ಕವಣಾಪುರ ಶಾಲಾ ಕೊಠಡಿಯ ಕಬೋರ್ಡ್ ನಲ್ಲಿ ನಾಗರ ಹಾವು ಪ್ರತ್ಯಕ್ಷ
ರಾಮನಗರ, ಜೂನ್.25: ಇತ್ತೀಚಿನ ದಿನಗಳಲ್ಲಿ ಹಾವುಗಳ ಹಾವಳಿ ಹೆಚ್ಚಾಗುತ್ತಿದ್ದು, ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುತ್ತಿರುವ ಹಾವುಗಳು ಮನುಷ್ಯನನ್ನು ಭಯಗೊಳಿಸುತ್ತಿರುವ ಉದಾಹರಣೆಗಳು ನಮ್ಮ ಮುಂದೆ ಸಾಕಷ್ಟಿವೆ.
ಹಾಗೆಯೇ ಇಂದು ಬೆಳಗ್ಗೆ ರಾಮನಗರ ತಾಲೂಕಿನ ಕವಣಾಪುರ ಸರ್ಕಾರಿ ಶಾಲೆಯ ಕೊಠಡಿಯಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಮಕ್ಕಳು ಮತ್ತು ಶಿಕ್ಷಕ ವೃಂದ ಭಯಭೀತಗೊಂಡ ಘಟನೆ ನಡೆದಿದೆ.
ಸವದತ್ತಿಯಲ್ಲಿ ಹಾವುಗಳಿಗೆ ಸ್ವಂತ ಮನೆ ಬಿಟ್ಟ ಮಾಲೀಕ ಬಾಡಿಗೆ ಮನೆ ಪಾಲು!
ಗ್ರಾಮದ ಸರ್ಕಾರಿ ಶಾಲಾ ಕೊಠಡಿಯ ಕಬೋರ್ಡ್ ನಲ್ಲಿ ಪ್ರತ್ಯಕ್ಷವಾದ ಹಾವು ಕೆಲಕಾಲ ಆತಂಕ ಮೂಡಿಸಿದ್ದು, ತಕ್ಷಣ ಎಚ್ಚೆತ್ತ ಶಿಕ್ಷಕರು ಮಕ್ಕಳನ್ನು ಬೇರೆ ಕೊಠಡಿಗೆ ಸ್ಥಳಾಂತರ ಮಾಡಿ, ಕೊಠಡಿ ಬಾಗಿಲು ಮುಚ್ಚಿ ಉರಗ ತಜ್ಞರನ್ನು ಕರೆಸಿ ಹಾವು ಹಿಡಿಸಿದ್ದಾರೆ..
7 ಅಡಿ ಉದ್ದದ ಗೋಧಿ ನಾಗರ ಹಾವನ್ನು ರಕ್ಷಣೆ ಮಾಡಿದ ಅಮಾನ್ ಖಾನ್ ಉರಗವನ್ನು ದೂರದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಮಕ್ಕಳಿಗೆ ಹಾವಿನ ಬಗ್ಗೆ ಮಾಹಿತಿ ನೀಡಿ, ಹಾವುಗಳ ಬಗ್ಗೆ ಮಕ್ಕಳಲ್ಲಿದ್ದ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.
ಶಾಲೆ ಸುತ್ತಲು ಹೊಲ, ಗದ್ದೆಗಳು ಇರುವುದರಿಂದ ಹಾವುಗಳ ಓಡಾಟ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗಷ್ಟೆ ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮದ ಮನೆಯೊಂದಕ್ಕೆ ಬಂದ ನಾಗರ ಹಾವು ಮನೆಯ ಹೇಂಟೆಯನ್ನು ಕೊಂದು 7 ಮೊಟ್ಟೆಗಳನ್ನು ಅನಾಮತ್ ನುಂಗಿತ್ತು. ಗಾಬರಿಗೊಂಡ ಮನೆಯವರು ತಕ್ಷಣ ಉರಗ ತಜ್ಞ ಗುರುರಾಜ್ ಗೆ ಕರೆ ಮಾಡಿದ್ದರು.
ಮೊಟ್ಟೆಯನ್ನು ನುಂಗಿ ಅಟ್ಟ ಏರಿದ ಹಾವನ್ನು ಗುರುರಾಜ್ ಉಪಾಯವಾಗಿ ಕೆಳಕ್ಕಿಳಿಸಿದ ಬಳಿಕ ಭಯಗೊಂಡ ಆ ಹಾವು, ನುಂಗಿದ್ದ ಮೊಟ್ಟೆಗಳನ್ನು ವಾಂತಿ ಮಾಡಿ ಪಲಾಯನ ಮಾಡಲು ಪ್ರಯತ್ನಿಸಿತ್ತು.
ಹಾಗೆಯೇ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ರಸ್ತೆ ಪಕ್ಕದ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞರು ರಕ್ಷಿಸಿದ್ದರು.