ಆಪರೇಷನ್ ಕಮಲ : ಕೆ.ಎಸ್.ಈಶ್ವರಪ್ಪ ಹೇಳಿದ್ದೇನು?
ರಾಯಚೂರು, ಡಿಸೆಂಬರ್ 04 : 'ಕಾಂಗ್ರೆಸ್, ಜೆಡಿಎಸ್ ಬಿಟ್ಟು ಯಾರಾದರೂ ಬಿಜೆಪಿಗೆ ಬರುತ್ತೇವೆ ಎಂದರೆ ಬರಬೇಡ ಎಂದು ಹೇಳುವುದಕ್ಕೆ ಆಗುತ್ತದೆಯೇ?, ಬರಬೇಡ ಅನ್ನೋದಕ್ಕೆ ನಾವೇನು ಸನ್ಯಾಸಿಗಳಲ್ಲ' ಎಂದು ಶಿವಮೊಗ್ಗ ಶಾಸಕ, ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ರಾಯಚೂರಿನಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, 'ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ' ಎಂದು ಆರೋಪಿಸಿದರು.
'ಇವತ್ತಿಗೂ ಕಾಂಗ್ರೆಸ್, ಜೆಡಿಎಸ್ನ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಬೇಕಾದಷ್ಟು ಜನರು ಸಂಪರ್ಕದಲ್ಲಿದ್ದಾರೆ. ಎಲ್ಲವೂ ಬಹಿರಂಗವಾಗುತ್ತದೆ. ಸರ್ಕಾರ ಬಿದ್ದು ಹೋದ ಮೇಲೆ ಗೊತ್ತಾಗುತ್ತೆ' ಎಂದು ಈಶ್ವರಪ್ಪ ಹೇಳಿದರು.
'ಸಚಿವ ಸಂಪುಟ ವಿಸ್ತರಣೆ ತನಕ ಸರ್ಕಾರ ಇದ್ದರೆ, ಸಂಪುಟ ವಿಸ್ತರಣೆ ಆದ ತಕ್ಷಣ ಸರ್ಕಾರ ಬಿದ್ದು ಹೋಗಲಿದೆ. ಬಿಜೆಪಿ ಆಪರೇಷನ್ ಮಾಡ್ತಿಲ್ಲ, ಅವರ ಶಾಸಕರೇ ಬರುತ್ತಿದ್ದಾರೆ' ಎಂದು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ಹತ್ತಾರು ಮಂದಿ ಬಂದು ಭೇಟಿಯಾಗಿದ್ದಾರೆ
'ಶಾಸಕ ಸುಧಾಕರ್ ಅವರು ಬಿಜೆಪಿ ನಾಯಕರು ಭೇಟಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಹತ್ತಾರು ಮಂದಿ ಭೇಟಿಯಾಗಿದ್ದಾರೆ. ಸತೀಶ್ ಜಾಕಿಹೊಳಿ ಅವರು ಸಹ ಈ ಮಾತನ್ನು ಹೇಳಿದ್ದಾರೆ' ಎಂದು ಕೆ.ಎಸ್.ಈಶ್ವರಪ್ಪ ಅವರು ರಾಯಚೂರಿನಲ್ಲಿ ಹೇಳಿದರು.

ಕ್ರಮ ಕೈಗೊಳ್ಳಲಿ ನೋಡೋಣ
'ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅಶಿಸ್ತು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ತಾಕತ್ ಇದ್ರೆ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಬೇಡ' ಎಂದರು.

ಸಿದ್ದರಾಮಯ್ಯ ಇನ್ನು ಮುಖ್ಯಮಂತ್ರಿ
'ಬಿಜೆಪಿ ಬಗ್ಗೆ ಕಾಂಗ್ರೆಸ್, ಜೆಡಿಎಸ್ ಏನೇ ಅಂದುಕೊಳ್ಳಲಿ. ಬಿಜೆಪಿ ಬೆಳೆಯುತ್ತಿದೆ. ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಸಿದ್ದರಾಮಯ್ಯ ಇನ್ನೂ ಕನಸಿನಲ್ಲಿ ನಾನೇ ಮುಖ್ಯಮಂತ್ರಿ ಅಂದುಕೊಳ್ಳುತ್ತಿದ್ದಾರೆ' ಎಂದು ಈಶ್ವರಪ್ಪ ಅವರು ಲೇವಡಿ ಮಾಡಿದರು.

ನಮ್ಮ ಸಂಪರ್ಕದಲ್ಲಿದ್ದಾರೆ
'ಕಾಂಗ್ರೆಸ್ ಪಕ್ಷದವರು ತಮ್ಮ ನಾಯಕರ ಬಗ್ಗೆ ಕ್ರಮ ಕೈಗೊಳ್ಳಲಿ. ಇವತ್ತಿಗೂ ಹಲವಾರು ಕಾಂಗ್ರೆಸ್ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸರ್ಕಾರ ಬಿದ್ದು ಹೋದ ಬಳಿಕ ಎಷ್ಟು ಜನ ಸಂಪರ್ಕದಲ್ಲಿದ್ದಾರೆ? ಎಂಬುದು ಗೊತ್ತಾಗುತ್ತದೆ' ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications