ರಾಯಚೂರು: ಹೆಚ್ಚಿದ ಮಳೆ, ಕಡಿಮೆಯಾಯ್ತು ವಿದ್ಯುತ್ ಬೇಡಿಕೆ
ರಾಯಚೂರು, ಜೂನ್.20: ರಾಜ್ಯದಲ್ಲಿ ಮಳೆಯಾಗುತ್ತಿದ್ದು, ವಿದ್ಯುತ್ ಬೇಡಿಕೆ ಕಡಿಮೆಯಾಗುತ್ತಿದೆ. ಜೊತೆಗೆ ನಿಸರ್ಗದತ್ತವಾದ ವಿದ್ಯುತ್ ಉತ್ಪಾದನೆ ಹೆಚ್ಚಳವಾಗುತ್ತಿದೆ. ಥರ್ಮಲ್ ಪವರ್ ಘಟಕಗಳನ್ನು ಬಂದ್ ಮಾಡಲಾಗಿದೆ. ವಿದ್ಯುತ್ ಅಭಾವ ಇಲ್ಲದಿರುವುದರಿಂದ ಕೇಂದ್ರದಿಂದ ಸರಬರಾಜು ಆಗುತ್ತಿದ್ದ ಪವರ್ ಪ್ರಮಾಣದಲ್ಲಿ ಕಡಿಮೆ ತೆಗೆದುಕೊಳ್ಳಲಾಗುತ್ತಿದೆ.
ಪ್ರತಿ ವರ್ಷ ರಾಜ್ಯದಲ್ಲಿ ವಿದ್ಯುತ್ ಅಭಾವ ಕಾಡುತ್ತಿತ್ತು. ಇನ್ನು ಬೇಸಿಗೆಯಲ್ಲಿ ಪವರ್ ಕಟ್ ಸಮಸ್ಯೆ ಸಾಮಾನ್ಯ ಎನ್ನುವ ಸ್ಥಿತಿ ಕಂಡು ಬರುತ್ತಿತ್ತು. ಆದರೆ ಈ ಬಾರಿ ಕರ್ನಾಟಕ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ನಿಟ್ಟಿಸುರು ಬಿಡುತ್ತಿದ್ದಾರೆ.
ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಫ್ರೆಂಚ್ ಕಂಪನಿಯೊಂದಿಗೆ ಒಪ್ಪಂದ
ರಾಯಚೂರಿನ ಆರ್ಟಿಪಿಎಸ್, ವೈಟಿಪಿಎಸ್ ಹಾಗೂ ಬಳ್ಳಾರಿಯ ಬಿಪಿಟಿಎಸ್ ಘಟಕಗಳನ್ನ ಬಹುತೇಕವಾಗಿ ಬಂದ್ ಮಾಡಲಾಗಿದೆ. ಸೋಲಾರ್ ಹಾಗೂ ವಿಂಡೋ ಪವರ್ ಉತ್ಪಾದನಾ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
ಕಳೆದ ಬೇಸಿಗೆಯಲ್ಲಿ 10,800 ಮೆಗಾವಾಟ್ವರೆಗೆ ವಿದ್ಯುತ್ ಬೇಡಿಕೆಯಿತ್ತು. ಆದರೆ ಈಗ ಏಳರಿಂದ ಎಂಟು ಸಾವಿರ ಮೆಗಾವಾಟ್ಗೆ ಕುಸಿದಿದೆ. ರಾಯಚೂರಿನ ಆರ್ಟಿಪಿಎಸ್ನ 8, ವೈಟಿಪಿಎಸ್ನ 2 ಹಾಗೂ ಬಿಟಿಪಿಎಸ್ನ ಮೂರು ಘಟಕಗಳಿಂದ 4,240 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದೆ.
ಸದ್ಯಕ್ಕೆ ಸೋಲಾರ್ ಹಾಗೂ ವಿಂಡೋ ಪವರ್ ಮೂಲಕ ಸುಮಾರು ಮೂರು ಸಾವಿರ ಮೆಗಾವಾಟ್ ಉತ್ಪಾದನೆಯಾಗುತ್ತಿದೆ. ಹೀಗಾಗಿ ಆರ್ಟಿಪಿಎಸ್ನ 4, 5 ಮತ್ತು 8ನೇ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಉಳಿದವುಗಳನ್ನ ಬಂದ್ ಮಾಡಲಾಗಿದೆ.
ಸದ್ಯದ ವಾತಾವರಣ ಹಾಗೂ ರಾಜ್ಯ ಸರ್ಕಾರವು ಹಸಿರು ಇಂಧನಕ್ಕೆ ನೀಡಿರುವ ಆದ್ಯತೆಯಿಂದ ಲಾಭದಾಯಕವಾಗುತ್ತಿದೆ. ಪರ್ಯಾಯ ಮೂಲಗಳಿಂದ ವಿದ್ಯುತ್ ಉತ್ಪಾದನಾ ಕಾರ್ಯ ಯಶಸ್ವಿಯಾಗುತ್ತಿದೆ.