ತಮ್ಮದೇ ಪಕ್ಷದ ಮುಖಂಡರ ಸಭೆಯಲ್ಲಿ ಸಿಟ್ಟಿನಿಂದ ಎದ್ದು ಹೊರ ನಡೆದ ಕುಮಾರಸ್ವಾಮಿ
ಶುಕ್ರವಾರ (ಅ 16) ರಾಜರಾಜೇಶ್ವರಿ ನಗರದ ಜೆಡಿಎಸ್ ಮುಖಂಡರು ಗುಳೇ ಎದ್ದು ಕಾಂಗ್ರೆಸ್ ಕಡೆ ಮುಖ ಮಾಡಿದಾಗ, ಅವರುಗಳ ನೋವೆಲ್ಲಾ ಒಂದೇ ಆಗಿತ್ತು. ಚುನಾವಣೆಯ ವೇಳೆ ಮುಖಂಡರ ಪಕ್ಷಾಂತರ ಮಾಮೂಲಿ ವಿಚಾರವಾಗಿದ್ದರೂ, ಅವರ ಸಿಟ್ಟು ಕುಮಾರಸ್ವಾಮಿಯವರ ಮೇಲಿತ್ತು.
ಸುಮಾರು ಇನ್ನೂರಕ್ಕೂ ಜೆಡಿಎಸ್ ಮುಖಂಡರು, ಉಪಚುನಾವಣೆಯ ವೇಳೆ ಕಾಂಗ್ರೆಸ್ಸಿಗೆ ತಮ್ಮ ನಿಯತ್ತು ಬದಲಾಯಿಸಿದ್ದರು. "ದಶಕಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಆದರೆ, ನಮ್ಮನ್ನು ಗುರುತಿಸುವ ಕೆಲಸ ನಡೆಯುತ್ತಿಲ್ಲ. ಕುಮಾರಣ್ಣನನ್ನು ನಂಬುವ ಸ್ಥಿತಿಯಲ್ಲಿಲ್ಲ"ಎಂದು ಆ ಮುಖಂಡರು ಬಹಿರಂಗವಾಗಿಯೇ ಹೇಳಿದ್ದರು.
ದೇವೇಗೌಡ್ರ ಕುಟುಂಬ ನೀಡುವ ಸ್ಪಷ್ಟೀಕರಣ, ಹಾಕುವ ಕಣ್ಣೀರಿಗೆ, ಕಾರ್ಯಕರ್ತರು ಬೆಲೆಕೊಡುತ್ತಿಲ್ಲವೇ ಎನ್ನುವ ಪ್ರಶ್ನೆಯ ನಡುವೆಯೇ, ಶಿರಾದಲ್ಲಿ ಪ್ರಮುಖ ಮುಖಂಡ, ಕಲ್ಕೆರೆ ರವಿಕುಮಾರ್ ಪಕ್ಷಕ್ಕೆ ವಿದಾಯ ಹೇಳಿದ್ದರು. ಇದು, ಉಪಚುನಾವಣೆಯ ವೇಳೆ, ಪಕ್ಷಕ್ಕಾದ ದೊಡ್ಡ ಹಿನ್ನಡೆಯೆಂದೇ ಹೇಳಲಾಗುತ್ತಿದೆ.
ಇದೇ ರೀತಿಯ ಬೆಳವಣಿಗೆ ಬೆಂಗಳೂರು ಗ್ರಾಮಾಂತರ ಬಿಡದಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕುಮಾರಸ್ವಾಮಿಯವರ ಮಾತಿಗೆ ಒಪ್ಪದ ಮುಖಂಡರು ಸಮಾಧಾನಗೊಳ್ಳದಿದ್ದರಿಂದ, ಎಚ್ಡಿಕೆ, ಸಿಟ್ಟಿನಿಂದ, ಸಭೆಯಿಂದ ಹೊರ ನಡೆದ ಘಟನೆ ನಡೆದಿದೆ. ಅದೇನು?

ಬಿಡದಿಯ ಕೇತಗಾನಹಳ್ಳಿಯಲ್ಲಿನ ತಮ್ಮ ತೋಟದ ಮನೆ
ಬಿಡದಿಯ ಕೇತಗಾನಹಳ್ಳಿಯಲ್ಲಿನ ತಮ್ಮ ತೋಟದ ಮನೆಯಲ್ಲಿ, ಮರಳವಾಡಿ ಹೋಬಳಿಯ ಜೆಡಿಎಸ್ ಮುಖಂಡರ ಸಭೆಯನ್ನು ಕುಮಾರಸ್ವಾಮಿ ಕರೆದಿದ್ದರು. ಕೊರೊನಾ, ಕೆಲಸದ ಒತ್ತಡದಿಂದ, ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರ ಅಹವಾಲನ್ನು ಸ್ವೀಕರಿಸಲು ಆಗಲಿಲ್ಲ. ಇನ್ನು ಮುಂದೆ ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ, ಚರ್ಚಿಸುವೆ ಎಂದು ಕುಮಾರಸ್ವಾಮಿ ಅಭಯ ನೀಡಿದ್ದರು.

ಕಾಂಗ್ರೆಸ್ ಜೊತೆಗಿನ ಈಗಿನ ತಮ್ಮ ಹಳಸಿದ ಸಂಬಂಧ
ಕಾಂಗ್ರೆಸ್ ಜೊತೆಗಿನ ಈಗಿನ ತಮ್ಮ ಹಳಸಿದ ಸಂಬಂಧ, ಸಮ್ಮಿಶ್ರ ಸರಕಾರ ರಚಿಸಿ ತಪ್ಪು ಮಾಡಿರುವುದನ್ನು ಕುಮಾರಸ್ವಾಮಿ ಸಭೆಯಲ್ಲಿ ವಿವರಿಸಿದ್ದಾರೆ. ಇನ್ನು ಯಾವತ್ತೂ, ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಎಚ್ಡಿಕೆ ಹೇಳಿದಾಗ, ಇದಕ್ಕೆ ಸ್ಥಳೀಯ ಮುಖಂಡರು ವಿರೋಧವನ್ನು ವ್ಯಕ್ತ ಪಡಿಸಿದ್ದಾರೆ. (ಸಂಗ್ರಹ ಚಿತ್ರ)

ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್
ಕೊರೊನಾ ವೇಳೆ, ಪಕ್ಷದ ಮೊದಲ ಪಂಕ್ತಿಯ ಯಾವ ಮುಖಂಡರೂ ನಮ್ಮ ಸಂಕಷ್ಟವನ್ನು ಕೇಳಲಿಲ್ಲ. ಆ ವೇಳೆ, ನಮಗೆ ಸಹಾಯ ಮಾಡಿದ್ದು ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್. ಪರಿಸ್ಥಿತಿ ಹೀಗಿರುವಾಗ, ನಾವು ಅದ್ಯಾವ ಮುಖ ಇಟ್ಟುಕೊಂಡು, ಜನರ ಬಳಿ ಹೋಗಲಿ ಎಂದು ಮುಖಂಡರು ಆಕ್ಷೇಪಿಸಿದ್ದಾರೆ.
Recommended Video

ಸಿಟ್ಟಾದ ಕುಮಾರಸ್ವಾಮಿ
ಇದರಿಂದ ಸಿಟ್ಟಾದ ಕುಮಾರಸ್ವಾಮಿ, ಕೊರೊನಾ ವೇಳೆ ಆರು ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿ, ಸಾರ್ವಜನಿಕರಿಗೆ ದವಸಧಾನ್ಯ ವಿತರಿಸಿದ್ದನ್ನು ಮರೆತು ಹೋದ್ರಾ, ಹೋಗಿ ಕಾಂಗ್ರೆಸ್ಸಿಗೆ ವೋಟ್ ಹಾಕಿ ಎಂದು ಸಿಟ್ಟಾಗಿ, ಸಭೆಯಿಂದ ಅರ್ಧದಲ್ಲೇ ಹೊರ ನಡೆದರು ಎಂದು ವರದಿಯಾಗಿದೆ.












Click it and Unblock the Notifications