ಸ್ವಚ್ಛ ಭಾರತ ಯೋಜನೆಯಲ್ಲಿ ಶೂನ್ಯ ಪ್ರಗತಿ: ಪಿಡಿಒಗಳಿಗೆ ಡಿಸಿ ನೋಟಿಸ್
ರಾಯಚೂರು, ಜೂನ್.12 : ಸ್ವಚ್ಛಭಾರತ ಯೋಜನೆಯ ಅನುಷ್ಠಾನದಲ್ಲಿ ರಾಯಚೂರು ಜಿಲ್ಲೆಯ ಪಿಡಿಒಗಳು ಎಡವಿದ್ದು, ಎರಡು ತಿಂಗಳ ಅವಧಿಯಲ್ಲಿ ಶೂನ್ಯ ಸಾಧನೆ ಕಂಡು ಬಂದಿದೆ. ಇದರಿಂದ ಪಿಡಿಒಗಳ ವಿರುದ್ಧ ಅಸಮಾಧಾನಗೊಂಡ ಅಧಿಕಾರಿಗಳು 50 ಜನರಿಗೆ ನೋಟಿಸ್ ನೀಡಿದ್ದು, ನೂರಕ್ಕೂ ಹೆಚ್ಚು ಪಿಡಿಒಗಳಿಗೆ ನೋಟಿಸ್ ಜಾರಿ ಮಾಡಲು ಚಿಂತನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಕಾರ್ಯಕ್ರಮ ಸ್ವಚ್ಛ ಭಾರತ ಯೋಜನೆ. ಹೀಗಾಗಿ ದೇಶದೆಲ್ಲೆಡೆ ಸ್ವಚ್ಛ ಭಾರತ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ರಾಯಚೂರು ಜಿಲ್ಲೆಯ ಪಿಡಿಒಗಳು ಸ್ವಚ್ಛ ಭಾರತ ಯೋಜನೆಗೆ ಆದ್ಯತೆಯನ್ನೇ ನೀಡಿಲ್ಲ.
ಕಳೆದ ಎರಡು ತಿಂಗಳ ಸ್ವಚ್ಛ ಭಾರತ ಯೋಜನೆಯ ಪ್ರಗತಿಯೂ ಶೂನ್ಯವಾಗಿದೆ. ಇದರಿಂದ ರಾಜ್ಯದ ಸ್ವಚ್ಛ ಭಾರತ ಯೋಜನೆಯ ಪಟ್ಟಿಯಲ್ಲಿ ರಾಯಚೂರು ಜಿಲ್ಲೆ 30ನೇ ಸ್ಥಾನ ತಲುಪಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಚ್ಛ ಭಾರತ ಅನುಷ್ಠಾನ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ.

ಹೀಗಾಗಿ ಜಿಲ್ಲೆಯ 184 ಗ್ರಾಮ ಪಂಚಾಯಿತಿಗಳ ಪೈಕಿ, 118ರಲ್ಲಿ ಕೆಲಸ ಮಾಡುವ 50 ಪಿಡಿಒಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇನ್ನು ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮ ಪಂಚಾಯತಿಗಳಲ್ಲಿ ಪ್ರತೀ ಗ್ರಾಮಗಳಿಗೆ ಶೌಚಾಲಯ, ಸ್ವಚ್ಛತೆ, ಸ್ವಚ್ಛತಾ ಅರಿವು ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅನುದಾನ ಬಳಕೆ ಮಾಡಬೇಕಿತ್ತು.
ಆದರೆ ಪಿಡಿಒಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮುಂದುವರೆದಿದೆ. ಹೀಗಾಗಿ ಜಿಲ್ಲಾ ಪಂಚಾಯತಿ ಸಿಇಒ ಆಗಿರುವ ಡಿಸಿಯವರ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೆ ಅರಿವು ಮೂಡಿಸುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ.

ಎಲ್ಲದಕ್ಕಿಂದ ಮುಖ್ಯವಾದ ಅಂಶವೆಂದರೆ ರಾಯಚೂರು ಜಿಲ್ಲೆಯಲ್ಲಿ ಪಿಡಿಒಗಳ ಕೊರತೆಯಿದೆ. ಓರ್ವ ಪಿಡಿಒಗಳು ಎರಡು-ಮೂರು ಪಂಚಾಯತಿಗಳ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಸಮರ್ಪಕ ಕೆಲಸ ನಿಭಾಯಿಸಲು ಅನಾನುಕೂಲವಾಗಿರಬಹುದು. ಆದರೆ ನೋಟಿಸ್ ಜಾರಿಗೆ ಪಿಡಿಒಗಳ ಉತ್ತರ ಏನೆಂಬುದಕ್ಕೆ ಕಾಯಬೇಕಿದೆ.












Click it and Unblock the Notifications