Channapatna By-election 2024: ಚನ್ನಪಟ್ಟಣ ರಣರಂಗದಲ್ಲಿ 'ಸೈನಿಕ' ಮೈತ್ರಿಗೆ ಮಣ್ಣುಮುಕ್ಕಿಸೋದು ಪಕ್ಕಾ! ಹೇಗೆ ಅಂತೀರಾ?
ಚನ್ನಪಟ್ಟಣದ ಉಪಚುನಾವಣೆಯ ಹೊತ್ತಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆದಿರುವ ಸಿ.ಪಿ.ಯೋಗೇಶ್ವರ್ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಮನೆ ಸೇರಿಕೊಂಡಿದ್ದಾರೆ. ಚನ್ನಪಟ್ಟಣದಿಂದ ಮೈತ್ರಿ ಅಭ್ಯರ್ಥಿಯಾಗಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ ಸೈನಿಕ, ಕೊನೆಗೆ ಬಂಡಾಯವೆದ್ದು ಸ್ವತಂತ್ರವಾಗಿಯೇ ನಿಲ್ಲುತ್ತೇನೆ ಎಂದು ತೊಡೆ ತಟ್ಟಿದ್ದರು.
ಆದರೆ ಒಬ್ಬರೇ ಯಾಕೆ ತೊಡೆ ತಟ್ತೀರಿ...ಬನ್ನಿ ಎರಡೂ ಕೈ ಸೇರಿದ್ರೆ ಚಪ್ಪಾಳೆ ಅಂತ ಕಾಂಗ್ರೆಸ್ ಯೋಗೇಶ್ವರ್ ಅವರನ್ನು ಅದ್ಧೂರಿಯಾಗಿ ಮನೆಗೆ ಸೇರಿಸಿಕೊಂಡಿದೆ. ಇನ್ನು ಇಲ್ಲಿವರೆಗೆ ಚನ್ನಪಟ್ಟಣಕ್ಕೆ ಅಚ್ಚರಿ ಅಭ್ಯರ್ಥಿ ಎನ್ನುತ್ತಿದ್ದ ಕಾಂಗ್ರೆಸ್, ಸೈನಿಕನನ್ನೇ ಬೈಎಲೆಕ್ಷನ್ ರಣರಂಗಕ್ಕೆ ಕಳಿಸಲು ಮುಂದಾಗಿದೆ.

ಇದರಿಂದ ಕಾಂಗ್ರೆಸ್ಗೂ ಪ್ಲಸ್ ಪಾಯಿಂಟ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗಿತ್ತಿದೆ. ಯಾಕಂದ್ರೆ ಈಗಾಗಲೇ ಸಿ.ಪಿ.ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಹವಾ ಕ್ರಿಯೇಟ್ ಮಾಡಿರುವ ನಾಯಕ. ಒಂದು ವೇಳೆ ಯೋಗೇಶ್ವರ್ ಮೈತ್ರಿ ಅಭ್ಯರ್ಥಿಯಾಗೇ ಇದ್ದಿದ್ದರೆ, ಕಾಂಗ್ರೆಸ್ಗೆ ಮುಳುವಾಗುತ್ತಿತ್ತು. ಅಂತಿಮವಾಗಿ ಸೈನಿಕನಿದ್ದ ಮೈತ್ರಿ ಸೈನ್ಯವೇ ಗೆದ್ದು ಬೀಗುತ್ತಿತ್ತು.
ಇದೀಗ ಸೈನಿಕನ ಬಲ ಕಳೆದುಕೊಂಡಿರುವ ಮೈತ್ರಿಪಡೆಯು ಚುನಾವಣಾ ಕಣದಲ್ಲಿ ಹೋರಾಡುವುದು ಅನಿವಾರ್ಯವಾಗಿದೆ. ಇನ್ನು ಎದುರಾಳಿ ಪಕ್ಷಗಳೊಂದಿಗೆ ಕಾಂಗ್ರೆಸ್ ಬೇರೆ ಅಭ್ಯರ್ಥಿಯನ್ನು ನಿಲ್ಲಿಸಿದ್ದರೆ, ಭಾರಿ ಗುದ್ದಾಟ ಮಾಡಬೇಕಿತ್ತು. ಈಗ ಮೈತ್ರಿಗೆ ಬಲವಾಗಿದ್ದ ಸೈನಿಕನೇ ಕೈಪಡೆ ಮುನ್ನಡೆಸುವುದರಿಂದ ಗೆಲುವಿನ ಗಡಿ ತಲುಪಿದಂತೆ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾಸನಭೆ ಚುನಾವಣೆಯ ಫಲಿತಾಂಶ ಗಮನಿಸಿದಾಗಲೂ ಇದಕ್ಕೆ ಪೂರಕವಾದ ವಾತಾವರಣವನ್ನೇ ಸೂಚಿಸುತ್ತಿದೆ. ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಇದೇ ಸಿ.ಪಿ.ಯೋಗೇಶ್ವರ್ ಅವರು ಎಚ್.ಡಿ.ಕುಮಾರಸ್ವಾಮಿ ಎದುರಿಗೆ ಸ್ಪರ್ಧಿಸಿದ್ದರು. ಬಳಿಕ ಕೇವಲ 15000 ಮತಗಳ ಅಂತರದಿಂದಷ್ಟೇ ಕುಮಾರಸ್ವಾಮಿ ಜಯ ಸಾಧಿಸಿದ್ದರು.
ಅಂದರೆ, ಸಿ.ಪಿ.ಯೋಗೇಶ್ವರ್ ಅಲ್ಲಿ ಟಫ್ ಕಾಂಪಿಟೇಷನ್ ಕೊಡಬಹುದಾದ ಅಭ್ಯರ್ಥಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಚನ್ನಪಟ್ಟಣದಲ್ಲಿ ಮೈತ್ರಿ ಬಗ್ಗೆ ಸ್ಥಳೀಯ ನಾಯಕರಿಗೆ ಈಗಲೂ ಅಸಮಾಧಾನ ಇರುವುದರಿಂದ ಸಹಜವಾಗಿ ಅವರೆಲ್ಲರೂ ಯೋಗೇಶ್ವರ್ ಅವರ ಬೆನ್ನಿಗೆ ನಿಲ್ಲುವುದು ಕೂಡ ಕಟ್ಟಿಟ್ಟಬುತ್ತಿ.
ಚನ್ನಪಟ್ಟಣ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ 96,592 ಮತಗಳು ಸಿಕ್ಕರೆ, ಸಿ.ಪಿ.ಯೋಗೇಶ್ವರ್ ಅವರಿಗೆ 80,677 ಮತಗಳು ಸಿಕ್ಕಿತ್ತು. ಇನ್ನು ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಸ್.ಗಂಗಾಧರ್ ಅವರು 15,374 ಮತಗಳನ್ನು ಪಡೆದಿದ್ದರು. ಇದೇ ಲೆಕ್ಕಾಚಾರವನ್ನು ತಾಳೆ ಹಾಕುವುದಾದರೆ, ಈ ಬಾರಿ ಸಿ.ಪಿ.ಯೋಗೇಶ್ವರ್ ಅವರಿಗೆ ತಮ್ಮ ಬೆಂಬಲದ ಮತಗಳ ಜೊತೆಗೆ ಕಾಂಗ್ರೆಸ್ನ ಮತಗಳು ಸಿಗುವುದು ಫಿಕ್ಸ್.
ಈ ಎರಡೂ ಕಡೆಯ ಮತಗಳು ಯೋಗೇಶ್ವರ್ ಅವರ ಪಾಲಾಗುವುದರಿಂದ ಸಹಜವಾಗಿ ಇವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗ ಮೈತ್ರಿಬಲಕ್ಕೆ ಮತಬಲದ ಕೊರತೆ ಇರುವುದರಿಂದ ಕಾಂಗ್ರೆಸ್ಗೆ ಸೈನಿಕನೇ ದೊಡ್ಡ ಬಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಚನ್ನಪಟ್ಟಣದಲ್ಲಿ ಕೈ ಅಭ್ಯರ್ಥಿಯಾಗಿ ನಿಲ್ಲುತ್ತಿರುವ ಸೈನಿಕ ಈ ಬೈಎಲೆಕ್ಷನ್ ಗೆದ್ದು ಬರೋದು ಬಹುತೇಕ ಖಚಿತ ಎನ್ನಲಾಗಿದೆ. ಟ್ರಬಲ್ ಶೂಟರ್ ಜೊತೆ ಸೇರಿಕೊಂಡಿರುವ ಸಿ.ಪಿ.ಯೋಗೇಶ್ವರ್ ಅವರು ಸದ್ಯ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಗೆ ಟ್ರಬಲ್ ಆಗೋದು ಕೂಡ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.












Click it and Unblock the Notifications