ಏಕಾಏಕಿ ಬಾಗಿಲು ಮುಚ್ಚಿದ ಜಪಾನ್ ಮೂಲದ ಕಂಪನಿ: ನೌಕರರಿಗೆ ಶಾಕ್
ರಾಮನಗರ ನವೆಂಬರ್8: ಬಿಡದಿ ಕೈಗಾರಿಕಾ ವಲಯದ ಪ್ರತಿಷ್ಠಿತ ಕಂಪನಿ ನೌಕರರಿಗೆ ಯಾವುದೇ ಮುನ್ಸೂಚನೆ ನೀಡದೆ ಬಾಗಿಲು ಮುಚ್ಚಿದೆ. ಜಪಾನ್ ಮೂಲದ ಎಮ್ಎನ್ಸಿ ಕಂಪನಿ ರಾತ್ರೋರಾತ್ರಿ ಕಂಪನಿ ಮುಚ್ಚಿದ್ದು, ಕೈಯಲ್ಲಿದ್ದ ಕೆಲಸ ಕಳೆದುಕೊಂಡ ನೌಕರರು ಕಂಗಾಲಾಗಿದ್ದಾರೆ.
ಬಿಡದಿಯ ಕೈಗಾರಿಕಾ ವಲಯದಲ್ಲಿ ಕಳೆದ 9 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ, ತನ್ನ ನೌಕರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ದಿಢೀರ್ ಬಾಗಿಲು ಬಂದ್ ಮಾಡಿದೆ.
ಚನ್ನಪಟ್ಟಣದ ಶ್ರೀನಿವಾಸ್ ನಾಟಿ ವೈದ್ಯ ಪದ್ದತಿ ಕಾಶ್ಮೀರದವರೆಗೂ ಪ್ರಸಿದ್ದಿ, ಇಲ್ಲಿದೆ ಮಾಹಿತಿ
ಕಳೆದ ಶುಕ್ರವಾರ (ನವೆಂಬರ್ 3) ಸಂಜೆ ನೌಕರರು ಕೆಲಸ ಮುಗಿಸಿ ಮನೆಗೆ ತೆರಳಿದ್ದಾರೆ. ಸೋಮವಾರ ಎಂದಿನಂತೆ ಕಾರ್ಮಿಕರು ಕೆಲಸಕ್ಕೆ ಬಂದಾಗ ಕಂಪನಿ ಲಾಕ್ ಔಟ್ ಘೋಷಣೆ ಮಾಡಿರುವುದು ನೌಕರರಿಗೆ ತಿಳಿದು ಬಂದಿದೆ.
ಮಿಟ್ಸುಬಿಷಿ ಕಾರ್ಖಾನೆ ಬೆಮೆಲ್ ಹಾಗೂ ನಮ್ಮ ಮೆಟ್ರೋ ಯೋಜನೆಗಳಿಗೆ ಅಗತ್ಯವಾದ ಮೆಟ್ರೋ ಟ್ರ್ಯಾಕ್ಷನ್ ಮೋಟಾರ್ ಹಾಗೂ ಕಂಟ್ರೋಲ್ ಪ್ಯಾನಲ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸರಬರಾಜು ಮಾಡುತ್ತಿತ್ತು. ಜಪಾನ್ ಮೂಲದ ಮಿಟ್ಸುಬಿಷಿ ಎಲೆಕ್ಟ್ರಿಕ್ ಕಂಪನಿಯಲ್ಲಿ ಸುಮಾರು 54 ಮಂದಿ ಖಾಯಂ ನೌಕರರು ಕೆಲಸ ಮಾಡುತ್ತಿದ್ದರು. ನೌಕರರ ಸರಾಸರಿ ವೇತನ 25,000 ರೂಪಾಯಿಂದ 30,000 ರೂಪಾಯಿ ಇದೆ. ಕಂಪನಿಯ ಏಕಾಏಕಿ ಈ ನಿರ್ಧಾರದಿಂದ ಕೆಲಸ ಕಳೆದುಕೊಂಡು ನೌಕರರ ಬದುಕು ಅತಂತ್ರವಾಗಿದೆ.
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ 54 ಕಾರ್ಮಿಕರ ಖಾತೆಗೆ 4 ಲಕ್ಷ ರೂಪಾಯಿಗಳನ್ನು ಕಂಪನಿ ಪಾವತಿಸಿದೆ. ಇದನ್ನು ನೋಡಿದ ನೌಕರರು ಕಂಪನಿಯ ಎಚ್.ಆರ್ ಅವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಎಚ್.ಆರ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ಇದ್ದ ಕಾರಣ ಸೋಮವಾರ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಕಂಪನಿಯ ಭದ್ರತಾ ಸಿಬ್ಬಂದಿ ಕಂಪನಿ ಒಳಗೆ ಹೋಗುವಂತಿಲ್ಲ ಎಂದು ತಿಳಿಸಿದ್ದಾರೆ. ಸೋಮವಾರ ಕಂಪನಿಯ ಬಳಿ ಬಂದ ಕಾರ್ಮಿಕರಿಗೆ, ಕಂಪನಿಯ ಆಡಳಿತ ಮಂಡಳಿ, ಕೆಲವು ಕಾರಣಾಂತರಗಳಿಂದ ಕಾರ್ಖಾನೆಯನ್ನು ಮುಚ್ಚಲಾಗಿದೆ ಹಾಗೂ ಹಾಗಾಗಿ ನಿಮಗೆ ಕಂಪನಿ ಕಡೆಯಿಂದ ಬರಬೇಕಿದ್ದ ಹಣವನ್ನು ಈಗಾಗಲೇ ನಿಮ್ಮ ನಿಮ್ಮ ಖಾತೆಗಳಿಗೆ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಈ ಬಗ್ಗೆ ಕಂಪನಿಯ ಕಾರ್ಮಿಕ ಮುಖಂಡ ಹರೀಶ್ ಮಾತನಾಡಿ "ನಾನು ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದಿಢೀರ್ ಕಂಪನಿಯ ಆಡಳಿತ ಮಂಡಳಿಯ ನಿರ್ಧಾರದಿಂದ ಕಾರ್ಮಿಕರ ಮನಸ್ಸಿಗೆ ತುಂಬಾ ನೋವಾಗಿದೆ. ಅಲ್ಲದೇ ಕಾರ್ಖಾನೆ ಲಾಕ್ ಔಟ್ ನಿರ್ಧಾರಕ್ಕೆ ನಿಖರ ಕಾರಣ ತಿಳಿಸಿಲ್ಲ. ಕಳೆದ 9 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಂಪನಿ ಬಾಗಿಲು ಬಂದ್ ಮಾಡಿರುವುದು ಕಾರ್ಮಿಕರಿಗೆ ಅಚ್ಚರಿ ತಂದಿದೆ. ಹೀಗಾಗಿ ಪರಿಣಿತರೊಂದಿಗೆ ಚರ್ಚೆ ಮಾಡುತ್ತಿದ್ದು, ಕಾನೂನಾತ್ಮಕವಾಗಿ ನ್ಯಾಯ ಕೇಳುತ್ತೇವೆ" ಎಂದು ಹೇಳಿದ್ದಾರೆ.