ಕುರಿ ಕಾಯುತ್ತಿದ್ದವ ಇಂದು ಕಾನೂನು ಕಾಪಾಡುತ್ತಿದ್ದಾನೆ!
ರಾಯಚೂರು, ಜನವರಿ 04 : ಅಂದು ಕುರಿಕಾಯುತ್ತಿದ್ದ ಹುಡುಗ ಇಂದು ಪೊಲೀಸ್ ಕಾನ್ಸ್ಟೇಬಲ್. ಇದು 27 ವರ್ಷಗಳ ಹಿಂದಿನ ಕಥೆ. ಕುರಿ ಕಾಯುತ್ತಿದ್ದ ಹುಡುಗ ಇಂದು ಕಾನೂನು ಸುವ್ಯವಸ್ಥೆ ಕಾಪಾಡಲು ಕಾರಣವಾಗಿದ್ದು ಒಬ್ಬರು ಸರ್ಕಾರಿ ಅಧಿಕಾರಿ.
ಜನಪರ ಕಾಳಜಿ ಇರುವ ಅಧಿಕಾರಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ. ಮುಖ್ಯ ಕಾರ್ಯದರ್ಶಿ ಆಗುವ ಮೊದಲು ಐದಾರು ಜಿಲ್ಲೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಎಲ್ಲಾ ಕಡೆಯೂ ಉತ್ತಮ ಹೆಸರು ಸಂಪಾದಿಸಿದ್ದಾರೆ.
ರತ್ನಪ್ರಭಾ ಅವರು 17/5/1990 ರಿಂದ 3/05/1992ರ ತನಕ ರಾಯಚೂರು ಜಿಲ್ಲಾಧಿಕಾರಿಯಾಗಿದ್ದರು. ಆ ಸಂದರ್ಭದಲ್ಲಿ ಅವರು ಮಾಡಿದ ಕೆಲಸವನ್ನು ಇಂದಿಗೂ ಅಲ್ಲಿನ ಜನರು ನೆನಪು ಮಾಡಿಕೊಳ್ಳುತ್ತಾರೆ.

ಕೆ.ರತ್ನಪ್ರಭಾ ಅವರು ರಾಯಚೂರಿನಲ್ಲಿ ಕೆಲಸ ಮಾಡುವಾಗ ಕುರಿ ಕಾಯುತ್ತಿದ್ದ ಹುಡುಗನನ್ನು ಶಾಲೆಗೆ ಸೇರಿಸಿದ್ದರು. ನರಸಪ್ಪ ಎಂಬ ಹುಡುಗ ಈಗ ವಿದ್ಯಾಭ್ಯಾಸ ಮುಗಿಸಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಅವರ ಮುಂದೆ ನಿಂತಿದ್ದಾನೆ.
ಟ್ವಿಟರ್ನಲ್ಲಿ ರತ್ನಪ್ರಭಾ ಅವರು ಈ ಘಟನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳ ಕೆಲಸಕ್ಕೆ ಹಲವಾರು ಜನರು ಮೆಚ್ಚುಗೆ ಸೂಚಿಸಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವಾಗ ರತ್ನಪ್ರಭಾ ಅವರು ಶಾಲೆಯ ಮುಂದೆ ಹುಡುಗನೊಬ್ಬ ಕುರಿ ಕಾಯುವುದನ್ನು ನೋಡಿದ್ದರು. ತಕ್ಷಣ ಕಾರು ನಿಲ್ಲಿಸಿ, ಶಿಕ್ಷಕರನ್ನು ಕರೆದು ಹುಡುಗನನ್ನು ಶಾಲೆಗೆ ಸೇರಿಸಿಕೊಳ್ಳಲು ಸೂಚನೆ ನೀಡಿದ್ದರು.
Narsappa of Idapnur village Raichur said he was grazing sheep near a school & I was passing by as DC in my car, stopped called the school teacher & admitted him & now 27 years later he was before me as a constable.came to Thank Me!! Cant believe small actions hve lasting results.
— Ratna Prabha (@Ratnaprabha_IAS) January 3, 2018
ಈ ಘಟನೆ ನಡೆದು 27 ವರ್ಷಗಳು ಕಳೆದಿವೆ. ಆ ಹುಡುಗ ನರಸಪ್ಪ ಇಂದು ವಿದ್ಯಾಭ್ಯಾಸ ಮುಗಿಸಿ, ಪೊಲೀಸ್ ಕಾನ್ಸ್ಟೇಬಲ್ ಆಗಿ ರತ್ನಪ್ರಭಾ ಅವರ ಮುಂದೆ ನಿಂತಿದ್ದಾನೆ.
ಒಬ್ಬ ಸರ್ಕಾರಿ ಅಧಿಕಾರಿಗೆ ರಾಜ್ಯದ ಮಟ್ಟದಲ್ಲಿ ಸಿಗಬಹುದಾದ ದೊಡ್ಡ ಹುದ್ದೆ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿ.ಎಸ್.). ಕರ್ನಾಟಕದ ಮೂರನೇ ಮಹಿಳಾ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ.
ಕೆ.ರತ್ನಪ್ರಭಾ ಅವರು ಆಂಧ್ರಪ್ರದೇಶ ಮೂಲದವರು ಎಂದರೆ ನೀವು ನಂಬುವುದು ಕಷ್ಟ. ಅಷ್ಟು ಚೆನ್ನಾಗಿ ಅವರು ಕನ್ನಡ ಮಾತನಾಡುತ್ತಾರೆ. ಕರ್ನಾಟಕದವರೇ ಆಗಿ ಹೋಗಿದ್ದಾರೆ.












Click it and Unblock the Notifications