ಚುನಾವಣೆಯಲ್ಲಿ ಜಾತಿಯೇ ಮಹತ್ವ ಪಡೆಯುತ್ತಿದೆ: ಡಿಕೆ ಸುರೇಶ್ ಆತಂಕ
ರಾಮನಗರ, ಜೂನ್ 16: ಇತ್ತೀಚಿನ ಚುನಾವಣೆಗಳಲ್ಲಿ ಜಾತಿ, ಧರ್ಮವೇ ಮುಖ್ಯವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಮತದಾರ ಯಾವುದೇ ಬೆಲೆ ಕೊಡದಿರುವುದನ್ನು ನೋಡಿದರೆ ರಾಜಕಾರಣ ಮಾಡಲು ಯಾವ ಮಾನದಂಡ ಮುಖ್ಯ ಎಂಬ ಪ್ರಶ್ನೆ ಚುನಾವಣಾ ಫಲಿತಾಂಶದ ನಂತರ ಸಾವಿರ ಬಾರಿ ನನ್ನ ಮನಸ್ಸಿನಲ್ಲಿ ಉದ್ಭವಿಸಿದೆ ಎಂದು ಸಂಸದ ಡಿ.ಕೆ.ಸುರೇಶ್ ಆತ್ಮಾವಲೋಕನ ಮಾಡಿಕೊಂಡರು.
ಮಾಗಡಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಸೋಲು ಅನುಭವಿಸಿದ ನಂತರದಲ್ಲಿ ಮಾಗಡಿಯ ವಿದ್ಯಾ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಗೆಲ್ಲಲು ರಾಜಕಾರಣಿಗೆ ಯಾವ ಮಾನದಂಡ ಇರಬೇಕು ಎಂಬುದು ಇನ್ನೂ ಸಹ ನನಗೆ ಅರ್ಥವಾಗುತ್ತಿಲ್ಲ. ಕಳೆದ 6 ತಿಂಗಳ ಅವಧಿಯಲ್ಲಿ ಎಚ್.ಸಿ.ಬಾಲಕೃಷ್ಣ ಸುಮಾರು 300ಕೋಟಿಗೆ ಅಧಿಕ ಅನುದಾನ ತಂದಿದ್ದಾರೆ. ಹಗಲು ರಾತ್ರಿ ಎನ್ನದೇ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು. ಅದರೆ ಚುನಾವಣೆಯಲ್ಲಿ ಬಾಲಕೃಷ್ಣ ಯಾರೂ ಊಹಿಸದ ರೀತಿ 50 ಸಾವಿರಕ್ಕೂ ಅಧಿಕ ಮತಗಳಿಂದ ಸೋತಿದ್ದಾರೆ.

ಎಲ್ಲವನ್ನು ಮರೆತು ಮಾಗಡಿ ಅಭಿವೃದ್ಧಿ ವಿಚಾರವಾಗಿ ನೂತನ ಶಾಸಕ ಎ.ಮಂಜು ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ಆದರೆ ದ್ವೇಷ ರಾಜಕಾರಣ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎ.ಮಂಜು ಶಾಸಕರಾದ ಹುರುಪಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಯಾವುದೇ ಆತಂಕ ಪಡುವುದು ಬೇಡ, ನಿಮ್ಮ ರಕ್ಷಣೆಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.
ಇನ್ನು ಪರಾಜಿತ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಇಂದಿನ ದಿನಗಳಲ್ಲಿ ರಾಜಕೀಯ ಮಾಡಲು ಯೋಗ್ಯತೆಗಿಂತ, ಯೋಗವಿರಬೇಕು. ಮನೆಯಿಂದ ಆಚೆ ಬಾರದವರು ಸಹ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಚುನಾವಣೆಯಲ್ಲಿ ಗೆದ್ದು ಶಾಸಕರಾಗುತ್ತಿದ್ದಾರೆ.

ಅದರೆ ತಾವು ಯಾವುದೇ ಸುಳ್ಳು ಆಶ್ವಾಸನೆಗಳನ್ನು ನೀಡದೇ ಅಭಿವೃದ್ಧಿಯೊಂದೇ ನನ್ನ ಗುರಿ ಎಂದು ೧೫ ವರ್ಷಗಳಿಂದ ನಿರಂತರವಾಗಿ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇನೆ. ರಾಜಕಾರಣದಲ್ಲಿ ಏರು ಪೇರು ಇರುತ್ತದೆ, ಸೋತ್ತಿದ್ದೇನೆ ಎಂದು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ. ಮುಂದಿನ ಲೋಕ ಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದಲೇ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಕಾರ್ಯಕರ್ತರನ್ನು ಸಂಘಟಿಸಿ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸುತ್ತೇನೆ ಎಂದು ತಿಳಿಸಿದರು.












Click it and Unblock the Notifications