ಸಂಕ್ರಾಂತಿ ಸಂಭ್ರಮಕ್ಕೆ ಭರ್ಜರಿ ತಯಾರಿ: ತರಕಾರಿ, ರೊಟ್ಟಿಗಳಿಗೆ ಹೆಚ್ಚಿದ ಬೇಡಿಕೆ
ರಾಯಚೂರು ಜನವರಿ 14: ಜಿಲ್ಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುವುದು ವಾಡಿಕೆ. ಈ ವರ್ಷ ಸಂಕ್ರಾಂತಿ ಆಚರಿಸುವುದಕ್ಕೆ ಜನರು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಸಂಕ್ರಾಂತಿ ಭಾನುವಾರ ಇದ್ದರೂ ಶುಕ್ರವಾರದಿಂದಲೇ ಮಾರುಕಟ್ಟೆಯಲ್ಲಿ ಖರೀದಿ,ಮಾರಾಟ ಜೋರಾಗಿದೆ. ಬೇಡಿಕೆ ಹೆಚ್ಚಳವಾದ ಕಾರಣ ತರಕಾರಿ ದರಗಳು ಕೂಡಾ ಏರುಮುಖವಾಗಿವೆ.
ಮಾರುಕಟ್ಟೆಯಲ್ಲಿ ಚವಳಿಕಾಯಿ ದರ ಗಗನ ಮುಖಿಯಾಗಿದ್ದು, ಕೆಜಿಗೆ ₹60 ರಷ್ಟಿದ್ದ ದರವು ಈಗ ₹100 ಕ್ಕೆ ತಲುಪಿದೆ. ಬದನೆಕಾಯಿ, ಬೆಂಡಿಕಾಯಿ ಹಾಗೂ ಹಿರೇಕಾಯಿ ದರಗಳು ಶೇ 30ರಷ್ಟು ಏರಿಕೆಯಾಗಿವೆ.
ಸಂಕ್ರಾಂತಿಗೆ ಹೆಚ್ಚಿದ ರೊಟ್ಟಿ ಸಜ್ಜೆ ಬೆಲೆ
ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ, ಸಡಗರ ಕಾಣುತ್ತಿದೆ. ಹಬ್ಬಕ್ಕೆ ಬೇಕಾಗುವ ವಿವಿಧ ಸಾಮಗ್ರಿಗಳ ಖರೀದಿ, ಮಾರಾಟ ಗಮನ ಸೆಳೆಯುತ್ತಿದೆ. ಸಂಕ್ರಾಂತಿ ದಿನದಂದು ತರಹೇವಾರಿ ತರಕಾರಿ ಪಲ್ಲೆಗಳನ್ನು ತಯಾರಿಸಿ ಸಜ್ಜೆ ರೊಟ್ಟಿರೊಂದಿಗೆ ಸವಿಯುವುದು ವಿಶೇಷ.
ಹೀಗಾಗಿ ರಾಯಚೂರಿನಲ್ಲಿರುವ ರೊಟ್ಟಿ ಕೇಂದ್ರಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿಯೇ ಸಜ್ಜೆ ರೊಟ್ಟಿಗಳನ್ನು ಸಿದ್ಧಪಡಿಸಲಾಗುತ್ತದೆ. ಅಲ್ಲದೆ ಅಗಸಿ ಪುಡಿ, ಶೇಂಗಾ ಪುಡಿ, ಗುರ್ರೆಗಳ್ಳು ಪುಡಿ, ಪುಟಾಣಿ ಪುಡಿ, ರಂಜಕಾದ ಖಾರ ಹಾಗೂ ಪುಂಡಿ ಪಲ್ಲೆಗಳಿಗೂ ಬೇಡಿಕೆ ಹೆಚ್ಚಳವಾಗಿದೆ.
ಭರ್ಜರಿ ಭೋಜನ ಸವಿಯಲು ಭಾರೀ ತಯಾರಿ
ರಾಯಚೂರಿನ ಮಾರುಕಟ್ಟೆಗಳಲ್ಲಿ ಹಸಿಕಡಲೆ ಗುಚ್ಚಗಳ ಮಾರಾಟ, ಖರೀದಿಯೂ ಜೋರಾಗಿದೆ. ಕಬ್ಬು ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸುತ್ತಿದ್ದಾರೆ. ಒಟ್ಟಾರೆ ಸಂಕ್ರಾಂತಿ ಹಬ್ಬದ ನಿಮಿತ್ತ ಭರ್ಜರಿ ಭೋಜನ ಸವಿಯುವುದಕ್ಕೆ ಭಾರೀ ತಯಾರಿ ಮಾಡಿಕೊಳ್ಳಲಾಗಿದೆ. ಶನಿವಾರ ಹಾಗೂ ಭಾನುವಾರ ತರಕಾರಿ ದರಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಮಾರುಕಟ್ಟೆಯಲ್ಲಿ ಬೆಳಗಿನಿಂದಲೇ ಜನ ದಟ್ಟಣೆ
ತರಕಾರಿ ಖರೀದಿಗಾಗಿ ಜನರು ಮುಗಿ ಬೀಳುತ್ತಿರುವುದರಿಂದ ರಾಯಚೂರಿನ ಎಂ.ವೀರಣ್ಣ ವೃತ್ತದಲ್ಲಿ, ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ, ರೈತರ ಸಂತೆ ಕಟ್ಟೆಯಲ್ಲಿ ಹಾಗೂ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಬೆಳಗಿನ ಜಾವದಿಂದ ದಟ್ಟಣೆ ಶುರುವಾಗಿದೆ. ತಳ್ಳು ಗಾಡಿಗಳಲ್ಲಿ, ಕಿರಾಣಿ ಅಂಗಡಿಗಳ ಎದುರು, ಬೀದಿಬದಿ ತರಕಾರಿ ಮಾರಾಟ ಮಳಿಗೆಗಳಲ್ಲಿ ರಾಶಿ ರಾಶಿ ತಾಜಾ ತರಕಾರಿ ಜನರನ್ನು ಸೆಳೆಯುತ್ತಿದ್ದು, ಸಂಕ್ರಾಂತಿ ಸಡಗರವನ್ನು ಇಮ್ಮಡಿಗೊಳಿಸಿದೆ.
ಬೆಲೆ ಏರಿಕೆಯ ಬಗ್ಗೆ ಗ್ರಾಹಕರು ಹೇಳಿದ್ದೇನು..?
"ತರಕಾರಿ ದರಗಳು ಎಷ್ಟೇ ದುಬಾರಿಯಾದರೂ ಕನಿಷ್ಠ ಐದು ಬಗೆಯ ಕಾಯಿಪಲ್ಲೆ ಹಾಗೂ ಕಾಳುಗಳನ್ನು ಎಲ್ಲರೂ ಖರೀದಿಸುತ್ತಾರೆ. ಬಡವರು ಕೂಡಾ ಸಂಕ್ರಾಂತಿ ದಿನದಂದು ಸಂತೋಷದಿಂದ ಊಟ ಮಾಡುತ್ತಾರೆ. ಚಳಿಗಾಲ ಮುಗಿಯುತ್ತಿದ್ದು, ಇನ್ನು ಬೇಸಿಗೆ ಶುರುವಾಗುತ್ತದೆ. ಚೆನ್ನಾಗಿ ಊಟ ಮಾಡಿಕೊಂಡು ಬೇಸಿಗೆ ಬಿಸಿಲು ಕಾಯಿಸಲು ಸಿದ್ಧವಾಗುವುದಕ್ಕೆ ಸಂಕ್ರಾಂತಿ ಪ್ರೇರೆಪಿಸುತ್ತಿದೆ" ಎಂದು ಐಬಿ ಕಾಲೋನಿಯ ವೆಂಕಟೇಶ ಹೇಳಿದರು.