ಭಾರೀ ಮಳೆ: ನಾರಾಯಣಪುರ ಜಲಾಶಯ ಭರ್ತಿ, ಕೃಷ್ಣಾ ನದಿಗೆ ನೀರು ಬಿಡುಗಡೆ
ಯಾದಗಿರಿ, ಆಗಸ್ಟ್ 09: ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ನಾರಾಯಣಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಯಿತು.
ನಾರಾಯಣಪುರ ಜಲಾಶಯದಿಂದ 2 ಲಕ್ಷ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಇಷ್ಟು ನೀರು ಬಿಟ್ಟರೂ ಜನರು ತಮ್ಮ ಪ್ರಾಣ ಪಣಕ್ಕಿಟ್ಟು ತೆಪ್ಪದಲ್ಲಿ ಓಡಾಡುತ್ತಿದ್ದಾರೆ.
ಇದು ಲಿಂಗಸೂಗೂರು ತಾಲೂಕಿನ ಕಡದರಗಡ್ಡಿ ಗ್ರಾಮಸ್ಥರ ನಿತ್ಯದ ಗೋಳಾಗಿದೆ. ಗೋನವಾಟ್ಲ ಗ್ರಾಮದಿಂದ ಕಡದರಗಡ್ಡಿಗೆ ತೆಪ್ಪದಲ್ಲಿಯೇ ಓಡಾಟ ನಡೆಸಬೇಕಾಗಿದೆ. ಸೇತುವೆ ಇಲ್ಲದಿರುವುದಕ್ಕೆ ಜನರು ಹಿಡಿಶಾಪ ಹಾಕುತ್ತಾ ಜೀವಪಣಕ್ಕೆ ಇಟ್ಟು ತೆಪ್ಪದಲ್ಲಿ ಓಡಾಟ ನಡೆಸುತ್ತಿದ್ದಾರೆ.

ಶೀಲಹಳ್ಳಿ ಸೇತುವೆ ಮುಳುಗಡೆಯಿಂದ ಕಡದರಗಡ್ಡಿ ಗ್ರಾಮದ ಸಂಪರ್ಕ ರಸ್ತೆ ಕಡಿತಗೊಂಡಿದ್ದು, ಕಡದರಗಡ್ಡಿಯಿಂದ ಲಿಂಗಸೂಗೂರಿಗೆ ಸುತ್ತಿಕೊಂಡು ಹೋಗುವ ಬದಲು ಜೀವದ ಹಂಗು ತೊರೆದು ತೆಪ್ಪದಲ್ಲಿ ಕುಳಿತು ತುಂಬು ನದಿಯಲ್ಲಿಯೇ ಹರಸಾಹಸ ಪಡುತ್ತಿದ್ದಾರೆ.
ಕಡದರಗಡ್ಡಿ ಹಾಗೂ ಗೋನವಾಟ್ಲಗೆ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು, ಕೊಟ್ಟ ಭರವಸೆಯಂತೆ 4 ಕೋಟಿ ರೂ. ಹಣ ಸಹ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದಿಂದ ಬಿಡುಗಡೆಯೂ ಆಗಿದೆ. ಆದರೆ ಸೇತುವೆ ನಿರ್ಮಾಣಕ್ಕೆ 18 ಕೋಟಿ ರುಪಾಯಿ ವೆಚ್ಚ ಸಾಧ್ಯತೆ ಹಿನ್ನಲೆಯಲ್ಲಿ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.
ಇನ್ನು ನಾರಾಯಣಪುರ ಜಲಾಶದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಿದ್ದರ ಪರಿಣಾಮ, ಪ್ರವಾಹದ ತಪ್ಪಲು ನಡುಗಡ್ಡೆಯಲ್ಲಿ ಕುರಿಗಾಹಿ 230 ಕುರಿಗಳೊಂದಿಗೆ ಸಿಲುಕಿಕೊಂಡಿದ್ದಾನೆ.
ಕುರಿಗಾಹಿಯ ರಕ್ಷಣೆಗೆ ನದಿ ತೀರಕ್ಕೆ ಕೇಂದ್ರದ ಎನ್.ಡಿ.ಆರ್.ಎಫ್ ನ 16 ಜನರ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯ ತೀವ್ರ ಗತಿಯಲ್ಲಿ ಸಾಗಿದೆ. ಸದ್ಯಕ್ಕೆ ಜಲಾಶಯದಿಂದ ನದಿಗೆ ಹರಿವು 2.20 ಲಕ್ಷ ಕ್ಯೂಸೆಕ್ ನಿಂದ 1.79 ಲಕ್ಷ ಕ್ಯೂಸೆಕ್ ಗೆ ಇಳಿಕೆ ಮಾಡಲಾಗಿದೆ.












Click it and Unblock the Notifications