ಇಗ್ಗಲೂರು ಬ್ಯಾರೇಜ್ ಎಚ್ಡಿಡಿ ಕಟ್ಟಿಸಿಲ್ಲ : ಸಿಪಿವೈ ಸವಾಲು
ರಾಮನಗರ, ಫೆಬ್ರವರಿ 24: 'ಇಗ್ಗಲೂರಿನ ಬ್ಯಾರೇಜ್ ನಿರ್ಮಾಣಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಏನು ಇಲ್ಲ ಬೇಕಿದ್ದರೆ ಬಹಿರಂಗ ಚರ್ಚೆಗೆ ಬರಲಿ' ಎಂದು ಚನ್ನಪಟ್ಟಣದ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಶನಿವಾರದಂದು ಜೆಡಿಎಸ್ ನಾಯಕರಿಗೆ ಸವಾಲ್ ಹಾಕಿದರು.
ಸಿ.ಪಿ.ಯೋಗೇಶ್ವರ್ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಅರಳು ಮರಳು, ಪಾಪ ಅವರಿಗೆ ವಯಸ್ಸಾಗಿದೆ. ಏನ್ ಮಾತನಾಡ್ತಾರೆಂದು ಅವರಿಗೆ ಗೊತ್ತಾಗಲ್ಲ ಎಂದು ಚೇಡಿಸಿದರು.
ಇಗ್ಗಲೂರು ಬ್ಯಾರೇಜ್ ಯೋಜನೆಯಾಗಿದ್ದು 1986 ರಲ್ಲಿ ಅಂದು ಮಾಜಿ ಸಿಎಂಗಳಾದ ವೀರೇಂದ್ರ ಪಾಟೀಲ್ ಹಾಗೂ ದೇವರಾಜ್ ಅರಸು ಕಾಲದಲ್ಲಿ ಟೆಂಡರ್ ಪ್ರಕ್ರಿಯೆ ಆಗಿತ್ತು ಅದರ ಸಂಪೂರ್ಣ ಮಾಹಿತಿ ನನ್ನ ಬಳಿ ಇದೇ ಎಂದು ಹೇಳಿದರು.
ಇಂದು ರಾಜಕೀಯಕ್ಕಾಗಿ ಜೆಡಿಎಸ್ ನವರು ಇಗ್ಗಲೂರು ಬ್ಯಾರೇಜ್ ನಿರ್ಮಾಣ ಮಾಡಿ ಚನ್ನಪಟ್ಟಣಕ್ಕೆ ನೀರಾವರಿ ಮಾಡಿದ್ದು ನಾವು ಅಂತಾರೆ. ಬ್ಯಾರೇಜ್ ಕಟ್ಟುವಲ್ಲಿ ದೇವೇಗೌಡರ ಕೊಡುಗೆ ಏನು ಇಲ್ಲ ಈ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ಧ. ದಾಖಲೆ ಸಮೇತ ಎಲ್ಲವನ್ನು ಸಾಬೀತು ಮಾಡ್ತೀನಿ ಎಂದರು.
ಇಗ್ಗಲೂರು ಬ್ಯಾರೇಜ್ ನಿರ್ಮಾಣಕ್ಕೆ ದೇವೇಗೌಡರು ಶ್ರಮಿಸಿದ್ದರ ಬಗ್ಗೆ ಅವರ ಬಳಿ ದಾಖಲೆ ಇದ್ದರೆ ತರಲಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಬಹಿರಂಗ ಸವಾಲ್ ಎಸೆದರು.
Comments
channapatna dam deve gowda cp yogeshwar district news karnataka assembly elections 2018 ಚನ್ನಪಟ್ಟಣ ಅಣೆಕಟ್ಟು ದೇವೇಗೌಡ ಸಿಪಿ ಯೋಗೇಶ್ವರ ಜಿಲ್ಲಾಸುದ್ದಿ ಕರ್ನಾಟಕ ವಿಧಾನಸಭೆ ಚುನಾವಣೆ 2018
English summary
Channapatna : Iggalur barrage was not built during HD Deve Gowda tenure challenges MLA CP Yogeshwar.