ರಾಮನಗರ ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳು
ರಾಮನಗರ, ಜನವರಿ 03: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಹಂತದ ನವಕರ್ನಾಟಕ ನಿರ್ಮಾಣ ಯಾತ್ರೆ ಇಂದು ಪ್ರಾರಂಭವಾಗಿದೆ. ಇಂದು ಅವರು ರಾಮನಗರ ಜಿಲ್ಲೆಗೆ ಭೇಟಿ ನೀಡಿದ್ದಾರೆ.
ರಾಮನಗರದ ಚೆನ್ನಪಟ್ಟಣ ಮತ್ತು ಮಾಗಡಿಯಲ್ಲಿ ಕೋಟ್ಯಾಂತರ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ, ಜೊತೆಗೆ ಹಲವು ಯೋಜನೆಗಳ ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಿದ್ದಾರೆ.
ಶಾಸಕ ಯೋಗೀಶ್ವರ್ ಸುಳ್ಳು ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಈ ವರೆಗಿನ ತಮ್ಮ ನವಕರ್ನಾಟಕ ನಿರ್ಮಾಣ ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸಿದ್ದರಾಮಯ್ಯ ಅವರು 'ಕಳೆದ 15 ದಿನಗಳಿಂದ ಜನತೆ ತೋರಿದ ಪ್ರೀತಿ ವಿಶ್ವಾಸ ನಮ್ಮ ನವ ಕರ್ನಾಟಕ ನಿರ್ಮಾಣ ಯಾತ್ರೆಗೆ ಮತ್ತಷ್ಟು ಸ್ಪೂರ್ತಿ ನೀಡಿದ್ದು, ಇಂದು ನವ ರಾಮನಗರ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇನೆ. ಬನ್ನಿ, ಭಾಗವಹಿಸಿ, ಒಂದಾಗಿ ಹೊಸ ನಾಡು ಕಟ್ಟೋಣ' ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಅವರಿಂದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ
ರಾಮನಗರ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ ನೀಡಿರುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಮನಗರ ಜಿಲ್ಲೆಗೆ ನೀಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ...
174 ಕೆರೆಗಳ ಪುನಶ್ವೇತನ
ಕನಕಪುರ ತಾಲ್ಲೂಕಿನಲ್ಲಿ 19 ಸಾವಿರ ರೈತರ ಹೊಲಗಳಲ್ಲಿ ಟ್ರಾನ್ಸ್ಫಾರ್ಮ್ ಗಳನ್ನು ಸ್ಥಾಪಿಸಿಕೊಡಲಾಗಿದ್ದು, ಅದಕ್ಕಾಗಿ 150 ಕೋಟಿ ರೂ.ಗಳನ್ನು ವೆಚ್ಚಮಾಡಲಾಗಿದೆ. ಈ ಯೋಜನೆಯನ್ನು ರಾಮನಗರ ಹಾಗೂ ಮಾಗಡಿ ಮತ್ತು ಚನ್ನಪಟ್ಟಣಗಳಿಗೂ 355 ಕೋಟಿ ರೂ.ಗಳ ವೆಚ್ಚದಲ್ಲಿ ವಿಸ್ತರಿಸಲಾಗಿದೆ. ಮುಖ್ಯಮಂತ್ರಿಗಳ 21 ಅಂಶಗಳ ಅನುಷ್ಠಾನ ಕಾರ್ಯಕ್ರಮದಲ್ಲಿ ರಾಮನಗರ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಕೃಷಿ ಹೊಂಡ, ಚೆಕ್ಡ್ಯಾಂ, ದನದಕೊಟ್ಟಿಗೆ ನಿರ್ಮಾಣದಲ್ಲಿ ಕ್ರಮವಾಗಿ 15942 ಕೃಷಿ ಹೊಂಡಗಳು, 174 ಕೆರೆಯ ಪುನಶ್ಚೇತನ ಕಾಮಗಾರಿಗಳು, 4600 ಚೆಕ್ಡ್ಯಾಂಗಳನ್ನು ನಿರ್ಮಿಸಲಾಗಿದೆ.
ತ್ಯಾಜ್ಯದಿಂದ 10 ಕೆ.ವಿ ವಿದ್ಯುತ್ ಉತ್ಪಾದನೆ
ಬಸವ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ ಇದೂವರೆಗೆ 24,960 ಮನೆಗಳನ್ನು ನಿರ್ಮಿಸಿಕೊಟ್ಟು ಶೇ. 90 ರಷ್ಟು ಪ್ರಗತಿ ಸಾಧಿಸಲಾಗಿದೆ.
ರಾಮನಗರ ನಗರ ಸಭೆ ವ್ಯಾಪ್ತಿಯಲ್ಲಿ ಬಯೋ ಗ್ಯಾಸ್ ಘಟಕಗಳನ್ನು ನಿರ್ಮಿಸಲಾಗಿದ್ದು, ಮನೆ, ಹೋಟೇಲ್, ಕಲ್ಯಾಣ ಮಂಟಪ ಸೇರಿದಂತೆ ಇತರೆಡೆ ದೊರೆಯುವ ಹಸಿ ತ್ಯಾಜವ್ಯವನ್ನು ಬಳಸಿ, ಅದನ್ನು ಮೀಥೇನ್ ಗ್ಯಾಸ್ ಆಗಿ ಪರಿವರ್ತಿಸಿ, ಪ್ರತಿ ನಿತ್ಯ 10 ಕೆ.ವಿ. ವಿದ್ಯುತ್ ಉತ್ಪಾದಿಸಲಾಗುತ್ತಿದೆ.
|
ನವೋದಯ ಶಾಲೆಗೆ 30ಎಕರೆ ಭೂಮಿ
ರಾಮನಗರ ಟೌನ್ನಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ 1.92 ಕೋಟಿ ರೂ.ಗಳ ವೆಚ್ಚದಲ್ಲಿ ಹಾಗೂ ಕನಕಪುರ ಟೌನ್ನಲ್ಲಿರುವ ಕುರುಪೇಟೆ ರುದ್ರಭೂಮಿಯಲ್ಲಿ 2.28 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ವಿದ್ಯುತ್ ಚಿತಾಗಾರ ನಿರ್ಮಾಣವಾಗುತ್ತಿದೆ. ಕನಕಪುರ ಬಳಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಜವಹಾರ್ ನವೋದಯ ವಿದ್ಯಾಶಾಲೆಗೆ ಕನಕಪುರದ ಬರಡನಹಳ್ಳಿ ಗ್ರಾಮದಲ್ಲಿ 30 ಎಕರೆ ಸರ್ಕಾರಿ ಜಮೀನನ್ನು ಉಚಿತವಾಗಿ ಮಂಜೂರು ಮಾಡಲಾಗಿದೆ.
4.4 ಲಕ್ಷ ಕೂಲಿ ಕಾರ್ಮಿಕರಿಗೆ ಲಾಭ
ಕನಕಪುರದಲ್ಲಿ 3.50 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಈಗಾಗಲೇ ನಿರ್ಮಿಸಲಾಗಿದ್ದು ರಾಮನಗರದ ಅರ್ಚಕರಹಳ್ಳಿ ಬಳಿ 10 ಎಕರೆ ಜಾಗದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣದ ಯೋಜನೆಯನ್ನು ರೂಪಿಸಲಾಗಿದೆ. 2013-14 ರಿಂದ ಇದೂವರೆಗೂ 783.56 ಕೋಟಿ ರೂ.ಗಳನ್ನು ವೆಚ್ಚಮಾಡಿ, ಒಟ್ಟು 1,17,979 ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ಒಟ್ಟು 8,175 ಸಮುದಾಯ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆಸ್ತಿಗಳನ್ನು ಸೃಜಿಸಲಾಗಿದೆ. ಯೋಜನೆಯಡಿ ಜಿಲ್ಲೆಯ 1.59 ಲಕ್ಷ ಕುಟುಂಬಗಳ ನೋಂದಣಿಯಾಗಿದ್ದು, 4.14 ಲಕ್ಷ ಕೂಲಿ ಕಾರ್ಮಿಕರು ಈ ಯೋಜನೆಯಿಂದ ಲಾಭ ಪಡೆದಿದ್ದಾರೆ.
1,68,966 ಕುಟುಂಬಗಳಿಗೆ ಶೌಚಾಲಯ
ರಾಮನಗರ ಇದೀಗ ಬಯಲು ಬಯಲು ಶೌಚ ಮುಕ್ತ ಜಿಲ್ಲೆ ಎಂದು ಅಕ್ಟೋಬರ್ 2 ರಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಜಿಲ್ಲೆಯಲ್ಲಿನ 1,68,966 ಕುಟುಂಬಗಳಿಗೆ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಇದೇ ಅಕ್ಟೋಬರ್ 02ರ ಅಂತ್ಯಕ್ಕೆ ಶೆ.100ರಷ್ಟು ಪ್ರಗತಿ ಸಾಧಿಸಲಾಗಿದೆ.