Raichur: ಹತ್ತಿ ಮಾರಾಟಕ್ಕೆ ನೂರೆಂಟು ತೊಡಕು; ಬೆಲೆ ಕುಸಿತದಿಂದ ಕಂಗಾಲಾದ ರೈತರು!
ರಾಯಚೂರು ಡಿಸೆಂಬರ್ 5: ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ರೈತರಿಗೆ ಬೆಳೆ ನಷ್ಟದ ಭೀತಿಯ ನಡುವೆ ಹತ್ತಿಯ ದರ ಕುಸಿತ ಸಂಕಷ್ಟಕ್ಕೆ ದೂಡಿದೆ.
ದೇಶದಲ್ಲಿಯೇ ಅತ್ಯಂತ ದೊಡ್ಡ ಹತ್ತಿ ಮಾರುಕಟ್ಟೆಯಾದ ರಾಯಚೂರು ಕೃಷಿ ಉತ್ಪನ್ನ ಹತ್ತಿ ಮಾರುಕಟ್ಟೆಯಲ್ಲಿ ನೂರಾರು ಸಂಖ್ಯೆಯಲ್ಲಿ ಹತ್ತಿಯ ಗಾಡಿಗಳು ಬರುತ್ತಿವೆ. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮಾತ್ರವಲ್ಲದೇ ರಾಯಚೂರು ಆಂಧ್ರಪ್ರದೇಶ, ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡ ಕಾರಣ ಎರಡು ರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ಹತ್ತಿಯ ವಾಹನಗಳು ಎಪಿಎಂಸಿಗೆ ಬರುತ್ತಿವೆ. ಕಳೆದ ವರ್ಷ ಕ್ವಿಂಟಲ್ ಗೆ ₹8,500 ರಿಂದ ₹9000ವರೆಗೆ ಇದ್ದ ಹತ್ತಿ ದರ ಈ ಬಾರಿ ಕ್ವಿಂಟಲ್ ಗೆ ಕೇವಲ ₹6,800ರಿಂದ ₹7,300 ವರೆಗೆ ಇದೆ.

ಒಂದೆಡೆ ಮಳೆ ಕೊರತೆಯಿಂದ ಹತ್ತಿಯ ಇಳುವರಿ ಕಡಿಮೆಯಾಗಿದ್ದು ಮತ್ತೊಂದೆಡೆ ಕಡಿಮೆ ದರ ಇರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹತ್ತಿ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸಿ ನಂತರ ಹತ್ತಿ ಗಿರಣಿಗಳಿಗೆ ಹೋದ ಬಳಿಕ ಹತ್ತಿ ಖರೀದಿದಾರರು ಕ್ವಿಂಟಾಲ್ ಗೆ ₹200 ರಿಂದ ₹300 ದರ ಕಡಿತಗೊಳಿಸುತ್ತಿದ್ದಾರೆ. ರೈತರು ಇದನ್ನು ಪ್ರಶ್ನಿಸಿದರೆ ಹತ್ತಿ ವಾಪಸ್ಸು ತೆಗೆದುಕೊಂಡು ಹೋಗಿ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ರೈತ ಮುಖಂಡ ಲಕ್ಷ್ಮಣ ಗೌಡ ಕಡಗಂದೊಡ್ಡಿ ಅವರು ಅಳಲು ತೋಡಿಕೊಂಡರು.
ರಾಯಚೂರು ಹತ್ತಿ ಮಾರುಕಟ್ಟೆಯಲ್ಲಿ ಜಿಲ್ಲೆ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ನೂರಾರು ಸಂಖ್ಯೆಯಲ್ಲಿ ಟಾಟಾ ಏಸ್, ಮಿನಿ ಲಾರಿಗಳಲ್ಲಿ ಹತ್ತಿ ಆವಕವಾಗುತ್ತಿದೆ. ಎಪಿಎಂಸಿಗೆ ಭರಪೂರ ಆದಾಯ ಬರುತ್ತಿದೆ ಆದರೆ ಎಪಿಎಂಸಿ ಆಡಳಿತ ಮಂಡಳಿಯಿಂದ ರೈತರಿಗೆ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿಯ ವ್ಯವಸ್ಥೆ ಮಾಡದೇ ನಿರ್ಲಕ್ಷಿಸಿದೆ ಎಂದು ಎಪಿಎಂಸಿಗೆ ಹತ್ತಿ ಮಾರಾಟಕ್ಕೆ ತಂದ ಯರಗೇರಾ ಗ್ರಾಮದ ರೈತ ಮಹಾದೇವಪ್ಪ ಆರೋಪಿಸಿದರು.

ಎಪಿಎಂಸಿಗೆ ಮುಳುವಾದ ಕೃಷಿ ತಿದ್ದುಪಡಿ ಕಾಯ್ದೆ: ಹತ್ತಿ ಖರೀದಿಸಿದ ಖರೀದಿದಾರರು ಅವರು ಹೇಳಿದ ವ್ಹೇ ಬ್ರಿಜ್ ನಲ್ಲಿಯೇ ತೂಕ ಮಾಡಿಬೇಕು. ಅನೇಕ ವ್ಹೇ ಬ್ರಿಜ್ ಗಳಲ್ಲಿ 2ರಿಂದ 5 ಕ್ವಿಂಟಾಲ್ ವರೆಗೆ ವ್ಯತ್ಯಾಸ ಬರುತ್ತಿದೆ. ಕಷ್ಟು ಪಟ್ಟು ಬೆಳೆದು ಮಾರುಕಟ್ಟೆಗೆ ತರುವವರೆಗೆ ಲೋಡ್, ಅನ್ಲೋಡ್, ಸಾರಿಗೆ ವೆಚ್ಚ ಹಾಗೂ ಇತರೆ ಖರ್ಚುವೆಚ್ಚು ಸರಿದೂಗಿಸುವವರೆಗೆ ಹೈರಾಣಾಗಿದ್ದು ಮಾರುಕಟ್ಟೆಯಲ್ಲಿ ಅನೇಕ ಸಮಸ್ಯೆಯಿಂದ ನಲುಗಿದ್ದಾರೆ.
ಹತ್ತಿಯ ಮಾರುಕಟ್ಟೆಯಲ್ಲಿ ಈ ಹಿಂದೆ ಟೆಂಡರ್ ನಡೆಸಿ ಯಾರು ಹೆಚ್ಚು ದರ ಬರೆಯುತ್ತಾರೊ ಅವರಿಗೆ ಹತ್ತಿಯ ಮಾರಾಟ ಮಾಡಲಾಗುತ್ತಿದ್ದು ಈಗ ಫ್ಯಾಕ್ಟ್ರೀ ಮಾಲೀಕರು ಹಾಕಿದ ದರದಲ್ಲಿಯೇ ಮಾರಾಟ ಮಾಡಲಾಗುತ್ತಿದೆ ಇದರಿಂದ ಸರಿಯಾಗಿ ಸರಿಯಾದ ಬೆಲೆ ಸಿಗುತ್ತಿಲ್ಲ ಎನ್ನುವುದು ರೈತರ ಅಳಲು.

ಈ ಕುರಿತು ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಕೃಷ್ಣ ಪ್ರತಿಕ್ರಿಯಿಸಿ "ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಸೇರಿ ಮೂರು ಕೃಷಿ ತಿದ್ದುಪಡಿ ಕಾಯ್ದೆ ರದ್ದು ಆಗದ ಕಾರಣ ಎಪಿಎಂಸಿಯ ಆಡಳಿತ ವ್ಯಾಪ್ತಿ ಕಡಿಮೆಯಾಗಿದೆ. ವ್ಹೇ ಬ್ರಿಜ್ ನಲ್ಲಿ ನಡೆಯುವ ಮೋಸ ಹಾಗೂ ಹತ್ತಿ ಕಾರ್ಖಾನೆಗಳಲ್ಲಿನ ಮೋಸ ಪರಿಶೀಲನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ನಿಯಮ ಸಡಿಲಿಸಿದ ಕಾರಣ ಟೆಂಡರ್ ಆಗುತ್ತಿಲ್ಲ ಆದರೂ ಎಪಿಎಂಸಿಗೆ ಬಂದ ಹತ್ತಿ ಖರೀದಿದಾರಲ್ಲಿ ಯಾರು ಹೆಚ್ಚು ದರ ನಿಗದಿಪಡಿಸುತ್ತಾರೋ ಅವರಿಗೇ ಮಾರಾಟ ಮಾಡುವ ಅಧಿಕಾರ ರೈತರಿಗೆ ಇದೆ ಹೀಗಾಗಿ ಮೋಸವಾಗುವುದಿಲ್ಲ' ಎಂದು ಹೇಳುತ್ತಾರೆ.












Click it and Unblock the Notifications