ಚನ್ನಪಟ್ಟಣಕ್ಕೆ 3,000 ಮನೆ ಮಂಜೂರು: ಯೋಗೇಶ್ವರ್-ಎಚ್.ಡಿ.ಕುಮಾರಸ್ವಾಮಿ ನಡುವೆ ಕ್ರೆಡಿಟ್ ವಾರ್
ಚನ್ನಪಟ್ಟಣ, ನವೆಂಬರ್ 18: ಕೊರೊನಾ ಕಾರಣ ನೀಡಿ ಚನ್ನಪಟ್ಟಣ ಕ್ಷೇತ್ರಕ್ಕೆ ಒಂದೇ ಒಂದು ಮನೆಯನ್ನೂ ಮಂಜೂರು ಮಾಡದ ರಾಜ್ಯ ಸರ್ಕಾರ ಇದೀಗ ಚುನಾವಣೆಯ ಹೊಸ್ತಿಲಿನಲ್ಲಿ ಮೂರು ಸಾವಿರ ಮನೆಗಳ ಭರಪೂರ ಕೊಡುಗೆ ನೀಡಿದೆ. ಇದೀಗ ಸರ್ಕಾರ ಮಂಜೂರು ಮಾಡುವಿರುವ ಅನುದಾನದ ಬಗ್ಗೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಾಲಿ ಶಾಸಕರ ನಡುವೆ ಕ್ರೆಡಿಟ್ ವಾರ್ ಆರಂಭವಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ 6 ತಿಂಗಳು ಇರುವಂತೆ ಮತದಾರರನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ 3 ಸಾವಿರ ಮನೆಗಳನ್ನು ಚನ್ನಪಟ್ಟಣಕ್ಕೆ ಮಂಜೂರು ಮಾಡಿದೆ. ಸರ್ಕಾರ ನೀಡಿರುವ ಮೂರು ಸಾವಿರ ಮನೆಗಳ ಕ್ರೆಡಿಟ್ ತಮ್ಮದಾಗಿಸಿಕೊಳ್ಳಲು ಕ್ಷೇತ್ರದ ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹಾಗೂ ಕ್ಷೇತ್ರ ಶಾಸಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದೆ.
ಅಭ್ಯರ್ಥಿ ಘೋಷಣೆ ಬಗ್ಗೆ ಕಾಂಗ್ರೆಸ್ನಲ್ಲೇ ಗೊಂದಲ, ನಾವು ಸರಿಯಾಗಿದ್ದೇವೆ: ಚನ್ನಪಟ್ಟಣದಲ್ಲಿ ಎಚ್ಡಿಕೆ ಹೇಳಿಕೆ
ಸರ್ಕಾರದ ವಸತಿ ಇಲಾಖೆಯಿಂದ ಕ್ಷೇತ್ರಕ್ಕೆ ಮೂರು ಸಾವಿರ ಮನೆಗಳು ಮಂಜೂರು ಆಗಿರುವ ಸುದ್ದಿ ಹೊರಬಿದ್ದ ಕ್ಷಣದಿಂದ ಸಕ್ರಿಯವಾಗಿರುವ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ಪರಿಶ್ರಮದಿಂದಲೇ ಮನೆಗಳು ಮಂಜೂರಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ತಮ್ಮ ಹೇಳಿಕೆಯ ಸಮರ್ಥನೆ ಸಾಕ್ಷಿಯಾಗಿ ಎರಡು ಲೆಟರ್ ಹೆಡ್ಗಳನ್ನು ಬಹಿರಂಗಪಡಿಸಿದ್ದರು.
ತಮ್ಮ ಕೋರಿಕೆಯಂತೆ ಮನೆ ಮಂಜೂರು ಎಂದಿರುವ ಸೋಮಣ್ಣ
ವಸತಿ ಸಚಿವ ವಿ.ಸೋಮಣ್ಣ 2019ರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಬರೆದ ಪತ್ರವನ್ನು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪತ್ರದಲ್ಲಿ 'ರಾಜೀವ್ಗಾಂಧಿ ವಸತಿ ನಿಗಮದಿಂದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 32 ಗ್ರಾಮ ಪಂಚಾಯತಿಗಳಿಗೆ ತಲಾ 100 ಮನೆಗಳಂತೆ ಒಟ್ಟು 3,200 ಮನೆಗಳನ್ನು ಬಸವ ವಸತಿ ಯೋಜನೆಯಡಿ ಮಂಜೂರು ಮಾಡುವಂತೆ ಕೋರಿ ತಾವು ಬರೆದಿರುವ ಪತ್ರ ತಲುಪಿದೆ.
ತಮ್ಮ ಕೋರಿಕೆಯಂತೆ ಮನೆ ಮಂಜೂರು ಮಾಡುವ ಬಗ್ಗೆ ಕ್ರಮ ವಹಿಸಲು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ಗಾಂಧಿ ವಸತಿ ನಿಗಮ ನಿಯಮಿತ, ಬೆಂಗಳೂರು ಇವರಿಗೆ ಸೂಚಿಸಲಾಗಿದೆ ಎಂಬ ವಿಷಯವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ' ಎಂದು ಬರೆಯಲಾಗಿತ್ತು. ಈ ಪತ್ರವನ್ನು ಹಂಚಿಕೊಂಡು ಜೆಡಿಎಸ್ ಕಾರ್ಯಕರ್ತರು ಮನೆಗಳನ್ನು ಮಂಜೂರು ಮಾಡಿಸಿರುವುದು ನಮ್ಮ ನಾಯಕರು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಬಿಜೆಪಿಯವರಿಂದ ಮತದಾರರ ಮಾಹಿತಿ ಕಳವು: ಚನ್ನಪಟ್ಟಣದಲ್ಲಿ ಎಚ್ಡಿಕೆ ಆಕ್ರೋಶ
ಅಧಿಕಾರಿಗಳ ಪತ್ರವನ್ನು ಪೋಸ್ಟ್ ಮಾಡಿದ ಬಿಜೆಪಿ ಕಾರ್ಯಕರ್ತರು
ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ಗೆ ರಾಜೀವ್ಗಾಂಧಿ ವಸತಿ ನಿಗಮದ ಅಧಿಕಾರಿಗಳು, ಬರೆದಿರುವ ಪತ್ರವನ್ನು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಪತ್ರದಲ್ಲಿ 'ಚನ್ನಪಟ್ಟಣ ತಾಲೂಕಿನಾದ್ಯಂತ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ಸಂಕಷ್ಟದಲ್ಲಿ, ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ, ಬಸವ ವಸತಿ ಯೋಜನೆಯಡಿಯಲ್ಲಿ 3,000 ಮನೆಗಳನ್ನು ಮಂಜೂರು ಮಾಡಿಕೊಡುವಂತೆ ವಸತಿ ಸಚಿವರನ್ನು ಕೋರಿರುತ್ತಾರೆ, ಚನ್ನಪಟ್ಟಣದ ಪಂಚಾಯಿತಿಗಳಿಗೆ ಹೆಚ್ಚುವರಿಯಾಗಿ 3,000 ಮನೆ ಮಂಜೂರು ಮಾಡಲು ಕಡತ ತಕ್ಷಣ ಮಂಡಿಸುವಂತೆ ನಿಗಮಕ್ಕೆ ಸೂಚಿಸಿರುತ್ತಾರೆ' ಎಂದು ಬರೆಯಲಾಗಿದೆ.
3,000 ಮನೆ ನಿರ್ಮಾಣಕ್ಕೆ 60 ಕೋಟಿ ರೂಪಾಯಿ ಹಣ ಬೇಕು
"ಚನ್ನಪಟ್ಟಣಕ್ಕೆ 3 ಸಾವಿರ ಮನೆಗಳ ಮಂಜೂರು ಮಾಡುವಂತೆ ನಾನು ಕೂಡಾ ವಸತಿ ಸಚಿವರಿಗೆ ಪತ್ರ ಬರೆದಿದ್ದೆ. ನನ್ನ ಪತ್ರಕ್ಕೆ ಸೋಮಣ್ಣ ಯಾವ ರೀತಿ ಸ್ಪಂದಿಸಿದರು ಎನ್ನುವುದು ಗೊತ್ತು. ಅದಕ್ಕೆ ಅಲ್ಲವೇ ಅವರನ್ನು ಸುಳ್ಳಿನ ಸೋಮಣ್ಣ ಎನ್ನುವುದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ಕಿಡಿಕಾರಿದ್ದಾರೆ. ಕ್ಷೇತ್ರದಲ್ಲಿ 3 ಸಾವಿರ ಮನೆ ನಿರ್ಮಾಣ ಮಾಡಲು 50 ರಿಂದ 60 ಕೋಟಿ ರೂಪಾಯಿ ಹಣ ಬೇಕು. ಹೀಗಾಗಿ ಚುನಾವಣೆಗಾಗಿ ಬರಿ ಘೋಷಣೆ ಮಾಡಿದ್ದಾರೋ ಅಥವಾ ಹಣ ಬಿಡುಗಡೆ ಮಾಡುತ್ತಾರೋ ಕಾದು ನೋಡೋಣ. ಈ ಹಿಂದೆ 2013 ಚುನಾವಣೆಯಲ್ಲೂ ಹೀಗೆ ಮನೆ ಕೊಡುತ್ತೇವೆ, ಸೈಟ್ ಕೊಡುತ್ತೇವೆ ಎಂದು ನಾಟಕ ಮಾಡಿದ್ದರು. ತಾಲೂಕಿನಲ್ಲಿ ಹೆಚ್ಚು ಗ್ರಾಮ ಪಂಚಾಯತಿಗಳು ಜೆಡಿಎಸ್ ಹಿಡಿತದಲ್ಲಿವೆ. ಮುಂದಿನ 6 ತಿಂಗಳುಗಳ ಕಾಲ ಈ ರೀತಿಯ ಪತ್ರದ ಮೂಲಕ ಯೋಜನೆಗಳು ಬರುತ್ತದೆ. ಆದರೆ ಎಷ್ಟು ಕಾರ್ಯಗತವಾಗುತ್ತದೆ ನೋಡೋಣ" ಎಂದಿದ್ದಾರೆ.
ಮನೆಗಳ ಮಂಜೂರಾತಿ ಬಗ್ಗೆ ಸಿ.ಪಿ ಯೋಗೇಶ್ವರ್ ಸಮರ್ಥನೆ
ಇತ್ತ ಸಿ.ಪಿ ಯೋಗೇಶ್ವರ್ ಕೂಡ ಕ್ಷೇತ್ರಕ್ಕೆ ತಮ್ಮಿಂದಲೇ ಮನಗಳು ಮಂಜೂರು ಆಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಅತಿವೃಷ್ಟಿಯಾಗಿ ನೂರಾರು ಮನೆಗಳು ನಾಶವಾಗಿದ್ದವು. "ನೆರೆ ಹಾವಳಿ ಪರಿಶೀಲನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ತಾಲೂಕಿಗೆ ಭೇಟಿ ನೀಡಿದ್ದ ವೇಳೆ ಅವರಿಗೆ ಮನವಿ ಸಲ್ಲಿಸಿದ್ದೆ. ಅಲ್ಲದೇ ಈ ಸಂಬಂಧ ಪತ್ರ ಬರೆದು ತಾಲೂಕಿಗೆ ವಿಶೇಷವಾಗಿ ಮನೆಗಳನ್ನು ಕೊಡಿ ಎಂದು ಹೇಳಿದ್ದೆ, ಹಲವು ಬಾರಿ ಅದರ ಬಗ್ಗೆ ಫಾಲೋಅಪ್ ಕೂಡ ಮಾಡಿದ್ದೆ. ಸಾಕಷ್ಟು ಬಾರಿ ಒತ್ತಡ ಕೂಡ ಹಾಕಿದ ಹಿನ್ನಲೆಯಲ್ಲಿ ಮೂರು ಸಾವಿರ ಮನೆಗಳನ್ನು ಸರ್ಕಾರ ಮಂಜೂರು ಮಾಡಿದ್ದಾರೆ. ಯಾರೇ ಸರ್ಕಾರದಿಂದ ಮಂಜೂರಾತಿ ತಂದರೂ ಗ್ರಾಮ ಪಂಚಾಯತಿಯಲ್ಲಿ ಅದರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಪಕ್ಷ ರಾಜಕಾರಣ ಇರುವುದಿಲ್ಲ. ನಾನು ಬರೆದಿದ್ದ ಪತ್ರದ ಮೂಲಕ ಸರ್ಕಾರ ಮನೆಗಳನ್ನು ಮಂಜೂರು ಮಾಡಿದ್ದಾರೆ ಎನ್ನುವುದನ್ನು ಅಧಿಕಾರಿಗಳು ಆದೇಶ ಪತ್ರದಲ್ಲಿ ಸ್ಪಷ್ಟವಾಗಿ 'ಸಿ.ಪಿ ಯೋಗೇಶ್ವರ್ ಅವರ ಪತ್ರದ ಮೇರೆಗೆ ಅನುಮೋದಿಸಲಾಗಿದೆ' ಎಂದು ಉಲ್ಲೇಖ ಮಾಡಿದ್ದಾರೆ "ಎಂದು ಹೇಳಿದರು.