Assembly election 2023: ಡಿಸೆಂಬರ್ 19ಕ್ಕೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿ
ರಾಮನಗರ, ಡಿಸೆಂಬರ್, 18: ಸೋಮುವಾರ (ಡಿಸೆಂಬರ್ 19) ಜೆಡಿಎಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಬಿಡುಗಡೆ ಮಾಡಲಾಗುವುದು. ಪಕ್ಷದ ಕೇಂದ್ರ ಕಛೇರಿ ಜೆಪಿ ಭವನದಲ್ಲಿ ಪಟ್ಟಿ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಕನಕಪುರದಲ್ಲಿ ತಿಳಿಸಿದರು.
ಕನಕಪುರದ ಟಿ.ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಮೂರನೇ ದಿನದ ಪಂಚರತ್ನ ರಥಯಾತ್ರೆ ಪಾಲ್ಗೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀವಾಸ ಕಲ್ಯಾಣ ಕಾರ್ಯಕ್ರಮದ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಬೇಡ ಎಂದು ನಿರ್ಧಾರ ಮಾಡಿದೆ. ಹಾಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಜೆಪಿ ಭವನದಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.
ರಾಮನಗರ ಜೆಡಿಎಸ್ ಅಭ್ಯರ್ಥಿ ಹೆಸರನ್ನು ಘೋಷಿಸಿದ ಅನಿತಾ ಕುಮಾರಸ್ವಾಮಿ: ಅಭ್ಯರ್ಥಿ ಯಾರು ಗೊತ್ತೆ?
ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಪ್ರಾರಂಭವಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸತತ 11 ದಿನಗಳ ಕಾಲ ಪಂಚರತ್ನಯಾತ್ರೆ ಪ್ರವಾಸ ಮಾಡಲಿದ್ದೇನೆ. ಹಾಗಾಗಿ ಅಧಿವೇಶನದಲ್ಲಿ ನಾನು ಭಾಗವಹಿಸುತ್ತಿಲ್ಲ. ನಮ್ಮ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶಂಪೂರ್ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಸದನದಲ್ಲಿ ಕೆಲವೊಂದು ವಿಚಾರ ಪ್ರಸ್ತಾಪ ಮಾಡುವ ಸಂಬಂಧ ಅವರೊಟ್ಟಿಗೆ ಚರ್ಚೆ ಮಾಡಿದ್ದೇನೆ. ಬಂಡೆಪ್ಪ ಕಾಶಂಪೂರ್ ಸದನದಲ್ಲಿ ಆ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಪಕ್ಷಕ್ಕೆ 60 ರಿಂದ70 ಸಾವಿರ ಮತಗಳು ಬರುತ್ತವೆ
ಕನಕಪುರ ವಿಧಾನ ಸಭಾ ಕ್ಷೇತ್ರಕ್ಕೆ ಆದಷ್ಟು ಬೇಗ ಸೂಕ್ತ ಅಭ್ಯರ್ಥಿ ಘೋಷಣೆ ಮಾಡಲಿದ್ದೇವೆ. ಕನಕಪುರದಲ್ಲಿ ಯಾರೇ ಆಭ್ಯರ್ಥಿಯಾದರೂ ಜೆಡಿಎಸ್ ಪಕ್ಷಕ್ಕೆ 60 ರಿಂದ70 ಸಾವಿರ ಮತಗಳನ್ನು ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿದ್ದರೂ ಕೂಡ ಅದೇ ಪ್ರಮಾಣದಲ್ಲಿ ಮತಗಳು ಬರುತ್ತವೆ ಎಂದರು.
ಜೆಡಿಎಸ್ನಲ್ಲಿ ಉತ್ತಮ ವಾತವರಣವಿದೆ
ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಬೇಕಾಗಿರುವುದು 20-25 ಸಾವಿರ ಮತಗಳು ಮಾತ್ರ. ಈ ಬಾರಿ ಜೆಡಿಎಸ್ನಲ್ಲಿ ಉತ್ತಮ ವಾತವರಣವಿದೆ. ಈ ಬಾರಿ ಕನಕಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
ಬೆಟ್ಟಿಂಗ್ ದಂಧೆ, ಯುವಕರು ದಾರಿ ತಪ್ಪುತ್ತಿದ್ದಾರೆ
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದ ತಕ್ಷಣ ಯುವ ಜನತೆಯನ್ನು ಹಾಳು ಮಾಡುತ್ತಿರುವ ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ಅನ್ನು ಸಂಪೂರ್ಣ ನಿಷೇಧ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದರು. ಮರಳವಾಡಿ ಹೋಬಳಿಯ ಮಲ್ಲಿಗೆಮೆಟ್ಟಿಲು ಗ್ರಾಮದಲ್ಲಿ ಮಾತನಾಡಿದ ಅವರು, ಜನರು ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಿಂದಾಗಿ ಮನೆಗಳು, ಬದುಕುಗಳು ಹಾಳಾಗುತ್ತಿವೆ. ಯುವಕರು ದಾರಿ ತಪ್ಪುತ್ತಿದ್ದಾರೆ. ಜನರ ಮನವಿಗೆ ಸ್ಪಂದಿಸಿದ ಎಚ್.ಡಿ. ಕುಮಾರಸ್ವಾಮಿ, ನಾವು ಅಧಿಕಾರಕ್ಕೆ ಬಂದ ಕೂಡಲೇ ಬೆಟ್ಟಿಂಗ್ ದಂಧೆಯನ್ನು ಬ್ಯಾನ್ ಮಾಡುವೆ ಎಂದು ಭರವಸೆ ನೀಡಿದರು.
ಪಂಚರತ್ನ ರಥಯಾತ್ರೆ ಬಗ್ಗೆ HDK ಹೇಳಿದ್ದೇನು?
ಜಿಲ್ಲೆಯಲ್ಲಿ 3ನೇ ದಿನಕ್ಕೆ ಕಾಲಿಟ್ಟ ಪಂಚರತ್ನ ಯಾತ್ರೆಗೆ ಜನರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ರಾಮನಗರ ಕ್ಷೇತ್ರ ಹಾಗೂ ಕನಕಪುರ ಹಳ್ಳಿಗಳಲ್ಲಿ ಸಾಗುತ್ತಿರುವ ರಥಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು. ರಂಗೋಲಿ, ಬಾಳೆಕಂದು, ತಳಿರು ತೋರಣದಿಂದ ಆಲಂಕರಿಸಿದ್ದ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪಂಚರತ್ನ ಯಾತ್ರೆ ಬಂದ ಕಡೆಯಲ್ಲಿ ಅಭಿಮಾನಿಗಳು ಎಚ್.ಡಿ. ಕುಮಾರಸ್ವಾಮಿಯವರಿಗೆ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.