ರಾಮನಗರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಮುಂದೆ ಹಲವು ಬೇಡಿಕೆಗಳನ್ನಿಟ್ಟ ಡಿ.ಕೆ.ಸುರೇಶ್, ಇಲ್ಲಿದೆ ವಿವರ
ರಾಮನಗರ, ಜನವರಿ, 05: ಬೆಂಗಳೂರು - ಮೈಸೂರು ನೂತನ ದಶಪಥ ಎಕ್ಸ್ಪ್ರೆಸ್ ಹೈವೇ ಪರಿಶೀಲನೆಗಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆಗಮಿಸಿದ್ದರು. ನಿತಿನ್ ಗಡ್ಕರಿ ಅವರಿಗೆ ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 209, ರಾಷ್ಟ್ರೀಯ ಹೆದ್ದಾರಿ 275, ರಾಷ್ಟ್ರೀಯ ಹೆದ್ದಾರಿ 44 ಹಾದುಹೋಗುವ ಪ್ರಮುಖ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಮನವಿ ಪತ್ರ ನೀಡಿದರು.
ಬೆಂಗಳೂರು ಮೈಸೂರು ರಾಷ್ಟೀಯ ಹೆದ್ದಾರಿ 275ರಲ್ಲಿನ ಎರಡೂ ಬದಿಯ ಅವೈಜ್ಞಾನಿಕ ಸರ್ವಿಸ್ ರಸ್ತೆಗಳನ್ನು ಸರಿಪಡಿಸಬೇಕು, ಅಂಡರ್ ಪಾಸ್ ರಸ್ತೆಗಳಲ್ಲಿ ಮಳೆ ನೀರು ನಿಲ್ಲದಂತೆ ದುರಸ್ತಿ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಈ ಹೆದ್ದಾರಿ ಪಕ್ಕದ ಹಳೇ ರಸ್ತೆಗಳನ್ನು ಒಂದು ಬಾರಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು. ಅಲ್ಲದೇ ಬೆಂಗಳೂರು ಹಾಗೂ ದಿಂಡಗಲ್ ನಡುವೆ ರಾಷ್ಟ್ರೀಯ ಹೆದ್ದಾರಿ 209ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿದ್ದಾರೆ.
ಫೆಬ್ರವರಿ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ !
ಅಂಡರ್ ಪಾಸ್ ನಿರ್ಮಾಣ ಮಾಡಬೇಕು
ರಾಷ್ಟ್ರೀಯ ಹೆದ್ದಾರಿ 209 ಹಾದು ಹೋಗುವ ಕನಕಪುರ ಬೈಪಾಸ್, ಕನಕಪುರ ಬೈಪಾಸ್ನ ಎಪಿಎಂಸಿ ಯಾರ್ಡ್ನಿಂದ ಸಮೀಪದ ಮುಖ್ಯ ರಸ್ತೆಯವರೆಗೆ, ಕನಕಪುರ ಬೈಪಾಸ್ನಿಂದ ಹೊರನಡೆಯುವ ಕಡೆ ಬಲಭಾಗದಲ್ಲಿನ ಸರ್ವಿಸ್ ರಸ್ತೆ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಹಾರೋಹಳ್ಳಿ ಬೈಪಾಸ್ ಗಳಲ್ಲಿ ವಾಹನ ಸಂಚಾರಕ್ಕೆ ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ಏಕಕಾಲ ಅಭಿವೃದ್ಧಿ ಯೋಜನೆಯಡಿಯಲ್ಲಿ ಕನಕಪುರ ಪಟ್ಟಣ ಅಭಿವೃದ್ಧಿ, ಅರ್ಕಾವತಿ ನದಿಗೆ ಬಲ ಭಾಗದಲ್ಲಿ ಪರ್ಯಾಯ ಸೇತುವೆ ನಿರ್ಮಾಣ ಮಾಡಬೇಕು. ಶನಿಮಹತ್ಮಾ ದೇವಾಲಯ, ರವಿಶಂಕರ್ ಗುರೂಜಿ ಆಶ್ರಮ, ಕಗ್ಗಲಿಪುರ ಸರ್ಕಾರಿ ಶಾಲಾ ವಲಯ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ಜೈನ್ ವಿಶ್ವವಿದ್ಯಾಲಯ, ಸಾತನೂರು ಜಂಕ್ಷನ್, ಜಕ್ಕೇಗೌಡನದೊಡ್ಡಿ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಮೇಲ್ಸೇತುವೆಗಳ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಜಂಕ್ಷನ್ಗಳ ಅಭಿವೃದ್ಧಿಗೆ ಒತ್ತಾಯ
ಇನ್ನು ಮತ್ತೊಂದು ಮನವಿಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬಿಡದಿಯಿಂದ ಅತ್ತಿಬೆಲೆವರೆಗೂ, ರಾಷ್ಟ್ರೀಯ ಹೆದ್ದಾರಿ 44ರ ಹಾರೋಹಳ್ಳಿ, ಜಿಗಣಿ, ಆನೇಕಲ್ ಮಾರ್ಗವಾಗಿ ಸಾಗುವ ಬೆಂಗಳೂರು ಚೆನ್ನೈ ಹೆದ್ದಾರಿಯಲ್ಲಿ ಜಂಕ್ಷನ್ಗಳ ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ. ಈ ಜಂಕ್ಷನ್ಗಳು ಕೈಗಾರಿಕಾ ಪ್ರದೇಶವಾಗಿದ್ದು, ಬಿಡದಿ ಬಳಿ 400, ಹಾರೋಹಳ್ಳಿಯಲ್ಲಿ 1280, ಜಿಗಣಿ 339, ಬೊಮ್ಮಸಂದ್ರ 979, ಅತ್ತಿಬೆಲೆ 148 ಕೈಗಾರಿಕಾ ಯುನಿಟ್ಗಳಿದ್ದು, ಇಲ್ಲಿ ಸುಗಮ ಸಂಚಾರಕ್ಕಾಗಿ ಜಂಕ್ಷನ್ಗಳ ಅಭಿವೃದ್ಧಿ ಮಾಡಬೇಕು. ಹಾಗೆಯೇ ಬೆಂಗಳೂರು-ಮೈಸೂರು ರಸ್ತೆಯ ಗೊಂಬೆಗಳ ನಾಡು ಚನ್ನಪಟ್ಟಣದಲ್ಲಿ ವಿಶ್ವವಿಖ್ಯಾತ ಕರಕುಶಲ ಕಲೆ ಅಳಿವಿನಂಚಿನಲ್ಲಿದ್ದು, ಇಲ್ಲಿ ಕರಕುಶಲ ಕಲಾಗ್ರಾಮ ನಿರ್ಮಾಣ ಮಾಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.