ಕುಮಾರಸ್ವಾಮಿ ರಾಮ, ರೇವಣ್ಣ ಆಂಜನೇಯ: ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ
ರಾಮನಗರ, ಸೆ 6: ತ್ರೇತಾ ಯುಗದ ಘಟನೆಯನ್ನು ಉಲ್ಲೇಖಿಸಿ, ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಶ್ರೀರಾಮಚಂದ್ರನಿಗೂ, ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣನವರನ್ನು ಆಂಜನೇಯನಿಗೂ ಹೋಲಿಸಿದ್ದಾರೆ.
ನಗರದಲ್ಲಿ ವಿವಿಧ ಕಾಮಗಾರಿ, ಅಭಿವೃದ್ದಿ ಕೆಲಸಗಳ ಶಂಕುಸ್ಥಾಪನೆಯ ನಂತರ ಮಾತನಾಡುತ್ತಿದ್ದ ಜಿಟಿಡಿ, ರಾಮನಗರದ ಜನತೆ ಸೀತಾದೇವಿ (ಅನಿತಾ ಕುಮಾರಸ್ವಾಮಿ) ಅವರನ್ನು ಈಗ ಕರೆತರಬೇಕಾಗಿದೆ. ರಾಮ, ಅಂಜನೇಯನ ಜೊತೆ ಸೀತೆಯನ್ನೂ ಕರೆತಂದರೆ ರಾಮನಗರ ಒಂದೇ ಏಕೆ, ಇಡೀ ರಾಜ್ಯ ರಾಮ ರಾಜ್ಯವಾಗುತ್ತದೆ ಎಂದಿದ್ದಾರೆ.
ಕುಮಾರಣ್ಣ ರಾಮನಿದ್ದ ಹಾಗೇ, ನಾಡಿನ ಜನ ಶ್ರೀರಾಮನನ್ನು ಭಜಿಸುತ್ತಿದ್ದರು. ಕುಮಾರಣ್ಣ ಶ್ರೀರಾಮನ ಪಾತ್ರ ಮಾಡಿದರೆ, ರೇವಣ್ಣ ಆಂಜನೇಯನ ಪಾತ್ರ ಮಾಡುತ್ತಾರೆ. ಲಕ್ಷ್ಮಣ ಮೂರ್ಛೆ ಹೋದಾಗ, ಮೇರು ಪರ್ವತಕ್ಕೆ ಹೋಗಿ ಆಂಜನೇಯ ಸಂಜೀವಿನಿಯನ್ನು ತೆಗೆದುಕೊಂಡು ಬರುಲು ಹೋಗುತ್ತಾನೆ. ಸಂಜೀವಿನಿ ಸಿಗದೇ ಇದ್ದಾಗ, ಪರ್ವತವನ್ನೇ ಆಂಜನೇಯ ತೆಗೆದುಕೊಂಡು ಬರುತ್ತಾನೆ.

ಅದೇ ರೀತಿ, ರೇವಣ್ಣ ಏನೇ ಕೆಲಸ ಇದ್ದರೂ ಅದು ಮುಗಿಯುವ ತನಕ ಅವರಿಗೆ ಸಮಾಧಾನವಿರುವುದಿಲ್ಲ. ಹಾಗೆಯೇ, ರಾಮನ ಹಾಗೇ ಇರುವ ಕುಮಾರಸ್ವಾಮಿಯವರ ಈ ರಾಜಕೀಯ ಕರ್ಮಭೂಮಿಗೆ ಸೀತಾದೇವಿಯನ್ನು ಕರೆತರಬೇಕಾಗಿದೆ ಎಂದು ಅನಿತಾ ಕುಮಾರಸ್ವಾಮಿಯವರ ಹೆಸರನ್ನು ಉಲ್ಲೇಖಿಸದೇ, ಜಿ ಟಿ ದೇವೇಗೌಡ ಹೇಳಿದ್ದಾರೆ.
ಒಂದು ಕಡೆ ಆಂಜನೇಯ, ಇನ್ನೊಂದು ಕಡೆ ಶ್ರೀರಾಮ, ಜೊತೆಗೆ ಸೀತಾಮಾತೆಯನ್ನು ತಂದಾಗ ರಾಮನಗರದ ಜನತೆಗೆ ಅತ್ಯಂತ ಸಂತೋಷವಾಗುತ್ತದೆ. ಆ ಕೆಲಸವನ್ನು ಮಾಡಿ, ಇನ್ನೂ ಹೆಚ್ಚು ರಾಮನಗರ ಅಭಿವೃದ್ದಿಯಾಗಲಿ, ಜನರ ಬದುಕು ಹಸನಾಗಲಿ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಜಿ ಟಿ ದೇವೇಗೌಡರ ಹೇಳಿಕೆ ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ, ರಾಮನಗರದಿಂದ ಸ್ಪರ್ಧಿಸುವುದು ಖಚಿತ ಎನ್ನುವಂತಿತ್ತು.
ರಾಮನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಲೋಕಸಭಾ ಸದಸ್ಯ ಡಿ.ಕೆ. ಸುರೇಶ್, ಪ್ರವಾಸೋದ್ಯಮ ಸಚಿವ ಸಾ. ರಾ. ಮಹೇಶ್ ಮೊದಲಾದವರು ಉಪಸ್ಥಿತರಿದ್ದರು.
ಕೊನೇ ಮಾತು: ಜಿಟಿಡಿಯವರೇ, ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯನ ಕಥೆಯನ್ನು ಏನೋ ಉಲ್ಲೇಖಿಸಿದ್ರಿ, ನೀವು ಹೇಳಿದ ಈ ರಾಮಾಯಣದಲ್ಲಿ 'ರಾವಣ' ಯಾರು ಎಂದು ಹೇಳೇ ಇಲ್ವೆ?












Click it and Unblock the Notifications