ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ; ರೈತರ ಬೆಳೆ ನಾಶ
ರಾಮನಗರ, ಅಕ್ಟೋಬರ್ 19; ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿದೆ. ಈ ನಿರ್ಮಾಣದ ಕಾಮಗಾರಿ ವೇಳೆ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿದ ಹಿನ್ನಲೆಯಲ್ಲಿ ಮಳೆ ನೀರು ಕೃಷಿ ಜಮೀನಿಗೆ ನುಗ್ಗಿ 2 ಎಕರೆ ಟೊಮೆಟೋ ಬೆಳೆ ಮಳೆನೀರು ಪಾಲಾಗಿರುವ ಘಟನೆ ನಡೆದಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಹಳೆಯ ನಾಲ್ಕು ಪಥದ ರಸ್ತೆಯನ್ನು ಅಗಲೀಕರಣ ಮಾಡಿ 10 ಪಥದ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. 2022ರ ಅಕ್ಟೋಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಈ ರಸ್ತೆ ನಿರ್ಮಾಣ ಕಾಮಗಾರಿಗೆ ರಾಮನಗರ ಜಿಲ್ಲೆಯ ಕೆಲವೆಡೆ ಹೆದ್ದಾರಿ ಬದಿಯ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಕೆಲವೆಡೆ ಚರಂಡಿಗಳು ಹೆಸರಿಗೆ ಮಾತ್ರ ನಿರ್ಮಾಣವಾಗಿದ್ದು, ಈ ಚಂರಡಿಗಳಲ್ಲಿ ನೀರು ಹರಿಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಚಿಕ್ಕನದೊಡ್ಡಿ ಗ್ರಾಮದ ಯುವ ರೈತ ಅಜಿತ್ ಎಂಬಾತನ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮೆಟೋ ಬೆಳೆ ಮಳೆ ನೀರಿನಲ್ಲಿ ಮುಳುಗಿದೆ.
ಇನ್ನೆರಡು ದಿನಗಳಲ್ಲಿ ಕಟಾವಿಗೆ ಸಿದ್ದವಾಗಿದ್ದ ಬೆಳೆ ಕಳೆದುಕೊಂಡು ರೈತ ನಷ್ಟ ಅನುಭವಿಸಿದ್ದಾನೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೆಟೋಗೆ ಉತ್ತಮ ಬೆಲೆ ಸಿಗುತ್ತಿರುವ ಸಮಯದಲ್ಲೇ ಬೆಳೆ ನೀರುಪಾಲಗಿರುವುದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
ಇದು ಒಬ್ಬ ರೈತನ ಪರಿಸ್ಥಿತಿಯಲ್ಲ, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಜಮೀನು ಹೊಂದಿರುವ ಹಲವು ರೈತರ ಪರಿಸ್ಥಿತಿ ಇದೇ ಆಗಿದೆ. ಮಳೆ ನೀರು ಸುಮಾರು 5-6 ಎಕರೆಯಲ್ಲಿ ಅವರಿಸಿಕೊಂಡಿದ್ದು. ವರ್ಷದಿಂದ ಶ್ರಮ ಹಾಕಿ ಬೆಳೆದಿದ್ದ ಟೊಮೆಟೋ, ಜೋಳ, ರಾಗಿ ಮತ್ತು ಕಬ್ಬಿನ ಬೆಳೆಗಳು ನಾಶವಾಗಿವೆ.

ಹೆದ್ದಾರಿ ಪ್ರಾಧಿಕಾರದ ಹಣಬಾಕ ಅಧಿಕಾರಿಗಳ ಹೊಣೆಗೇಡಿತನ ಹಾಗೂ ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿರುವ ಡಿಬಿಎಲ್ ಕಂಪನಿಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯಿಂದಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ನೀರು ಪಾಲಾಗಿದೆ. ಇದರ ಹೊಣೆಯನ್ನು ಸಂಬಂಧಪಟ್ಟವರೆ ಹೊರಬೇಕು. ಬೆಳೆನಷ್ಟ ಪರಿಹಾರ ನೀಡುವಂತೆ ನೊಂದ ರೈತರು ಒತ್ತಾಯಿಸಿದ್ದಾರೆ.
ಬೆಂಗಳೂರು-ಮೈಸೂರು 10 ಪಥದ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಒಟ್ಟು 2 ಹಂತಗಳಾವಿ ರಸ್ತೆಯನ್ನು ವಿಂಗಡನೆ ಮಾಡಿಕೊಂಡು ಕಾಮಗಾರಿ ಕೈಗೊಳ್ಳಲಾಗಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ಕುರಿತು ಮಾತನಾಡಿದ್ದಾರೆ. "ಮುಂದಿನ 2022ರ ದಸರಾ ಮುಂಚಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕೊರೊನಾ ಮೊದಲ ಹಾಗೂ ಎರಡನೇ ಅಲೆ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ನಡೆಯೋದಿಲ್ಲ ಎಂಬ ಭಾವನೆ ಇತ್ತು. ಆದರೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 2022ರ ಮೈಸೂರು ದಸರಾ ವೇಳೆಗೆ ರಸ್ತೆ ಸಿದ್ಧಗೊಳ್ಳಲಿದೆ" ಎಂದು ಹೇಳಿದ್ದಾರೆ.
10 ಪಥದ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಒಂದೂವರೆ ಗಂಟೆಗೂ ಮುಂಚೆಯೇ ಉಭಯ ನಗರಗಳ ನಡುವೆ ಸಂಚಾರ ನಡೆಸಬಹುದಾಗಿದೆ. 60 ಕಿ.ಮೀ. ಬೈಪಾಸ್ ಸಂಪೂರ್ಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. 2022ರ ಜನವರಿವರೆಗೆ ಎಲ್ಲ ಬೈಪಾಸ್ಗಳನ್ನು ತೆರೆಯಲಾಗುತ್ತದೆ.
ರಾಮನಗರ ಜಿಲ್ಲೆಯಲ್ಲಿ ಈ ತಿಂಗಳಿನಲ್ಲಿ ಭಾರೀ ಮಳೆಯಾಗಿದೆ. ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ 16ರ ತನಕ 156.8 ಮಿಲಿಮೀಟರ್ ಮಳೆಯಾಗಿದೆ. ಇದು ವಾಡಿಕೆಗಿಂತ ಶೇ 66 ರಷ್ಟು ಹೆಚ್ಚುವರಿ ಮಳೆಯಾಗಿದೆ. ಮಳೆಯಿಂದಾಗಿ ರೈತರು ಸಂತಸಗೊಂಡಿದ್ದರೂ ಕೆಲವು ಕಡೆ ಬೆಳೆ ನಾಶದ ವರದಿಗಳು ಬಂದಿವೆ.












Click it and Unblock the Notifications