ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣಕ್ಕೆ ಬಿಜೆಪಿ ಅಡ್ಡಗಾಲು: ಡಿಕೆಶಿ
ರಾಮನಗರ, ಮಾರ್ಚ್ 13: "ಬಿಜೆಪಿಯವರು ರಾಜೀವ್ ಗಾಂಧಿ ಆರೋಗ್ಯ ವಿವಿ ವಿಚಾರವಾಗಿ ಗವರ್ನರ್ ಬಳಿ ದೂರು ನೀಡಿದ್ದಾರೆ. ಅದಕ್ಕೆ ಹಣ ಬಿಡುಗಡೆ ಮಾಡದಂತೆ ರಾಜ್ಯಪಾಲರಿಗೆ ತಿಳಿಸಿದ್ದಾರೆ. ಈ ಬಗ್ಗೆ ನಾನು ಹಾಗೂ ಸಚಿವ ಶರಣ ಪ್ರಕಾಶ್ ಪಾಟೀಲರು ಗವರ್ನರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಹಣ ಬಿಡುಗಡೆಗೆ ಕಾಯುತ್ತಿದ್ದೇವೆ. ಹಣ ಬಿಡುಗಡೆ ಆಗುತ್ತಿದ್ದಂತೆ ಕೆಲಸ ಶುರು ಮಾಡುತ್ತೇವೆ," ಎಂದು ಇಂಧನ ಸಚಿವ ಡಿ. ಕೆ. ಶಿವಕುಮಾರ್ ತಿಳಿಸಿದರು.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ರಾಮನಗರದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಹಾಗೂ ಕೆಂಪೇಗೌಡ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಸಿದ ಬಳಿಕ ಅವರು ಮಾತನಾಡಿದರು.
ಚುನಾವಣೆ ಫಂಡ್ಗಾಗಿ ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದ ಅವರು, "ಕುಮಾರಣ್ಣನವರು ಏನು ಬೇಕಾದರೂ ಮಾತನಾಡಬಹುದು. ದೊಡ್ಡವರು ಮಾತನಾಡುತ್ತಾರೆ ನಾವು ಚಿಕ್ಕವರು ಕೇಳಿಕೊಂಡು ಇರೋಣ. ಇಲ್ಲದಿದ್ದಲ್ಲಿ ಅವರಿಂದ ಕಲಿತುಕೊಳ್ಳೋಣ," ಎಂದರು.

ಇದೇ ವೇಳೆ ಬಿ.ಎಸ್ ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ಭೇಟಿಯಾಗಿ ಮಾತುಕತೆ ನಡೆಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿಯವರು, "ಶಿವಶಂಕರಪ್ಪ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬುದು ಕೇವಲ ಊಹಾಪೋಹಾ ಅಷ್ಟೇ. ನಾನು ಹಾಗೂ ಕುಮಾರಸ್ವಾಮಿ ಕೂಡಾ ಮಠಗಳಲ್ಲಿ ಭೇಟಿಯಾಗ್ತೇವೆ. ನಮ್ಮ ಸಮಾಜದ ಸಮಾರಂಭಗಳು ಅಲ್ಲದೇ ಇಂದಿನ ಕಾರ್ಯಕ್ರಮದಲ್ಲೂ ಸಹ ಬಂದಿದ್ದರೆ ಒಟ್ಟಿಗೆ ಸೇರುತ್ತಿದ್ದೆವು," ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು, "ಚನ್ನಪಟ್ಟಣ ಕ್ಷೇತ್ರದ ಟಿಕೆಟ್ಗಾಗಿ ಆಕಾಂಕ್ಷಿಗಳು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ ಪಕ್ಷ ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ," ಎಂದು ತಮ್ಮ ಬಾವ ಶರತ್ ಚಂದ್ರ ಸ್ಪರ್ಧೆ ವಿಚಾರವಾಗಿ ಇಂಧನ ಸಚಿವ ಡಿ. ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.












Click it and Unblock the Notifications