Bengaluru-Mysuru expressway: ಎಕ್ಸ್ಪ್ರೆಸ್ ವೇ ಉದ್ಘಾಟನೆ ಬಿಜೆಪಿ ಕಾರ್ಯಕ್ರಮನಾ? ಡಿ.ಕೆ.ಸುರೇಶ್ ಪ್ರಶ್ನೆ
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಉದ್ಘಾಟನೆ ಬಿಜೆಪಿ ಸರ್ಕಾರದ ಕಾರ್ಯಕ್ರಮನಾ? ಎಂದು ಡಿ.ಕೆ.ಸುರೇಶ್ ಪ್ರಶ್ನಿಸಿದ್ದೇಕೆ. ಇದರ ಹಿಂದಿನ ಉದ್ದೇಶವೇನು ಎಂದು ಇಲ್ಲಿ ತಿಳಿಯಿರಿ.
ರಾಮನಗರ, ಮಾರ್ಚ್, 08: ಬಿಜೆಪಿಯವರಿಗೆ ಸಂವಿಧಾನದದ ಬಗ್ಗೆ ಗೌರವ ಇಲ್ಲ. ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಹೈವೇ ಉದ್ಘಾಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಧಿಕೃತ ಆಹ್ವಾನವೂ ಬಂದಿಲ್ಲ. ಎಕ್ಸ್ಪ್ರೆಸ್ ವೇ ಉದ್ಘಾಟನೆ ಬಿಜೆಪಿ ಸರ್ಕಾರದ ಕಾರ್ಯಕ್ರಮನಾ? ಎಂದು ಪ್ರಶ್ನಿಸುವ ಮೂಲಕ ಸಂಸದ ಡಿ.ಕೆ.ಸುರೇಶ್ ಕನಕಪುರದಲ್ಲಿ ವಾಗ್ದಾಳಿ ನಡೆಸಿದರು.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಯನ್ನು ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುತ್ತಿರುವ ಬಗ್ಗೆ ಕನಕಪುರದಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಸುರೇಶ್, ನನಗೆ ಅಧಿಕೃತ ಆಹ್ವಾನ ಇನ್ನೂ ಬಂದಿಲ್ಲ. ಬಿಜೆಪಿಗೆ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವ ಇಲ್ಲ. ಎಲ್ಲವನ್ನೂ ನಾವೇ ಮಾಡಿದ್ದು ಅನ್ನುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.
Bengaluru-Mysuru Expressway: ಉದ್ಘಾಟನೆಗೂ ಮುನ್ನ ಸಿದ್ದರಾಮಯ್ಯ ಪರಿಶೀಲನೆ- ಹೆಚ್ಚಿದ ಕುತೂಹಲ, ದಿನಾಂಕ, ಮಾಹಿತಿ ತಿಳಿಯಿರಿ
ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕೆ ಎಲ್ಲರಿಂದಲೂ ಸಹಕಾರ ಸಿಕ್ಕಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದ ಸಮಯದಲ್ಲಿ ಭೂ ಸ್ವಾಧೀನ ಕಾಯ್ದೆ ಜಾರಿ ಮಾಡಿಲ್ಲ ಅಂದಿದ್ದರೆ ಇವರು ರಸ್ತೆ ಮಾಡುವುದಕ್ಕೆ ಆಗುತ್ತಿರಲಿಲ್ಲ. ಸಿದ್ದರಾಮಯ್ಯನವರ ಕಾಲದಲ್ಲಿ ರಸ್ತೆಗೆ ಸಾಕಷ್ಟು ಸಹಕಾರ ನೀಡಲಾಗಿದೆ. ಹೀಗೆ ಹೆದ್ದಾರಿ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಡಿ.ಕೆ.ಸುರೇಶ್ ಸ್ಮರಿಸಿಕೊಂಡರು.

ಸರ್ವೀಸ್ ರಸ್ತೆ ನಿರ್ಮಾಣ ಸರಿಯಾಗಿಲ್ಲ
ಇನ್ನೂ ಎಕ್ಸ್ಪ್ರೆಸ್ ವೇ ಕಾಮಗಾರಿ ಪೂರ್ಣವಾಗಿ ಮುಗಿದಿಲ್ಲ. ಅಲ್ಲಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಸರಿಯಾಗಿಲ್ಲ. ಹೆದ್ದಾರಿ ಪ್ರಯಾಣಿಕರಿಗೆ ಅಗತ್ಯ, ಮೂಲಭೂತ ಸೌಕರ್ಯಗಳ ಕೊರತೆ ಇದೆ. ಸರಿಯಾದ ಎಂಟ್ರಿ ಹಾಗೂ ಎಕ್ಸಿಟ್ ಇಲ್ಲದ ಕಾರಣ ಅಪಘಾತ ಹೆಚ್ಚಾಗಿ ಆಗುತ್ತಿವೆ. ಈ ಮಧ್ಯೆ ಹೆದ್ದಾರಿ ಪ್ರಾಧಿಕಾರ ಟೋಲ್ ವಸೂಲಿ ಮಾಡುವುದಕ್ಕೆ ಮುಂದಾಗಿದೆ. ಆದರೆ ಅದು ಸಾಧ್ಯವಿಲ್ಲ. ಬಿಜೆಪಿಯವರು ಚುನಾವಣೆಗಾಗಿ ತರಾತುರಿಯಲ್ಲಿ ಹೆದ್ದಾರಿ ಉದ್ಘಾಟನೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ
ಬಿಜೆಪಿಯ ಮುಖವಾಡ ಒಂದೊಂದಾಗಿ ಕಳಚುತ್ತಿದೆ. ಅವರ ನಡೆ ನುಡಿಗಳನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಶೀಘ್ರದಲ್ಲೇ ಜನ ಇದನ್ನು ಬದಲಾವಣೆ ಮಾಡುತ್ತಾರೆ. ಹೀಗೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಜಾಮೀನಿ ಸಿಕ್ಕಿದ್ದಕ್ಕೆ ವಿಜಯೋತ್ಸವ ಆಚರಣೆ ಮಾಡಿರುವುದನ್ನು ಸಂಸದ ಡಿ.ಕೆ.ಸುರೇಶ್ ಖಂಡಿಸಿದರು.

ಬಿಜೆಪಿ ಸರ್ಕಾರಕ್ಕೆ ಜನ ಬುದ್ಧಿ ಕಲಿಸ್ತಾರೆ
ಪ್ರಧಾನಿ ನರೇಂದ್ರ ಮೋದಿ ಯಾವುದನ್ನು ಹೆಮ್ಮೆಯಿಂದ ಹೇಳುತ್ತಿದ್ದಾರೆಯೋ ಅದು ಈಗ ಬಯಲಾಗಿದೆ. ಶೀಘ್ರದಲ್ಲೇ ಜನ ಇದನ್ನು ಬದಲಾವಣೆ ಮಾಡುತ್ತಾರೆ. ವಿರೂಪಾಕ್ಷಪ್ಪ ಅವರನ್ನು ಮೆರವಣಿಗೆ ಮಾಡುವ ಮೂಲಕ ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ. ಭ್ರಷ್ಟಾಚಾರ ಬೆಂಬಲಿಸುವ ಬಿಜೆಪಿಯನ್ನು ಜನ ಈ ಬಾರಿಯ ಚುನಾವಣೆಯಲ್ಲಿ ತಿರಸ್ಕಾರಿಸುತ್ತಾರೆ ಎಂದು ಭವಿಷ್ಯ ನುಡಿದರು.

ಭ್ರಷ್ಟಾಚಾರದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ?
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಸಾರ್ವಜನಿಕರ ಜಾಗೃತಿಗೆ ಮಾರ್ಚ್ 9ರಂದು ಎರಡು ಗಂಟೆಗಳ ಬಂದ್ಗೆ ಕರೆ ನೀಡಿದ್ದೇವೆ. ಬಿಜೆಪಿಯ 40% ಕಮಿಷನ್ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ಬಗ್ಗೆ ಜನಜಾಗೃತಿ ಮಾಡುತ್ತೇವೆ. ಇದರ ನೇರ ಹೊಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿಯವರೇ ಹೊರಬೇಕು. ನಷ್ಟದಲ್ಲಿರುವ ಸಂಸ್ಥೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಇದಕ್ಕೆ ಸಿಎಂ ಹಾಗೂ ಕೇಂದ್ರ ಬಿಜೆಪಿ ವರಿಷ್ಠರು ಬೆಂಬಲವಾಗಿ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮೇಲೆ ಹಾಕಿರುವ ಎಲ್ಲಾ ಕೇಸ್ಗಳು ರಾಜಕೀಯ ದುರುದ್ದೇಶದಿಂದ ಕೂಡಿವೆ. ಆಡಳಿತದಲ್ಲಿರುವವರು ವಿರೋಧ ಪಕ್ಷವನ್ನು ಹತ್ತಿಕ್ಕಲು ಈ ಕೆಲಸವನ್ನು ಮಾಡುತ್ತಿದ್ದಾರೆ. ಸಾರ್ವಜನಿಕರವಾಗಿ ಹಣ ಸಿಕ್ಕಿರುವುದು ಬಿಜೆಪಿಯಲ್ಲಿ. ಅದರ ಬಗ್ಗೆ ಜನತೆಗೆ ಮೊದಲು ಉತ್ತರ ನೀಡಿ ಎಂದು ತಿರುಗೇಟು ನೀಡಿದರು.












Click it and Unblock the Notifications