'ಜೆಡಿಎಸ್-ಬಿಎಸ್ಪಿ ಮಹಾಮೈತ್ರಿಗೆ ಬಹುಮತ ನೀಡಿ ಎಚ್ಡಿಕೆಯನ್ನು ಸಿಎಂ ಮಾಡಿ'
ರಾಯಚೂರು, ಏಪ್ರಿಲ್ 06: ಎಲ್ಲಾ ಜಾತಿ ಧರ್ಮ, ಬಡವರು ಬಲ್ಲಿದರ ಕಲ್ಯಾಣಕ್ಕಾಗಿ ಜೆಡಿಎಸ್ ಬಿಎಸ್ಪಿ ಮಹಾಮೈತ್ರಿ ಆಗಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳಿಂದ ಜನರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಬಿಎಸ್ಪಿಯ ರಾಷ್ಟ್ರ ನಾಯಕಿ ಮಾಯಾವತಿ ಹೇಳಿದರು.
ರಾಯಚೂರಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಈಗ ಕೆಂದ್ರದಲ್ಲಿರುವ ಬಿಜೆಪಿಯ ಆಡಳಿತದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಬಡಜನರು, ಹಿಂದುಳಿದ ವರ್ಗ, ಆದಿವಾಸಿಗಳ ಮೇಲೆ ದೌರ್ಜನ್ಯ ನಿರಂತರವಾಗಿ. ಎಸ್ಸಿ, ಎಸ್ಟಿ ಕಾಯ್ದೆ ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದರು.

ಮುಸ್ಲಿಂ, ಇತರ ಅಲ್ಪಸಂಖ್ಯಾತ ಹಾಗೂ ಮೆಲ್ವರ್ಗದ ಬಡವರ ಅಭಿವೃದ್ಧಿಗೆ ಕೇಂದ್ರಕ್ಕೆ ಅನೇಕ ಪತ್ರ ಬರೆದು ಒತ್ತಾಯ ಮಾಡಿದ್ದೇವೆ. ಆದರೆ ಈಗಿನ ಬಿಜೆಪಿಯ ಕೇಂದ್ರ ಸರಕಾರ ತನ್ನ ಪಕ್ಷ ಅಧಿಕಾರ ಇಲ್ಲದ ರಾಜ್ಯಗಳಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದರು.
ಕಾಂಗ್ರೆಸ್, ಬಿಜೆಪಿಯಂತ ಕೆಟ್ಟ ಪಕ್ಷಗಳು ಅಧಿಕಾರಕ್ಕೆ ಬಂದಿದ್ದರಿಂದ ಕೆಟ್ಟ ನಿರ್ಧಾರಗಳು ಆಗುತ್ತಿವೆ. ಆದ್ದರಿಂದ ಈ ಪಕ್ಷಗಳನ್ನು ತಿರಸ್ಕರಿಸಿ ಸರ್ವ ಜನರ ಅಭಿವೃದ್ಧಿ, ರೈತರ ಬಡವರ ಪರ ಸರಕಾರಕ್ಕೆ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಬಿಎಸ್ಪಿ ಮಹಾ ಮೈತ್ರಿಗೆ ಬೆಂಬಲಿಸಬೇಕು. ಜಾತಿವಾದಿ ಕಾಂಗ್ರೆಸ್ ಬಿಜೆಪಿ ತಿರಸ್ಕರಿಸಬೇಕು ಎಂದು ಮಾಯಾವತಿ ಕರೆ ನೀಡಿದರು.
ಬಿಜೆಪಿ-ಕಾಂಗ್ರೆಸ್ ಪಕ್ಷಗಳು ಸುಳ್ಳು ಭರವಸೆ, ಸುಳ್ಳು ಪ್ರಣಾಳಿಕೆ ಮೂಲಕ ಅಧಿಕಾರಕ್ಕೆ ಬಂದು ನಂತರ ಭರವಸೆಗಳನ್ನು ಮರೆಯುತ್ತವೆ. ಕೇವಲ ಜೆಡಿಎಸ್-ಬಿಎಸ್ಪಿ ಮಹಾಮೈತ್ರಿ ಸರಕಾರದಿಂದ ಅಭಿವೃದ್ಧಿ ಮಾತ್ರ ಸಾಧ್ಯ. ಮಹಾಮೈತ್ರಿಗೆ ಬಹುಮತ ನೀಡಿ
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡುವಂತೆ ಮಾಯಾವತಿ ಅವರು ಮನವಿ ಮಾಡಿದರು.












Click it and Unblock the Notifications