ಬಿಕಾಂ ಪದವಿಯಲ್ಲಿ 7 ಚಿನ್ನದ ಪದಕ ಪಡೆದ ಬಿಡದಿ ವಿದ್ಯಾರ್ಥಿನಿ
ರಾಮನಗರ, ಜೂನ್ 28: ಜಿಲ್ಲೆಯ ಬಿಡದಿ ಪಟ್ಟಣದ ನಿವಾಸಿ ಸ್ಪೂರ್ತಿ, ಬಿಕಾಂ ಪದವಿಯಲ್ಲಿ ಏಳು ಚಿನ್ನದ ಪದಕ ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡುವ ಮೂಲಕ ಬಿಡದಿ ಪಟ್ಟಣ ಹಾಗೂ ಜಿಲ್ಲೆಗೆ ಕೀರ್ತಿ ತರುವ ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಬಿಡದಿ ಪಟ್ಟಣದ ಜ್ಞಾನ ವಿಕಾಸ್ ಸಮೂಹ ಸಂಸ್ಥೆಯ ಬಿಕಾಂ ವಿದ್ಯಾರ್ಥಿನಿ ಆರ್. ಸ್ಪೂರ್ತಿ, ಏಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಜ್ಞಾನ ವಿಕಾಸ್ ಸಮೂಹ ಸಂಸ್ಥೆಯಲ್ಲಿ ಬಿಕಾಂ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಆರ್. ಸ್ಪೂರ್ತಿ ಬಿಕಾಂ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಬಿಡದಿ ಪಟ್ಟಣದ ನಿವಾಸಿಯಾದ ಸ್ಪೂರ್ತಿ . ಆರ್ ಮಧ್ಯಮ ವರ್ಗದಿಂದ ಬಂದವರಾಗಿದ್ದಾರೆ. ತಂದೆ ರವಿಕುಮಾರ್ ಬಿಡದಿಯ ನಾಮ್ ಧಾರಿ ಸೀಡ್ಸ್ ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ತಾಯಿ ರೂಪ ಗೃಹಿಣಿಯಾಗಿ ಮಗಳ ಏಳಿಗೆಗಾಗಿ ಮನೆಯಲ್ಲಿ ಶ್ರಮಿಸಿದ್ದಾರೆ.

ಏಳು ಚಿನ್ನದ ಪದಕ ಮುಡಿಗೇರಿಸಿಕೊಂಡ ಸ್ಪೂರ್ತಿ
ಬಿಕಾಂ ಪದವಿ ಒಂದರಲ್ಲೇ ಆರ್. ಸ್ಫೂರ್ತಿ 7 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಇತರೆ ವಿಧ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ 98.25% ಅಂಕ ಪಡೆದು, ಎರಡು ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೇ 4600 ಅಂಕಗಳಿಗೆ 4383 ಅಂಕ ಪಡೆಯುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ಒಟ್ಟಾರೆ ಏಳು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಿಕಾಂ ಪದವಿಯಲ್ಲಿ ಪ್ರಥಮ ಶ್ರೇಣಿ ಪಡೆದಿರುವ ಸ್ಪೂರ್ತಿ ಅವರಿಗೆ ಬೆಂಗಳೂರು ವಿವಿಯಲ್ಲಿ ನಡೆಯುವ ಘಟಿಕೋತ್ಸವದಲ್ಲಿ 7 ಚಿನ್ನದ ಪದಕಗಳನ್ನು ಪ್ರಧಾನ ಮಾಡಲಾಗುತ್ತದೆ. ಸದ್ಯದಲ್ಲೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಆರ್. ಸ್ಪೂರ್ತಿ ಅವರಿಗೆ ಚಿನ್ನದ ಪದಕಗಳನ್ನು ಪ್ರಧಾನ ಮಾಡಲಿದ್ದು ದಿನಾಂಕ ನಿಗದಿಯಾಗಿಲ್ಲ.

ಅನಾರೋಗ್ಯದ ನಡುವೆಯೂ ಚಿನ್ನ ಗೆದ್ದ ಸ್ಪೂರ್ತಿ
ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಸ್ಪೂರ್ತಿ ಎರಡು ಸೆಮಿ ಸ್ಟಾರ್ ಕಾಲೇಜಿಗೆ ಹೋಗಿ ಪಾಠ ಕೇಳಿದ್ದರು. ಆದರೆ ಅಂತಿಮ ಸೆಮಿ ಸ್ಟಾರ್ ನಲ್ಲಿ ಅವರಿಗೆ ಆರೋಗ್ಯ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಸತತ 6 ತಿಂಗಳು ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅನಾರೋಗ್ಯ ಸಮಸ್ಯೆಯ ನಡುವೆಯೂ ಛಲ ಬಿಡದ ಸ್ಪೂರ್ತಿ, 6 ತಿಂಗಳು ಕಾಲ ಆನ್ಲೈನ್ನಲ್ಲೇ ಪಾಠ ಪ್ರವಚನಗಳನ್ನು ಕೇಳಿ ಹಾಗೂ ಸ್ನೇಹಿತರ ಬಳಿ ಕೇಳಿ ತಿಳಿದುಕೊಂಡು ಚಿನ್ನದ ಸಾಧನೆ ಮಾಡಿದ್ದಾರೆ.
ಸ್ಪೂರ್ತಿ 7 ನೇ ತರಗತಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು ಹಾಗೂ ಪಿಯುಸಿ ಪರೀಕ್ಷೆಯಲ್ಲಿ 98.03% ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೆ ರ್ಯಾಂಕ್ ಪಡೆದಿದ್ದರು.

ಸಾಧಿಸಬೇಕೆಂಬ ಛಲ ಕಾರಣ
ತನ್ನ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿನ್ನದ ಹುಡುಗಿ ಆರ್. ಸ್ಪೂರ್ತಿ, "ನಾನು ಮೊದಲಿನಿಂದಲೂ ಓದಿನಲ್ಲಿ ಮುಂದಿರುತ್ತಿದ್ದೆ, ಏನಾದರೂ ಸಾಧಿಸಬೇಕೆಂಬ ಛಲ ಇಂದಿನ ಸಾಧನೆಗೆ ಸ್ಪೂರ್ತಿಯಾಗಿದೆ. ಎಲ್.ಕೆ.ಜಿ ಇಂದ ಬಿಕಾಂ ವರೆಗೆ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು ಸಹ ನನ್ನ ಈ ಸಾಧನೆಗೆ ಸಹಕಾರಿಯಾಗಿದೆ. ನನಗೆ 7 ಚಿನ್ನದ ಪದಕ ಬಂದಿರುವುದು ಅತೀ ಸಂತಸವನ್ನು ತಂದಿದೆ. ನಮ್ಮ ಸಂಸ್ಥೆಗೆ ಹಾಗೂ ನನ್ನ ತಂದೆ ತಾಯಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ " ಎಂದು ತನ್ನ ಸಂತಸ ಹಂಚಿಕೊಂಡರು.

ಇಡೀ ಜಿಲ್ಲೆಗೆ ಹೆಸರು ತಂದ ಸ್ಫೂರ್ತಿ
"ತಮ್ಮ ಸಂಸ್ಥೆಯ ವಿಧ್ಯಾರ್ಥಿನಿ ಸಾಧನೆಗೆ ಹರ್ಷ ವ್ಯಕ್ತಪಡಿದ ವಿಧಾನ ಪರಿಷತ್ ಸದಸ್ಯ ಸಿ. ಎಂ. ಲಿಂಗಪ್ಪ, ಬಾಲ್ಯದಿಂದಲೂ ನಮ್ಮ ಸಂಸ್ಥೆಯಲ್ಲೇ ವ್ಯಾಸಂಗ ಮಾಡುತ್ತಿರುವ ಆರ್. ಸ್ಪೂರ್ತಿ, ಬಿಕಾಂ ಪದವಿ ಒಂದರಲ್ಲೇ 7 ಚಿನ್ನದ ಪದಕ ಪಡೆದು ರಾಮನಗರ ಜಿಲ್ಲೆಯ ಹೆಸರು ಹಾಗೂ ಜ್ಞಾನ ವಿಕಾಸ್ ಸಂಸ್ಥೆಯ ಹಿರಿಮೆಯನ್ನು ರಾಜ್ಯ ಮಟ್ಟಕ್ಕೆ ತೋರಿಸಿದ್ದಾರೆ. ಸಾಧನೆ ಮಾಡುವ ಹುಮ್ಮಸ್ಸಿರುವ ಮಧ್ಯಮ ವರ್ಗದ ಮಕ್ಕಳಿಗೆ ನಮ್ಮ ಸಂಸ್ಥೆ ಯಾವಾಗಲು ಬೆನ್ನೆಲುಬಾಗಿ ನಿಲ್ಲುತ್ತದೆ" ಎಂದು ಪ್ರಶಂಸಿಸಿದ್ದಾರೆ.












Click it and Unblock the Notifications