ಆರ್ ಎಸ್ ಎಸ್ ಕಚೇರಿಗೆ ಸಚಿವ ಸಿ. ಪಿ. ಯೋಗೇಶ್ವರ್ ಭೇಟಿ
ರಾಮನಗರ, ಜನವರಿ 25: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಣೆ ನಡೆಯುತ್ತಿದೆ. ಚನ್ನಪಟ್ಟಣದಲ್ಲಿ ಸಣ್ಣ ನೀರಾವರಿ ಸಚಿವ ಸಿ. ಪಿ. ಯೋಗೇಶ್ವರ್ ನಿಧಿ ಸಂಗ್ರಹದಲ್ಲ ಪಾಲ್ಗೊಂಡರು, ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡಿದರು.
ಭಾನುವಾರ ಚನ್ನಪಟ್ಟಣದ ಕನಕನಗರ ಬಡಾವಣೆಯಲ್ಲಿ ಸಚಿವ ಸಿ. ಪಿ. ಯೋಗೇಶ್ವರ್ ಮನೆ ಮನೆಗೆ ತೆರಳಿ ನಿಧಿ ಸಂಗ್ರಹ ಮಾಡಿದರು. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಸಂಘ ಪರಿವಾರದ ಸದಸ್ಯರೊಂದಿಗೆ ಬಡಾವಣೆಯ ಬೀದಿಗಳಲ್ಲಿ ಸಂಚಾರ ಮಾಡಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮುಕ್ತ ಮನಸ್ಸಿನಿಂದ ದೇಣಿಗೆ ನೀಡುವಂತೆ ಸಚಿವರು ಮನವಿ ಸಲ್ಲಿಸಿದರು. ಹಾಗೂ ಯಾವುದೇ ಒತ್ತಾಯವಿಲ್ಲ ತಮ್ಮ ಶಕ್ತಿ ಅನುಸಾರ ದೇಣಿಗೆ ನೀಡುವಂತೆ ಜನರಿಗೆ ಕರೆ ನೀಡಿದರು.
ನಿಧಿ ಸಂಗ್ರಹಣೆಯಲ್ಲಿ ಹಣ ನೀಡಿದ ಜನರಿಗೆ ಸಚಿವರು 100 ರೂಪಾಯಿಯ ಕೂಪನ್ ನೀಡಿದರು.

ಶ್ರೀರಾಮ ಮಂದಿರ ನಿರ್ಮಾಣದ ಮಾಹಿತಿ ಇರುವ ಕಿರು ಹೊತ್ತಿಗೆಯನ್ನು ನೀಡದ ಸಚಿವರು ಜನರು ಬ್ಯಾಂಕ್ ಮೂಲಕವು ಮಂದಿರ ನಿರ್ಮಾಣಕ್ಕೆ ತಮ್ಮ ದೇಣಿಗೆಯನ್ನು ನೀಡಬಹುದು ಎಂದು ಮಾಹಿತಿ ನೀಡಿದರು. ಚನ್ನಪಟ್ಟಣದಲ್ಲಿ ಸಚಿವರು ನಿಧಿ ಸಂಗ್ರಹಣೆ ಕಾರ್ಯವನ್ನು ಇನ್ನೂ ಮೂರು ದಿನಗಳ ಕಾಲ ನಡೆಸಲಿದ್ದಾರೆ.
ಆರ್ ಎಸ್ ಎಸ್ ಕಚೇರಿಗೆ ಭೇಟಿ; ಸಣ್ಣ ನೀರಾವರಿ ಸಚಿವ ಸಿ. ಪಿ. ಯೋಗೇಶ್ವರ್ ಚನ್ನಪಟ್ಟಣದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಕ್ಕೆ ತೆರಳುವ ಮಾರ್ಗದಲ್ಲಿ ರಾಮನಗರದ ಕಾಮನಗುಡಿ ಸರ್ಕಲ್ ಬಳಿ ಇರುವ ಸಂಘ ಪರಿವಾರದ ಕಚೇರಿಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ.

ರಾಮನಗರದ ಸಂಘ ಪರಿವಾರದ ಕಚೇರಿಯಲ್ಲಿ ಕೆಲವು ಆರ್ ಎಸ್ ಎಸ್ ಪ್ರಮುಖರ ಜೊತೆ ಸಚಿವರು ಸಭೆಯನ್ನು ಕೂಡ ನಡೆಸಿದ್ದಾರೆ. ಆದರೆ, ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಯಾರು ಎಲ್ಲೂ ಗುಟ್ಟುಬಿಟ್ಟುಕೊಟ್ಟಿಲ್ಲ.












Click it and Unblock the Notifications