ಬಿಸಿಲೂರು ರಾಯಚೂರಿನಲ್ಲಿ ಈಗ ಗ್ರಾಮೀಣ ಕ್ರೀಡೆಗಳದ್ದೇ ಕಾರುಬಾರು
ರಾಯಚೂರು, ಜುಲೈ. 01: ತಮಟೆ ಸದ್ದು, ಸದ್ದಿನ ಜೊತೆಗೆ ಕ್ರೀಡಾಭಿಮಾನಿಗಳ ಚಪ್ಪಾಳೆ, ಕೇಕೆ, ಅಖಾಡದಲ್ಲಿ ತಾಕತ್ತು ಪ್ರದರ್ಶನ ಮಾಡುತ್ತಿರೋ ಪ್ರತಿಭೆಗಳು. ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ತೊಡೆ ತಟ್ಟಿ, ಬಲ ಪ್ರದರ್ಶಿಸಿದ ಮಹಿಳಾ ಮಣಿಗಳು.
ಈ ಸಂಭ್ರಮದ ವಾತಾವರಣ ಕಂಡು ಬಂದಿದ್ದು ಬಿಸಿಲೂರು ರಾಯಚೂರಿನಲ್ಲಿ. ನಗರದ ಗಂಜ್ ಆವರಣದಲ್ಲಿ ಮುನ್ನೂರು ಕಾಪು ಸಮಾಜ ಆಯೋಜಿಸಿದ್ದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಗ್ರಾಮೀಣ ಕ್ರೀಡೆಗಳ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ವರಮಹಾಲಕ್ಷ್ಮೀ ಹಬ್ಬ: ಕೇವಲ 4,500ರೂ.ಗೆ ಮೈಸೂರು ಸಿಲ್ಕ್ ಸೀರೆ
ಮುಂಗಾರು ಹಬ್ಬದಲ್ಲಿ ಗ್ರಾಮೀಣ ಕ್ರೀಡೆಗಳದ್ದೇ ಸಂಭ್ರಮ. ಕೈ ಕಲ್ಲು, ಮರಳಿನ ಚೀಲ, ಗುಂಡು ಎತ್ತುವುದು ಮತ್ತು ಅಖಾಡದಲ್ಲಿ ಪೈಲ್ವಾನ್ಗಳ ಕುಸ್ತಿ ನೋಡಗರ ಕಣ್ಮನ ಸೆಳೆದವು.
ತಾಕತ್ತು ಪ್ರದರ್ಶನ
ವಿಶೇಷವಾಗಿ ತಾಕತ್ತು ಪ್ರದರ್ಶನದ ಕೈ ಕಲ್ಲು, ಮರಳಿನ ಚೀಲ, ಕಲ್ಲಿನ ಗುಂಡು ಎತ್ತುವ ಹಾಗೂ ಕುಸ್ತಿ ಪಂದ್ಯಾವಳಿಗಳು ನೋಡುಗರ ಹುಬ್ಬೇರುವಂತೆ ಮಾಡಿದವು. ರಾಜ್ಯದ ವಿವಿಧ ಭಾಗಗಳ ಪೈಲ್ವಾನ್ಗಳು ಈ ಗ್ರಾಮೀಣ ಆಟದಲ್ಲಿ ಭಾಗವಹಿಸಿದ್ದರು. ಪರಂಪರಗತವಾಗಿ ಬಂದಿರುವ ಈ ಗ್ರಾಮೀಣ ಕ್ರೀಡೆಗಳಲ್ಲಿ ಎಲ್ಲ ತರಹದ ಪ್ರತಿಭೆಗಳು ಭಾಗವಹಿಸಿ ಸಂಭ್ರಮಿಸಿದರು.
18 ವರ್ಷಗಳಿಂದಲೂ ನಡೆಯುತ್ತಿದೆ
ರಾಯಚೂರಿನ ಮುನ್ನೂರು ಕಾಪು ಸಮಾಜ ಕಳೆದ 18 ವರ್ಷಗಳಿಂದ ಮುಂಗಾರು ಸಾಂಸ್ಕೃತಿ ಹಬ್ಬ ಆಯೋಜಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಹಬ್ಬವನ್ನು ನಡೆಸಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ಎತ್ತುಗಳಿಂದ ಕಲ್ಲಿನ ಭಾರ ಎಳೆಯುವ ಸ್ಪರ್ಧೆ ವಿಶೇಷವಾಗಿರುತ್ತದೆ.
ವಿಜೇತರಿಗೆ ಬೆಳ್ಳಿ ಕಡಗ
ಹಬ್ಬ ನಡೆಯುವ ಮೂರು ದಿನಗಳ ಕಾಲ ರಾಯಚೂರಿನ ಗಂಜ್ ಆವರಣ ಸಂಭ್ರಮದಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಗೆದ್ದ ವಿಜೇತರಿಗೆ ಬೆಳ್ಳಿ ಕಡಗಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಉಳಿಸಿ ಬೆಳೆಸುವ ಕಾರ್ಯ
ಬದಲಾದ ಜೀವನ ಶೈಲಿ, ಆಧುನಿಕ ಭರಾಟೆಯಿಂದ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಯುವಜನ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಆಯೋಜನೆ ಕೂಡ ಕಡಿಮೆಯಾಗುತ್ತಿವೆ. ಆದರೆ ರಾಯಚೂರಿನ ಮುನ್ನೂರು ಕಾಪು ಸಮಾಜ ಒಂದೂವರೆ ದಶಕದಿಂದ ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಸಂಗತಿ.