ರಾಮನಗರ; ವರ್ಷ ಕಳೆದರೂ ಅನಾವರಣಗೊಳ್ಳದ ಪುತ್ಥಳಿಗಳು!
ರಾಮನಗರ, ಮಾರ್ಚ್ 19: ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗದಲ್ಲಿನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಗಳು ಅನಾಥವಾಗಿವೆ.
ಹೌದು, ಪ್ರತಿಮೆಗಳು ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಿ ವರ್ಷವೇ ಕಳೆದಿದೆ. ಆದರೆ ಈವರೆಗೂ ಪ್ರತಿಮೆ ಅನಾವರಣಕ್ಕೆ ಜಿಲ್ಲಾಡಳಿತ ಮನಸ್ಸು ಮಾಡಿಲ್ಲ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಆಕರ್ಷಣೆ ಕೇಂದ್ರವಾಗಿ ಈ ಎರಡು ಪ್ರತಿಮೆಗಳು ಮೂಡಿ ಬಂದಿದೆ. 14 ಅಡಿ ಎತ್ತರದ ಈ ಎರಡು ಪ್ರತಿಮೆಗಳು ಈಗಾಗಲೇ ಜಿಲ್ಲಾ ಕಚೇರಿ ಸಂಕೀರ್ಣಕ್ಕೆ ಬಂದು ವರ್ಷವೇ ಕಳೆದಿದೆ. ಅನಾವರಣ ಮಾತ್ರ ಆಗಿಲ್ಲ.
ಬಿಡದಿಯ ವಿಜಯಕುಮಾರ್ ಎಂಬುವರು 14 ಅಡಿ ಎತ್ತರ ಹಾಗೂ 3.5 ಅಡಿ ಅಗಲದ ಅಂಬೇಡ್ಕರ್ ಪ್ರತಿಮೆಯನ್ನು ಕಂಚಿನಲ್ಲಿ ತಯಾರಿಸಿದ್ದಾರೆ. ಇದಕ್ಕಾಗಿ ಅವರು 7 ತಿಂಗಳುಗಳ ಕಾಲ ಶ್ರಮ ವ್ಯಯಿಸಿದ್ದು, 40 ಲಕ್ಷ ರೂಪಾಯಿ ವೆಚ್ಚ ತಗುಲಿದೆ ಎಂದುದ ಅಂದಾಜಿಸಲಾಗಿದೆ. ಇದರಲ್ಲಿ 25 ಲಕ್ಷ ರೂ.ಗಳನ್ನು ಸಮಾಜ ಕಲ್ಯಾಣ ಇಲಾಖೆ ನೀಡಿದೆ.

ಇನ್ನೂ ಕುದುರೆ ಮೇಲೆ ಕತ್ತಿ ಹಿಡಿದು ಕುಳಿತ ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನ ರಾಮೋಹಳ್ಳಿಯ ಕಲಾವಿದ ಶಿವಕುಮಾರ್ ತಯಾರಿಸಿದ್ದಾರೆ. ಒಂದು ವರ್ಷವನ್ನು ಇದಕ್ಕಾಗಿ ಮೀಸಲಿಟ್ಟಿದ್ದು, ಜಿಲ್ಲಾ ಪಂಚಾಯತ್ 60 ಲಕ್ಷ ಅನುದಾನ ವ್ಯಯಿಸಿದೆ.
ಜಿಲ್ಲಾ ಕೇಂದ್ರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ವಿವಿಧ ಸಂಘಟನೆಗಳು ಬಹು ದಿನಗಳಿಂದ ಒತ್ತಾಯಿಸುತ್ತಲೇ ಬಂದಿದ್ದವು. ಕಳೆದ ಮೂರು ವರ್ಷಗಳ ಹಿಂದೆಯೇ ಸರ್ಕಾರ ಇದಕ್ಕೆ ಅನುಮೋದನೆ ಕೂಡ ನೀಡಿತ್ತು. ಪ್ರತಿಮೆ ಅನಾವರಣ ಬಗ್ಗೆ ಯಾವುದೇ ಚರ್ಚೆ ಕೂಡ ನಡೆದಿಲ್ಲ.
ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಸುತ್ತಲೂ ಕಾಂಪೌಂಡ್ ಹಾಗೂ ರಾತ್ರಿ ವೇಳೆ ಭದ್ರತೆ ಇರುವ ಕಾರಣ ಇಲ್ಲಿಯೇ ಪ್ರತಿಮೆ ಸ್ಥಾಪಿಸಲಾಗಿದೆ. ನಗರಕ್ಕೆ ಕಳಸ ಪ್ರಾಯವಾದ ಡಿಸಿ ಸಂರ್ಕೀಣದ ಮುಂದೆ ಮಹನೀಯರ ಪ್ರತಿಮೆಗಳು ಆದಷ್ಟು ಬೇಗ ಅನಾವರಣವಾಗಲಿ ಎಂಬುದು ಎಲ್ಲರ ಆಶಯ.












Click it and Unblock the Notifications