ಜಮೀರ್ ಹೇಳಿಕೆಗೆ ತಿರುಗೇಟು ಕೊಟ್ಟ ಅನಿತಾ ಕುಮಾರಸ್ವಾಮಿ!
ರಾಮನಗರ, ಅಕ್ಟೋಬರ್ 28; "ಸಿಂಧಗಿ ಮತ್ತು ಹಾನಗಲ್ ಎರಡು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ. ಮೂರು ಪಕ್ಷಗಳ ಸಮಾನವಾಗಿ ಚುನಾವಣೆಯನ್ನು ಎದುರಿಸಿವೆ. ಮತದಾನಕ್ಕೆ ಈಗಾಗಲೇ ಕ್ಷಣಗಣನೆ ಪ್ರಾಭವಾಗಿದೆ. ನವೆಂಬರ್ 2ಕ್ಕೆ ಫಲಿತಾಂಶ ಹೊರಬೀಳುತ್ತದೆ. ನಮಗೆ ಎರಡು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ" ಎಂದು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣ ತಾಲ್ಲೂಕಿನ ಗೋವಿಂದನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ನೂತನ ದೇವಾಲಯ ಜೀರ್ಣೋದ್ದಾರ ಗೋಪುರ ಕುಂಬಾಭಿಷೇಕ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಗುರುವಾರ ಅನಿತಾ ಕುಮಾರಸ್ವಾಮಿ ಮತ್ತು ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡಿದ್ದರು.
ಉಪ ಚುನಾವಣೆ ಪ್ರಚಾರದಲ್ಲಿ ಜಮೀರ್ ಅಹಮದ್ ಖಾನ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅನಿತಾ ಕುಮಾರಸ್ವಾಮಿ, "ಚುನಾವಣಾ ಪ್ರಚಾರ ಮಾಡುವ ಬರದಲ್ಲಿ ಯಾರೇ ಆದರೂ ವೈಯಕ್ತಿಕವಾಗಿ ಮಾತನಾಡೋದು ಸರಿಯಲ್ಲ. ಜಮೀರ್ಗೆ ಆಂಜನೇಯಸ್ವಾಮಿನೇ ಬುದ್ಧಿ ಕೊಡಲಿ. ಈಗಲಾದರೂ ನಾಲಿಗೆ ಕಂಟ್ರೋಲ್ನಲ್ಲಿಟ್ಟುಕೊಂಡು ಮಾತನಾಡಲಿ" ಎಂದು ತಿರುಗೇಟು ಕೊಟ್ಟರು.

"ಜನರು ಜನಪ್ರತಿನಿಧಿಗಳ ಹೇಳಿಕೆಗಳನ್ನು ಗಮನಿಸುತ್ತಾರೆ. ಮುಂದೆ ಜನರೇ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಕುಮಾರಸ್ವಾಮಿ ಅವರು ಎಂಪಿ ಆಗಿದ್ದಾಗ ಜಮೀರ್ ಪರಿಚಯವಾಗಿದ್ದು, ಇವರು ಹೇಗೆ ಅವರನ್ನು ಸಾಕಿದರು?" ಎಂದು ಅನಿತಾ ಕುಮಾರಸ್ವಾಮಿ ಪ್ರಶ್ನಿಸಿದರು.
ಚುನಾವಣೆ ಸಮಯದಲ್ಲಿ ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, "ಅದು ನನಗೆ ಗೊತ್ತಿಲ್ಲ, ಈಗ ಎಲೆಕ್ಷನ್ ಇದೇ. ಮುಂದೆ ಇದೆಲ್ಲವೂ ನಿಲ್ಲುತ್ತೆ ಬನ್ನಿ. ಜಮೀರ್ ಹೇಳಿಕೆ ಎಲ್ಲವೂ ಬಾಲಿಷ ಎನಿಸುತ್ತದೆ" ಎಂದರು.
ನಿಖಿಲ್ ಕುಮಾರಸ್ವಾಮಿ ಹೇಳಿಕೆ; ನಿಖಿಲ್ ಕುಮಾರಸ್ವಾಮಿ ಮಾತನಾಡಿ, "ಸಿಂಧಗಿ ಮತ್ತು ಹಾನಗಲ್ ಎರಡು ಉಪಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸ ಇದೆ. ಪಕ್ಷದ ಕಾರ್ಯಕರ್ತರು, ನಾಯಕರು, ಶಾಸಕರು ಹಾಗೂ ಮುಖಂಡರು ತಳ ಮಟ್ಟದಿಂದ ಕೆಲಸ ಮಾಡಿದ್ದಾರೆ. ಜನರು ನಮ್ಮ ಪರ ನಿಲ್ಲುತ್ತಾರೆ ಎಂಬ ಆತ್ಮವಿಶ್ವಾಸ ನಮಗಿದೆ" ಎಂದರು.
"ಸಿಂಧಗಿಯಲ್ಲಿ ದೇವೇಗೌಡರು ಹಲವು ನೀರಾವರಿ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲಿನ ಮತದಾರರಿಗೆ ನೀರಾವರಿ ಯೋಜನೆಗಳ ಮನವರಿಕೆ ಮಾಡುವ ಕೆಲಸ ಮಾಡಲಾಗಿದೆ. ಇನ್ನೂ ಹಾನಗಲ್ನಲ್ಲಿ ಒಬ್ಬ ಅಲ್ಪಸಂಖ್ಯಾತ ವಿದ್ಯಾವಂತ ಯುವಕನನ್ನು ಅಭ್ಯರ್ಥಿ ಮಾಡಿದ್ದೇವೆ, ಅಲ್ಲಿಯು ತಕ್ಕಮಟ್ಟಿನ ಪ್ರಯತ್ನ ಮಾಡಿದ್ದೇವೆ" ಎಂದು ಹೇಳಿದರು.
ಎಚ್. ಡಿ. ಕುಮಾರಸ್ವಾಮಿ ಕುರಿತು ಜಮೀರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿಖಿಲ್ ಕುಮಾರಸ್ವಾಮಿ, "ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡಿಕೊಂಡು ಹೋದರೆ ನಗೆಪಾಟಲು ಆಗುತ್ತದೆ. ಯಾರ್ ಯಾರ್ ಮಾತನಾಡಿದ್ದಾರೆ ಅಂತವರಿಗೆ ಮುಂದೆ ಸಂದರ್ಭ ಬರುತ್ತೆ, ಜನತೆ ತಕ್ಕ ಪಾಠ ಕಲಿಸುತ್ತಾರೆ" ಎಂದು ತಿಳಿಸಿದರು.
"ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನ ನೀಡಿದೆ. ನಮ್ಮ ಹಿರಿಯರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಕಟ್ಟುವಂತೆ ಬೆನ್ನು ತಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಂಘಟನೆ ವಿಚಾರದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ . ಹಾಗೆಯೇ ರಾಮನಗರ, ಚನ್ನಪಟ್ಟಣದಲ್ಲು ಪಕ್ಷ ಸಂಘಟನೆ ಮಾಡುತ್ತೇನೆ" ಎಂದರು.
ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆಗೆ ಬಹಿರಂಗ ಪ್ರಚಾರ ಗುರುವಾರ ಅಂತ್ಯಗೊಂಡಿದೆ. ಮೂರು ಪಕ್ಷಗಳ ನಾಯಕರ ನಡುವಿನ ಮಾತಿನ ಸಮಕ್ಕೆ ಉಪ ಚುನಾವಣೆ ಪ್ರಚಾರ ಸಾಕ್ಷಿಯಾಗಿತ್ತು. ಅಕ್ಟೋಬರ್ 30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ. ಸಿಂಧಗಿಯಲ್ಲಿ 2018ರಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳುವ ಸವಾಲು ಪಕ್ಷದ ಮುಂದಿದೆ.












Click it and Unblock the Notifications