20 ವರ್ಷ ಕಳೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ; ಶೆಟ್ಟರ್
ರಾಮನಗರ, ನವೆಂಬರ್ 19; " ಕಾಂಗ್ರೆಸ್ ಪಕ್ಷ ಎಲ್ಲಿದೆ. ಕಾಂಗ್ರೆಸ್ ಪರಿಸ್ಥಿತಿ ಮೊದಲು ಚೆನ್ನಾಗಿತ್ತು. ಆದರೆ ಈಗ ತುಂಬಾ ಕೆಳ ಮಟ್ಟದಲ್ಲಿದೆ. ಈಗ ಎಲ್ಲ ಕಡೆ ಅಧಿಕಾರ ಕಳೆದುಕೊಂಡಿದೆ" ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಶುಕ್ರವಾರ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಜನ ಸ್ವರಾಜ್ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಇನ್ನು 20 ವರ್ಷ ಕಳೆದರೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ" ಎಂದರು.
"ಸಿಎಂ ಆಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. ಆದರೆ ಉತ್ತರ ಕರ್ನಾಟಕಕ್ಕೆ ಬಂದು ಗೆದ್ದರು. ಕಾಂಗ್ರೆಸ್ ಮುಳುಗುವ ಹಡಗಾಗಿದ್ದು, ಕಾಂಗ್ರೆಸ್ ಪಕ್ಷ ನಶಿಸಿ ಹೋಗುತ್ತಿದೆ" ಎಂದು ಜಗದೀಶ್ ಶೆಟ್ಟರ್ ಹೇಳಿದರು.
"ಹಾಗೆಯೇ ಕೇಂದ್ರದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದು ಅದು ಕೇವಲ ನರೇಂದ್ರ ಮೋದಿ ಸರ್ಕಾರ. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಹಲವು ಕೆಲಸಗಳಾಗಿವೆ. ಕೋವಿಡ್ ಸಮಯದಲ್ಲೂ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡಿಸುತ್ತೇನೆ ಎಂದಿದ್ದರು. ಅದರಂತೆ ದೇಶಾದ್ಯಂತ ಎಲ್ಲರಿಗೂ ಲಿಸಿಕೆ ಸಿಕ್ಕಿದೆ" ಎಂದು ಬಣ್ಣಿಸಿದರು.
ಕರ್ನಾಟಕ ಬಿಜೆಪಿ ವಿಧಾನ ಪರಿಷತ್ ಚುನಾವಣೆಗೆ ಪ್ರಚಾರ ನಡೆಸಲು ಜನ ಸ್ವರಾಜ್ ಯಾತ್ರೆ ನಡೆಸುತ್ತಿದೆ. ಕರ್ನಾಟಕದ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸಚಿವ ಕೆ. ಎಸ್. ಈಶ್ವರಪ್ಪ ನೇತೃತ್ವದ ತಂಡ ಈ ಯಾತ್ರೆ ಕೈಗೊಂಡಿದೆ.
ತಂಡದಲ್ಲಿ ಸಂಸದರು, ಸಚಿವರು, ಶಾಸಕರು, ಬಿಜೆಪಿಯ ಪದಾಧಿಕಾರಿಗಳು ಇದ್ದಾರೆ. 4 ತಂಡ ನವೆಂಬರ್ 19 ರಿಂದ 23ರ ತನಕ ವಿವಿಧ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ. ಪರಿಷತ್ ಚುನಾವಣೆಗೆ ಶುಕ್ರವಾರ ಅಭ್ಯರ್ಥಿ ಘೋಷಣೆ ಮಾಡಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿ. ಎಂ. ನಾರಾಯಣಸ್ವಾಮಿ ಅಭ್ಯರ್ಥಿ. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ.

ಎಷ್ಟು ಜನ ಸದಸ್ಯರು ಪಕ್ಷದಲ್ಲಿದ್ದಾರೆ?
"ಇಡೀ ಜಗತ್ತಿನಲ್ಲಿ ಹೆಚ್ಚಿನ ಸದಸ್ಯರು ಬಿಜೆಪಿಯಲ್ಲಿದ್ದಾರೆ. ಜಗತ್ತಿನಲ್ಲಿ 19 ಕೋಟಿ ಸದಸ್ಯರು ಬಿಜೆಪಿ ಪಕ್ಷದಲ್ಲಿದ್ದಾರೆ. ಡಿ. ಕೆ. ಶಿವಕುಮಾರ್ ಅವರಿಗೆ ನಾನು ಪ್ರಶ್ನೆ ಮಾಡಿದ್ದೆ. ನಿಮ್ಮಲ್ಲಿ ಎಷ್ಟು ಜನ ಸದಸ್ಯರಿದ್ದಾರೆ? ಎಂದು ಬಹಿರಂಗ ಪಡಿಸಿ ಎಂದಿದ್ದೆ. ಮನೆಗೆ ಹೋಗಿ ನರೇಂದ್ರ ಮೋದಿ ಹೆಸರು ಹೇಳಿದರೆ ಜನ ಟೀ ಕೊಟ್ಟು ಸದಸ್ಯರಾಗುತ್ತಾರೆ" ಎಂದು ಶೆಟ್ಟರ್ ಹೇಳಿದರು.

15 ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ
"2023 ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಇಬ್ಬರಿಗೂ ಜಗಳ ಶುರುವಾಗಿದ್ದು, ನಾನು ಮುಖ್ಯಮಂತ್ರಿ ಯಾಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಹಾಗೆಯೇ ವಿಧಾನ ಪರಿಷತ್ತಿನ ಚುನಾವಣೆಯ 25 ಸ್ಥಾನದಲ್ಲಿ15 ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿದೆ" ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲೇ ಯೋಗೀಶ್ವರ್ ಅಸಮಾಧಾನ
ಇದೇ ವೇಳೆ ಮಾಜಿ ಸಚಿವ ಸಿ. ಪಿ. ಯೋಗೀಶ್ವರ್ ಮಾತನಾಡಿ ತಮಗೆ ಸಚಿವ ಸ್ಥಾನ ನಿಡದಿರುವುದಕ್ಕೆ ವೇದಿಕೆಯಲ್ಲೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. "ನಮ್ಮ ಜಿಲ್ಲೆಯಲ್ಲಿ ಘಟಾನುಘಟಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರಿದ್ದಾರೆ. ಇಬ್ಬರು ಕೂಡ ರಾಜ್ಯಾಧ್ಯಕ್ಷರಾಗಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಗೆ ಯಾವುದೇ ಅಧಿಕಾರ ಇಲ್ಲ. ಕಾರ್ಯಕರ್ತರಿಗೆ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಪಕ್ಷ ಬಲವರ್ದನೆ ಮಾಡಬೇಕಾದರೆ ಅಧಿಕಾರದ ಅವಶ್ಯಕತೆ ಇದೆ" ಎಂದು ಹೇಳಿದರು.
Recommended Video

ಅಧಿಕಾರ ಇದ್ದರೆ ಪಕ್ಷ ಸಂಘಟನೆ
"ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಘಟಾನುಘಟಿ ನಾಯಕರೇ ನಮ್ಮ ಪಕ್ಷ ಸೇರಲು ಮುಂದೆ ಬರುತ್ತಿದ್ದಾರೆ. ಅಧಿಕಾರ ಇದ್ದರೆ ಪಕ್ಷ ಸಂಘಟನೆ ಆಗುತ್ತದೆ. ನಮ್ಮದೇ ಸರ್ಕಾರ ಇದ್ದರು ಕೂಡ ಯಾವುದೇ ಕೆಲಸ ಆಗುತ್ತಿಲ್ಲ ಎಂಬ ಅಸಮಾಧಾನ ಇದೆ. ಮುಂದೆ ಒಳ್ಳೆಯ ದಿನಗಳು ಬರುತ್ತದೆ ಎಂಬ ಆಸೆ ಇದೆ" ಎಂದು ಪರೋಕ್ಷವಾಗಿ ಸಚಿವ ಸಿ. ಪಿ. ಯೋಗೀಶ್ವರ್ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ವೇದಿಕೆಯಲ್ಲೇ ಹೇಳಿದರು.












Click it and Unblock the Notifications