ರಾಮನಗರದಲ್ಲಿ ಮತ್ತೆ ಚುರುಕುಗೊಂಡ ಸಿಎಎ ವಿರೋಧಿ ಪ್ರತಿಭಟನೆ
ರಾಮನಗರ, ಮಾರ್ಚ್ 12: ಕೆಲ ದಿನಗಳಿಂದ ತಣ್ಣಗಾಗಿದ್ದ ಎನ್ಪಿಆರ್, ಎನ್ಆರ್ಸಿ ಮತ್ತು ಸಿಎಎ ಹೋರಾಟ ಮತ್ತೆ ಚುರುಕುಗೊಂಡಿದ್ದು, ರಾಮನಗರದಲ್ಲಿ ಜಂಟಿ ಕ್ರಿಯಾ ಸಮಿತಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಸಂವಿಧಾನ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು.
ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂದೆ ಮುಸ್ಲಿಂ ಸಂಘಟನೆಗಳು, ರಾಜ್ಯ ರೈತ ಸಂಘ ಮತ್ತು ಇನ್ನಿತರೆ ಸಂಘಗಳ ಸಹಯೋಗದೊಂದಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಿಎಎ, ಎನ್ಆರ್ಸಿ, ಎನ್ಪಿಆರ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿದ ಮಾರ್ಚ್ 12 ನೇ ದಿನಾಂಕದಂದು ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಈ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳು, "ಕೈಯಲ್ಲಿ ನಾವು ಸಿಎಎ ಕಾಯ್ದೆ ಬೆಂಬಲಿಸುವುದಿಲ್ಲ' ಎಂಬ ಬೋರ್ಡ್ ಹಿಡಿದಿದ್ದರು.

ಸಭೆಯಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಉರ್ದು ಮೂರು ಭಾಷೆಗಳಲ್ಲಿ ಸಂವಿಧಾನದ ಪೀಠಿಕೆ ಓದಿದ್ದು ವಿಶೇಷವಾಗಿತ್ತು. ಈ ವೇಳೆ ಮಾತನಾಡಿದ ಉಪವಾಸ ನಿರತರು, ""ಇಂದು ಮಹಾತ್ಮ ಗಾಂಧೀಜಿಯವರು ದಂಡಿಯಾತ್ರೆ ನಡೆಸಿದ ದಿನ, ನಾವು ಗಾಂಧಿ ಅನುಯಾಯಿಗಳು, ಬಾಪು ತೋರಿಸಿಕೊಟ್ಟ ಅಹಿಂಸಾ ಮಾರ್ಗದಲ್ಲೇ ಸಂವಿಧಾನ ವಿರೋಧಿ ಮಸೂದೆಯನ್ನು ಹಿಂಪಡೆಯುವ ತನಕ ನಮ್ಮ ಹೋರಾಟ ನಡೆಯಲಿದೆ ಎಂದು ಘೋಷಿಸಿದರು.












Click it and Unblock the Notifications