ಮುಂದಿನ ಚುನಾವಣೆಗೆ ಕ್ಷೇತ್ರ ಬದಲಾವಣೆ; ಯೋಗೇಶ್ವರ್ ಸ್ಪಷ್ಟನೆ
ರಾಮನಗರ, ಫೆಬ್ರವರಿ 15; ವಿಧಾನ ಪರಿಷತ್ ಸದಸ್ಯ, ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ಮುಂದಿನ ಚುನಾವಣೆಗೆ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳಿಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಚನ್ನಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸಚಿವರು, "ಚನ್ನಪಟ್ಟಣ ನನ್ನ ಕಾರ್ಯ ಕ್ಷೇತ್ರ, ಮುಂದಿನ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರಕ್ಕೆ ಹೋಗಲ್ಲ, ಚನ್ನಪಟ್ಟಣ ಕ್ಷೇತ್ರದಿಂದಲೇ ಸ್ವರ್ಧಿಸುತ್ತೇನೆ, ಬಿಜೆಪಿ ಪಕ್ಷದಿಂದಲೇ ಸ್ಪರ್ಧೆ ಮಾಡ್ತೇನೆ" ಎಂದರು.
ಚನ್ನಪಟ್ಟಣದ ಕ್ಷೇತ್ರದ ಹಾಲಿ ಶಾಸಕರು ಎಚ್. ಡಿ. ಕುಮಾರಸ್ವಾಮಿ. 2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಸೋಲು ಕಂಡಿದ್ದರು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿಧಾನ ಪರಿಷತ್ ಸದಸ್ಯರಾಗಿ, ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದಾರೆ.

ಆರ್ಥಿಕ ಮೀಸಲಾತಿ ಬರಲಿದೆ: "ಜಾತಿ ಮೀಸಲಾತಿ ತೊಲಗಿ, ಆರ್ಥಿಕ ಅಧಾರದ ಮೀಸಲಾತಿ ಬರಲಿದೆ" ಎಂದು ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್ ಭವಿಷ್ಯ ನಡಿದರು.
"ಇತ್ತೀಚೆಗೆ ಎಲ್ಲಾ ಜಾತಿಯವರು ಮೀಸಲಾತಿಗೆ ಬೇಡಿಕೆ ಇಡುತ್ತಿದ್ದಾರೆ. ಹಾಗಾಗಿ ಮಂದಿನ ದಿನಗಳಲ್ಲಿ ಜಾತಿ ಮೀಸಲಾತಿ ತೊಲಗಿ, ಆರ್ಥಿಕ ಆಧಾರದ ಮೇಲೆ ಮೀಸಲಾತಿ ಬರುತ್ತದೆ" ಎಂದರು.
"ಮುಂದೆ ಜಾತಿ ಅಧಾರದಲ್ಲಿ ಮೀಸಲಾತಿ ಮಾಡಲು ಕಷ್ಟವಾಗುತ್ತದೆ. ಇಂದು ಎಲ್ಲಾ ಜಾತಿ ಮತ್ತು ಸಮಾಜದಲ್ಲೂ ಬಡವರು ಇದ್ದಾರೆ, ಆರ್ಥಿಕವಾದ ಬಲಾಢ್ಯರು ಇದ್ದಾರೆ. ಹಾಗಾಗಿ ಎಲ್ಲಾ ಜಾತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದವರು ಮುಂದೆ ಬರಲು ಆರ್ಥಿಕ ಮೀಸಲಾತಿ ಬರಬೇಕು" ಎಂದು ಅಭಿಪ್ರಾಯಪಟ್ಟರು.
"ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಜನಪರವಾಗಿದೆ. ಬಹಳ ಒಳ್ಳೆಯ ಬಜೆಟ್ ಜನರಿಗೆ ಕೊಡಲಾಗಿದೆ" ಎಂದರು.












Click it and Unblock the Notifications