ಅನ್ನಭಾಗ್ಯ ಅಕ್ಕಿ ಬದಲು ಹಣ: ಆಧಾರ್ ಜೋಡಣೆ, ಬ್ಯಾಂಕ್ ಖಾತೆ ತೆರೆಯಲು ಡೆಡ್ಲೈನ್ ನೀಡಿದ ಜಿಲ್ಲಾಡಳಿತ
ರಾಯಚೂರು, ಜುಲೈ 17: ಗ್ಯಾರೆಂಟಿ ಯೋಜನೆಯಡಿ ಪಡಿತರ ಚೀಟಿದಾರರಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಬ್ಯಾಂಕ್ ಖಾತೆಗೆ ತಲಾ 170 ರೂಪಾಯಿ ನಗದು ವರ್ಗಾವಣೆ ಮಾಡುವ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಸಾರ್ವಜನಿಕರು ಬ್ಯಾಂಕ್ ಖಾತೆಗೆ ಆಧಾರ್ ಸೇರಿದಂತೆ ಇ-ಕೆವೈಸಿ ಮಾಡಲು ಅಂಚೆ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ ಮೊರೆ ಹೋಗುತ್ತಿದ್ದಾರೆ.
5ಕೆ.ಜಿ ಅಕ್ಕಿ ಬದಲು ಹಣ ಪಡೆಯಲು ಸರ್ಕಾರ ಜುಲೈ 20ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ ನೀಡಿದ್ದು ಪಡಿತರ ಚೀಟಿದಾರರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಜೊತೆಗೆ ಇ-ಕೆವೈಸಿ ಮಾಡಿಸಿರುವವರಿಗೆ ನಗದು ವರ್ಗಾವಣೆ ಮಾಡಲಾಗಿದ್ದು ಅದರಂತೆ ಜಿಲ್ಲೆಯಲ್ಲಿ 4.53 ಲಕ್ಷ ಆದ್ಯತಾ ಪಡಿತರ ಚೀಟಿಗಳ ಪೈಕಿ 3.37 ಲಕ್ಷ ಪಡಿತರ ಚೀಟಿದಾರರಿಗೆ 19.72 ಕೋಟಿ ರೂಪಾಯಿ ನಗದು ವರ್ಗಾವಣೆ ಮಾಡಲಾಗಿದೆ.

ಪಡಿತರ ಚೀಟಿದಾರರಿಗೆ ಬ್ಯಾಂಕ್ ಖಾತೆ ಸಕ್ರಿಯ , ಆಧಾರ ಜೋಡಣೆ ಇ-ಕೆವೈಸಿ ಮಾಡಿಸಲು ಅಂಚೆ ಇಲಾಖೆ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಪರಿಹಾರ ಮಾಡಲು ನ್ಯಾಯಬೆಲೆ ಅಂಗಡಿ ಮಾಲೀಕರು ಸಭೆ ನಡೆಸಿ ಬ್ಯಾಂಕ್ ಖಾತೆ ಇಲ್ಲದ ಪಡಿತರದಾರರಿಗೆ ಬ್ಯಾಂಕ್ ಖಾತೆ ಇಲ್ಲದ ಪಡಿತರದಾರರಿಗೆ ಬ್ಯಾಂಕ್ ಖಾತೆ ಮಾಡಿಸಲು ಹಾಗೂ ಆಧಾರ್ ಜೋಡಣೆ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಅಂತಹ ಪಡಿತರ ಚೀಟಿದಾರರ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿ ಮುಂದೆ ಲಗತ್ತಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಆಧಾರ್ ಜೋಡಣೆಯಾಗದೆ ಇರುವುದರಿಂದ ಜಿಲ್ಲೆಯ ಪಡಿತರದಾರರಿಗೆ ಸಮಸ್ಯೆ ಎದುರಾಗಿದ್ದು, ಜಿಲ್ಲೆಯಲ್ಲಿ ಪಡಿತರ ಚೀಟಿದಾರರ ಪೈಕಿ 40,925 ಕುಟುಂಬದವರು ಬ್ಯಾಂಕ್ ಖಾತೆ ಹೊಂದಿಲ್ಲ. 8,353 ಜನರ ಬ್ಯಾಂಕ್ ಖಾತೆಗಳು ಸಕ್ರಿಯವಾಗಿಲ್ಲ . 227 ಪಡಿತರದಾರರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿಲ್ಲ. ಇದರಿಂದಾಗಿ 49,505 ಪಡಿತರದಾರರಿಗೆ ನಗದು ವರ್ಗಾವಣೆ ಮಾಡಲು ಸಮಸ್ಯೆಯಾಗಿದೆ.

ನಗದು ವರ್ಗಾವಣೆಗಾಗಿ ಬ್ಯಾಂಕ್ ಖಾತೆ ಹೊಂದಿರದ ಪಡಿತರ ಚೀಟಿದಾರರು ಬ್ಯಾಂಕ್ ಖಾತೆ ತೆರೆಯಲು ಅನುಕೂಲವಾಗುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಂಚೆ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಿಬಿರಗಳನ್ನು ಆಯೋಜಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಖಾತೆ ತೆಗೆಯುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರ ನೆರವಿನೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ತೆರೆಯಲು ಪಡಿತರ ಚೀಟಿದಾರರಿಗೆ ಮಾಹಿತಿ ನೀಡುವ ಕೆಲಸ ಜೋರಾಗಿ ಸಾಗಿದೆ. ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸುವ ಕಾರ್ಯ ಚುರುಕುಗೊಂಡಿದೆ.
ದೇವದುರ್ಗ ತಾಲೂಕಿನನಲ್ಲಿ 5,199 ಪಡಿತರದಾರರು ಬ್ಯಾಂಕ್ ಖಾತೆ ಹೊಂದಿಲ್ಲ. 1,135 ಪಡಿತರದಾರರ ಖಾತೆಗಳು ಸಕ್ರಿಯವಾಗಿಲ್ಲ. ಲಿಂಗಸೂಗೂರು ತಾಲೂಕಿನಲ್ಲಿ 10,593 ಪಡಿತರದಾರರು ಬ್ಯಾಂಕ್ ಖಾತೆ ಹೊಂದಿಲ್ಲ. 1,675 ಜನರ ಬ್ಯಾಂಕ್ ಖಾತೆಗಳು ಸಕ್ರಿಯವಾಗಿಲ್ಲ. ಮಾನ್ವಿ ತಾಲೂಕಿನಲ್ಲಿ 6,524 ಪಡಿತರದಾರರು ಬ್ಯಾಂಕ್ ಖಾತೆ ಹೊಂದಿಲ್ಲ. 1,452 ಖಾತೆಗಳು ಸಕ್ರಿಯವಾಗಿಲ್ಲ. ರಾಯಚೂರು ತಾಲೂಕಿನಲ್ಲಿ 10,947 ಪಡಿತರದಾರರು ಬ್ಯಾಂಕ್ ಖಾತೆ ಹೊಂದಿಲ್ಲ. 2,350 ಖಾತೆಗಳು ಸಕ್ರಿಯವಾಗಿಲ್ಲ. ಸಿಂಧನೂರು ತಾಲೂಕಿನಲ್ಲಿ 6,662 ಪಡಿತರದಾರರು ಬ್ಯಾಂಕ್ ಖಾತೆ ಹೊಂದಿಲ್ಲ. 1,741 ಖಾತೆಗಳು ಸಕ್ರಿಯವಾಗಿಲ್ಲ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
ಪಡಿತರ ಚೀಟಿದಾರರು ನಗದು ವರ್ಗಾವಣೆ ಸೌಲಭ್ಯ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಇ-ಕೆವೈಸಿ ಮಾಡಿಕೊಳ್ಳಬೇಕು. ಪ್ರಸ್ತುತ ಬ್ಯಾಂಕ್ ಖಾತೆ ಮಾಹಿತಿ ಸರಿಯಿರುವ ಪಡಿತರದಾರರಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹೇಳಿದರು.
ಬ್ಯಾಂಕ್ ಖಾತೆ ಹಾಗೂ ಆಧಾರ್ ಜೋಡಣೆ ಮಾಡದಿರುವ ಪಡಿತರ ಚೀಟಿದಾರರ ಮಾಹಿತಿ ತೆಗೆದುಕೊಂಡು ಅಂಚೆ ಇಲಾಖೆ ಮೂಲಕ ಶಿಬಿರ ನಡೆಸಿ ಪಡಿತರ ಚೀಟಿದಾರರ ಖಾತೆ ತೆರೆಯಲು ಅಭಿಯಾನ ನಡೆಸಲಾಗುತ್ತಿದೆ. ಹಳ್ಳಿಗರು ವಂಚಿತರಾಗಬಾರದು ಎಂಬ ಕಾರಣಕ್ಕೆ ವೈವಿಧ್ಯಮವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಕೃಷ್ಣಶಾವಂತಗೇರಿ ಹೇಳಿದರು.












Click it and Unblock the Notifications