ಕನಕಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ಆತ್ಮಹತ್ಯೆ; ಸಿಓಡಿ ತನಿಖೆ
ರಾಮನಗರ, ಮಾರ್ಚ್ 14; ಕೊಲೆ ಪ್ರಕರಣದ ವಿಚಾರಣೆಗಾಗಿ ಪೋಲಿಸ್ ಠಾಣೆಗೆ ಕರೆತಂದಿದ್ದ ಆರೋಪಿ ಠಾಣೆಯಲ್ಲೇ ಪೆನಾಯಿಲ್ ಕುಡಿದು ಸಾವಿಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ತಾಲೂಕಿನ ಸೀಗೆಕೋಟೆ ನಿವಾಸಿ ಭದ್ರಾಚಾರಿ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣದ ವಿಚಾರಣೆಗೆ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಶನಿವಾರ ಸಂಜೆ ಪೆನಾಯಿಲ್ ಕುಡಿದು ಆತ್ಮಹತ್ಯೆ ಯತ್ನಿಸಿದ ಆರೋಪಿಯನ್ನು, ತಕ್ಷಣ ಪೋಲಿಸರು ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾದೆ ಭದ್ರಾಚಾರಿ ಸಾವನ್ನಪ್ಪಿದ್ದಾರೆ. ಸಾವಿಗೆ ಪೊಲೀಸರು ಕಾರಣ ಎಂದು ಮೃತ ವ್ಯಕ್ತಿಯ ಸಂಬಂಧಿಕರು ದೂರಿದ್ದಾರೆ. ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಭದ್ರಾಚಾರಿ ಸಾವಿನ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಲಾಗಿದೆ.

ಘಟನೆ ವಿವರ; ಇತ್ತೀಚೆಗೆ ಕನಕಪುರ ತಾಲೂಕಿನ ಅಳ್ಳಿಮಾರನಹಳ್ಳಿ ಗ್ರಾಮದ ರಾಜಕೀಯ ಮುಖಂಡ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಅಶೋಕ್ ತಂದೆ ನಾಗರಾಜು ಕಾಣೆಯಾಗಿದ್ದರು. ಮನೆಯಿಂದ ಹೊರ ಹೋದವರು ವಾಪಸ್ ಆಗಿರಲಿಲ್ಲ. ಮಲೆ ಮಹದೇಶ್ವರ ಬೆಟ್ಟದ ಜಾತ್ರೆಗೆ ಹೋಗಿರಬಹುದು ಎಂದು ಕುಟುಂಬದವರು ಶಂಕಿಸಿದ್ದರು.
ಕಾಣೆಯಾದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಗರಾಜು ಅವರ ಜೊತೆ ಕೊನೆಯದಾಗಿ ಇದ್ದ ಭದ್ರಾಚಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿ ಮೃತದೇಹವನ್ನು ಶೀಗೆಕೋಟೆ ಹೊಸ ಕೆರೆಯಲ್ಲಿ ಕಲ್ಲುಕಟ್ಟಿ ಹಾಕಿರುವುದು ಬೆಳಕಿಗೆ ಬಂದಿತ್ತು.
ಕೊಲೆಯಾದ ನಾಗರಾಜು ಮತ್ತು ಆತ್ಮಹತ್ಯೆಗೆ ಶರಣಾದ ಭದ್ರಾಚಾರಿ ನಡುವಿನ ಹಣದ ವ್ಯವಹಾರದಲ್ಲಿ ಕೊಲೆಯಾಗಿರುವುದು ಪೋಲಿಸರಿಗೆ ದೃಢವಾದ ಹಿನ್ನಲೆಯಲ್ಲಿ ಪೋಲಿಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದರು.
ಪೊಲೀಸ್ ಠಾಣೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ಭದ್ರಾಚಾರಿ ಪೆನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಹಾರೋಹಳ್ಳಿಯ ದಯಾನಂದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದಾನೆ.
ಸಿಒಡಿ ತನಿಖೆ; ಭದ್ರಾಚಾರಿ ಸಾವಿನ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಲಾಗಿದೆ. ಠಾಣೆಯಲ್ಲೇ ಪೆನಾಯಿಲ್ ಕುಡಿದಿದ್ದಾನೆಂಬ ಆರೋಪದ ಮೇರೆಗೆ ಕನಕಪುರ ಗ್ರಾಮಾಂತರ ಠಾಣೆ ಪಿಎಸ್ಐ, ಎಎಸ್ಐ ಹಾಗೂ ಹೆಡ್ ಕಾನ್ಸ್ಟೇಬಲ್ ಅಮಾನತು ಮಾಡಲಾಗಿದೆ.
"ಸಾವಿನ ಪ್ರಕರಣ ಗಂಭೀರವಾಗಿರುವುದರಿಂದ ಸಿಓಡಿ ತನಿಖೆಗೆ ವಹಿಸಲಾಗಿದೆ" ಎಂದು ರಾಮನಗರ ಎಸ್ಪಿ ಗಿರೀಶ್ ಹೇಳಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications