Karnataka Budget 2023 Expectations: ರಾಯಚೂರು ಜಿಲ್ಲೆಯ ನಿರೀಕ್ಷೆಗಳೇನು..?
ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡನೆ ಆಗಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕ ಬಜೆಟ್ 2023ರ ಮೇಲಿನ ರಾಯಚೂರು ಜನತೆಯ ನಿರೀಕ್ಷೆಗಳೇನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ರಾಯಚೂರು ಫೆಬ್ರವರಿ 16: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಫೆಬ್ರುವರಿ 17 ರಂದು ಮಂಡನೆ ಆಗಲಿದ್ದು, ರಾಯಚೂರು ಜಿಲ್ಲೆಯ ಮಟ್ಟಿಗೆ ಹೊಸ ಯೋಜನೆಗಳ ನಿರೀಕ್ಷೆಗಳೇನೂ ಇಲ್ಲ. ಆದರೆ ಈಗಾಗಲೇ ಘೋಷಿಸಿರುವ ಯೋಜನೆಗಳಿಗೆ ಸಮರ್ಪಕವಾದ ಅನುದಾನದ ಅಗತ್ಯವಿದೆ.
ರಾಯಚೂರು ವಿಶ್ವವಿದ್ಯಾಲಯವು ಬಾಲಗ್ರಹಪೀಡೆಗೆ ಒಳಗಾಗಿದ್ದು, ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಅಗತ್ಯ ಅನುದಾನದ ಸಮಸ್ಯೆ ಎದುರಿಸುತ್ತಿದೆ. ಐಐಐಟಿ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಕೊಡಬೇಕು. ಸಿಂಧನೂರಿನಿಂದ ರಾಯಚೂರು ಹಾಗೂ ವಾಡಿ-ಗದಗ ಮಾರ್ಗದ ಬಾಕಿ ಇರುವ ರೈಲ್ವೆ ಕಾಮಗಾರಿ ಪೂರ್ಣಗೊಳಿಸಲು ರಾಜ್ಯದ ಪಾಲಿನ ಅನುದಾನ ಘೋಷಿಸಬೇಕು. ರಾಯಚೂರು ವರ್ತುಲ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಿಲ್ಲ.
ರಾಯಚೂರು ಸೇರಿದಂತೆ ನೂತನ ತಾಲೂಕು ಕೇಂದ್ರಗಳಾದ ಸಿರವಾರ ಮತ್ತು ಮಸ್ಕಿಯಲ್ಲಿ ಸುಸಜ್ಜಿತ ಸರ್ಕಾರಿ ಕಚೇರಿಗಳ ಕಟ್ಟಡಗಳ ನಿರ್ಮಾಣ ಆಗಬೇಕಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಮೈನ್ಸ್ ಕಾಲೇಜು, ಐತಿಹಾಸಿಕ ಪ್ರವಾಸಿ ತಾಣಗಳಾದ ಜಲದುರ್ಗ ಕೋಟೆ, ಮುದಗಲ್ಲ ಕೋಟೆ, ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ಮಾಡಬೇಕಿದೆ. ಗುಂಡಲಬಂಡ ಜಲಪಾತ ಅಭಿವೃದ್ಧಿ, ನಾರಾಯಣಪುರ ಅಣೆಕಟ್ಟೆ ಬಲಭಾಗದ ರೋಡಲಬಂಡ ಕ್ರಾಸ್ ಬಳಿ ಉದ್ಯಾನ ನಿರ್ಮಾಣ ಹಾಗೂ ಕೃಷ್ಣಾ ಪ್ರವಾಹದ ನಡುಗಡ್ಡೆ ಜನರ ಸಮಸ್ಯೆ ಪರಿಹಾರಕ್ಕೆ ಸೇತುವೆಗಳ ನಿರ್ಮಾಣ ಅಥವಾ ಶಾಶ್ವತ ಸ್ಥಳಾಂತರದ ಪರಿಹಾರ ಘೋಷಿಸಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಮಸ್ಕಿಯಲ್ಲಿ ಸಂಪೂರ್ಣ ತಾಲೂಕು ಕಚೇರಿಗೆ ಅನುದಾನ, ವಟಗಲ್ ಬಸವೇಶ್ವರ ಏತ ನೀರಾವರಿಗೆ ಅನುದಾನ ಹಾಗೂ 5ಎ ಕಾಲುವೆ ನಿರ್ಮಾಣಕ್ಕೆ ಕ್ರಮ ವಹಿಸಬೇಕಿದೆ. ಜಿಲ್ಲೆಯಲ್ಲಿ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆ ಸ್ಥಾಪಿಸುವಂತೆ ನಿರಂತರ ಧರಣಿ ಆರಂಭವಾಗಿ ಸುಮಾರು 300 ದಿನಗಳು ಸಮೀಪಿಸಿದೆ. ರಾಜ್ಯ ಸರ್ಕಾರವು ಅಧಿಕೃತವಾಗಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸಲು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸುವುದಾಗಿ ಬಜೆಟ್ನಲ್ಲಿ ಘೋಷಿಸಬೇಕು. ಓಪೆಕ್ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿ ಮತ್ತೆ ಸುಸಜ್ಜಿತ ಕಾರ್ಯನಿರ್ವಹಣೆಗೆ ಅನುದಾನ ಕೊಡಬೇಕು.
ಮಾನ್ವಿಯ ಚೀಕಲಪರ್ವಿ ಬಳಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣದ ಬೇಡಿಕೆ ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಬಜೆಟ್ನಲ್ಲಿಯಾದರೂ ಸೇತುವೆ ನಿರ್ಮಾಣ ಘೋಷಿಸಬೇಕಾಗಿದೆ.

ಜಿಲ್ಲೆಯಲ್ಲಿ ನಿರೀಕ್ಷೆಗಳು ಸಾಕಷ್ಟಿವೆ. ಅದಕ್ಕೆ ತಕ್ಕಂತೆ ಸರ್ಕಾರವು ಯೋಜನೆಗಳನ್ನು ಘೋಷಿಸುವುದರ ಜೊತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಬದ್ಧ ಕ್ರಮಕ್ಕೆ ಮುಂದಾಗಬೇಕು. ರಾಯಚೂರಿನಲ್ಲಿ ಒಳಚರಂಡಿ ಯೋಜನೆ ಹಾಗೂ ನಿರಂತರ ನೀರು ಯೋಜನೆಗಳ ರೀತಿಯಲ್ಲಿ ಅರ್ಧಕ್ಕೆ ಕಾಮಗಾರಿಗಳು ಸ್ಥಗಿತವಾಗಬಾರದು ಎನ್ನುವುದು ಜನರ ಅಭಿಪ್ರಾಯವಾಗಿದೆ.
"ಕಳೆದ ಎರಡು ವರ್ಷಗಳಿಂದ ಕೋವಿಡ್- 19 ನೆಪದಲ್ಲಿ ನೇಮಕಾತಿ ಪ್ರಕ್ರಿಯೆ ನಿರೀಕ್ಷಿಸಿದ ಮಟ್ಟದಲ್ಲಿ ನಡೆದಿಲ್ಲ. ಜಿಲ್ಲೆಯಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಈ ಬಜೆಟ್ನಲ್ಲಿ ರಾಯಚೂರಿನಲ್ಲಿ ಉದ್ಯೋಗ ಸೃಷ್ಟಿಗೆ ಹೊಸ ಯೋಜನೆಗಳನ್ನು ಘೋಷಿಸಬೇಕು," ಎಂದು ದೇವದುರ್ಗ ಕನ್ನಡ ವಿಶ್ವ ವಿದ್ಯಾಲಯದ ಹಂಪಿಯ ವಿಸ್ತರಣಾ ಕೇಂದ್ರದ ಸಂಶೋಧಕಿ ಅನ್ನಪೂರ್ಣಾ ಹೇಳಿದ್ದಾರೆ.












Click it and Unblock the Notifications