತರಾದರು. ಇದನ್ನು ಸ್ಮರಿಸುವ ಸಲುವಾಗಿ ಗ್ರಾಮಸ್ಥರು ದೇವೇಗೌಡರ ಪ್ರತಿಮೆ ಸ್ಥಾಪನೆ ಮಾಡಲು ಮುಂದಾಗಿದ್ದು, ನವೆಂಬರ್ 24ರಂದು ಪ್ರತಿಮೆ ಸ್ಥಾಪನೆಯಾಗಲಿದೆ.












Click it and Unblock the Notifications