ಸಾರಿಗೆ ನೌಕರರಿಗೆ ಪ್ರತಿ ತಿಂಗಳ ಮೊದಲ ದಿನವೇ ವೇತನ ಪಾವತಿಸಲಾಗುವುದು: ಶ್ರೀರಾಮುಲು ಭರವಸೆ
ರಾಯಚೂರು, ಡಿಸೆಂಬರ್, 13: ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಎಲ್ಲ ನೌಕರರ ವೇತನ ಪರಿಷ್ಕರಣೆಗೆ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಭರವಸೆ ನೀಡಿದರು.
ಮಾನ್ವಿ ಪಟ್ಟಣದಲ್ಲಿ 6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೂತನ ಬಸ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಸಾರಿಗೆ ಸಂಸ್ಥೆಯ ನೌಕರರಿಗೆ 2016ರಿಂದ ವೇತನ ಪರಿಷ್ಕರಣೆ ಆಗಿಲ್ಲ. ಈ ಬೇಡಿಕೆ ಅನ್ವಯ 4 ನಿಗಮಗಳ ನೌಕರರ ವೇತನ ಪರಿಷ್ಕರಣೆಗೆ 4 ಸಾವಿರ ಕೋಟಿ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಈ ಕುರಿತು ಅಧಿಕಾರಿಗಳು ಹಾಗೂ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿದ್ದು, ಶೀಘ್ರದಲ್ಲೇ ವೇತನ ಪರಿಷ್ಕರಣೆ ಬೇಡಿಕೆ ಈಡೇರಲಿದೆ. ಪ್ರತಿ ತಿಂಗಳು ನಿಗದಿತ ಸಮಯ ದಿನಾಂಕ 1ಕ್ಕೆ ನೌಕರರಿಗೆ ವೇತನ ಪಾವತಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕ ಭಾಗಕ್ಕಾಗಿ 650 ಹೊಸ ಬಸ್ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕಲಬುರಗಿ, ರಾಯಚೂರು, ಬೀದರ್ ಜಿಲ್ಲೆಗಳಿಂದ ನೇರವಾಗಿ ಬೆಂಗಳೂರಿಗೆ ತೆರಳುವ 6 ಹೊಸ ವೋಲ್ವೊ ಬಸ್ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಅಪಘಾತ ರಹಿತ ಚಾಲನೆ, ಪ್ರಶಸ್ತಿ ಪ್ರದಾನ
ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಮಾನ್ವಿ ಪಟ್ಟಣದ ವ್ಯಾಪ್ತಿಯಲ್ಲಿ ಸಂಚಾರಕ್ಕಾಗಿ ಸಿಟಿ ಬಸ್ ಸೌಲಭ್ಯ ಹಾಗೂ ಸಿರವಾರ ತಾಲೂಕಿಗೆ ನೂತನ ಬಸ್ ಘಟಕ ಮಂಜೂರು ಮಾಡಬೇಕು ಎಂದು ಕೋರಿದರು. ಅಪಘಾತ ರಹಿತ ಚಾಲನೆ ಮಾಡಿದ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗದ 11 ಚಾಲಕರಿಗೆ ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಗಂಗಾಧರ ನಾಯಕ ಹಾಗೂ ಬಸನಗೌಡ ಬ್ಯಾಗವಾಟ, ಸಾರಿಗೆ ನಿಗಮದ ಅಧಿಕಾರಿಗಳು, ಸ್ಥಳೀಯ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ಮಾನ್ವಿ ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಸಚಿವ ಬಿ.ಶ್ರೀರಾಮುಲು ಉದ್ಘಾಟಿಸಿದರು. ಪಟ್ಟಣದಲ್ಲಿ ಒಟ್ಟು 4.50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ವಸತಿ ನಿಲಯದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಹೇಳಿದರು.

ಗ್ರಾಮಗಳವರೆಗೂ ಹವಾನಿಯಂತ್ರಿತ ಸಾರಿಗೆ ಸೌಲಭ್ಯ
ಲಿಂಗಸುಗೂರು ಪಟ್ಟಣದಲ್ಲಿ ಸೋಮವಾರ ನೂತನ ಬಸ್ ನಿಲ್ದಾಣ ಮತ್ತು ವಸತಿ ಗೃಹಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದ ಅವರು, ರಾಜ್ಯದ ಬಡವರು, ಮಧ್ಯಮ ವರ್ಗದವರು ಕೂಡ ಹೈಟೆಕ್ ಬಸ್ಗಳಲ್ಲಿ ಸಂಚರಿಸುವ ವ್ಯವಸ್ಥೆಗೆ ಚಿಂತನೆ ನಡೆದಿದೆ. 2030ರ ಅವಧಿಯೊಳಗಡೆ ರಾಜ್ಯದೆಲ್ಲೆಡೆ ಗ್ರಾಮೀಣ ಪ್ರದೇಶಗಳಿಗೆ ಹವಾನಿಯಂತ್ರಿತ ಸಾರಿಗೆ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ನಾನು ಸಾರಿಗೆ ಸಚಿವ ಆಗಿರುತ್ತೇನೋ ಇಲ್ಲವೋ ಗೊತ್ತಿಲ. ಆದರೆ ರಾಜಕೀಯದಲ್ಲಿ ಇದ್ದೇ ಇರುತ್ತೇನೆ. ಹೈಟೆಕ್ ಮತ್ತು ಹವಾನಿಯಂತ್ರಿತ ಬಸ್ ವ್ಯವಸ್ಥೆಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಮಂಜೂರಾತಿ ನೀಡಿಯೇ ಹೋಗುವೆ ಎಂದು ಘೋಷಿಸಿದರು.

4 ನಿಗಮಗಳಲ್ಲಿ ಸಂಚರಿಸುತ್ತಿರುವ ಬಸ್ಗಳು
ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ ನಿತ್ಯ ಕೋಟ್ಯಂತರ ಜನ ಸಾರಿಗೆ ಬಸ್ ಸೌಲಭ್ಯ ಬಳಕೆ ಮಾಡುತ್ತಿದ್ದಾರೆ. ಬಸ್ ನಿಲ್ದಾಣಗಳು ಭಾವೈಕ್ಯತೆ ಕೇಂದ್ರಗಳಾಗಿ ಕಂಗೊಳಿಸುತ್ತಿವೆ. ನಾಲ್ಕು ನಿಗಮಗಳಲ್ಲಿ 40 ಸಾವಿರ ಬಸ್ಗಳು ಸಂಚರಿಸುತ್ತಿವೆ. ಹಾಗೆಯೇ ಬಸ್ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳ ಜೊತೆಗೆ ಸುರಕ್ಷತೆ ಮತ್ತು ಭದ್ರತೆಗೆ ಮಹತ್ವ ನೀಡಲು ಸೂಚಿಸಿದೆ ಎಂದರು.
ನಂತರ ಶಾಸಕ ಡಿ.ಎಸ್ ಹೂಲಗೇರಿ ಮಾತನಾಡಿ, ಸಚಿವರು ತಮ್ಮ ಬೇಡಿಕೆ ಆಧರಿಸಿ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದಾರೆ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಮನವಿ ಮಾಡಿಕೊಂಡಿದ್ದೆ. ನಿವೇಶನ ನೀಡಿದರೆ ತಕ್ಷಣವೆ 2 ಕೋಟಿ ರೂಪಾಯಿ ಬಿಡುಗಡೆ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಸಚಿವರು ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ಮೊಹ್ಮದ್ ಫಯಾಜ್, ಘಟಕ ವ್ಯವಸ್ಥಾಪಕ ಆದಪ್ಪ ಕುಂಬಾರ, ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್, ತಹಶೀಲ್ದಾರ್ಗಳಾದ ಬಲರಾಮ್ ಕಟ್ಟಿಮನಿ, ಹನುಮಂತಪ್ಪ ಕವಿತಾಳ, ಪುರಸಭೆ ಅಧ್ಯಕ್ಷೆ ಸುನಿತಾ ಕೆಂಭಾವಿ, ಉಪಾಧ್ಯಕ್ಷ ಎಂ.ಡಿ. ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ್ ಕುಲಕರ್ಣಿ, ಮುಖಂಡರಾದ ಭೂಪನ ಗೌಡ ಕರಡಕಲ್ಲ, ಶರಣಪ್ಪ ಮೇಟಿ, ವೀರನಗೌಡ ಪಾಟೀಲ, ಗಿರಿಮಲ್ಲನಗೌಡ ಕರಕಲ್ಲ, ಈಶ್ವರ ವಜ್ಜಲ, ಶರಣಬಸವ ಮೇಟಿ, ಚೆನ್ನಬಸವ ವಿಠಲಾಪುರ, ರುದ್ರಪ್ಪ ಬ್ಯಾಗಿ, ರೌಫ್ ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.

ಪರಿಹಾರ ಕೊಡುವ ಭರವಸೆ ನೀಡಿದ ರಾಮುಲು
ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೆ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಖಾತೆ ಹೊಂದಿದವರಿಗೆ 50 ಲಕ್ಷ ರೂಪಾಯಿ ಪರಿಹಾರವನ್ನು ತಕ್ಷಣವೇ ನೀಡುವ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು. ಮುಂದಿನ ಹಂತದಲ್ಲಿ ಲಿಂಗಸುಗೂರಿಗೆ ಪ್ರಾದೇಶಿಕ ಸಾರಿಗೆ ಕಚೇರಿ ನೀಡಲು ಚಿಂತನೆ ನಡೆಸಿದ್ದೇವೆ. ನೌಕರರ ಹಿತರಕ್ಷಣೆಗೆ ಸಂಸ್ಥೆ ಬದ್ಧವಾಗಿದೆ. ಕರ್ತವ್ಯಕ್ಕೆ ಹಾಜರಿ, ರಜೆ ಇತರೆ ವಿಷಯಗಳಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿಗಳು ಬಂದಿವೆ. ಆ ಕುರಿತು ನಿರ್ಭಯದಿಂದ ಆಡಿಯೊ, ವೀಡಿಯೋ ಇತರೆ ದಾಖಲೆ ನೀಡಿದರೆ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳುವೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಅಧಿಕಾರಿ ವರ್ಗಕ್ಕೆ ಎಚ್ಚರಿಕೆ ನೀಡುತ್ತೇನೆ. ದೂರು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.












Click it and Unblock the Notifications