ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ತೆಲಂಗಾಣ ಮಾದರಿಯ ಯೋಜನೆಗಳು ಜಾರಿ: ಎಚ್ಡಿ ಕುಮಾರಸ್ವಾಮಿ ಭರವಸೆ
ರಾಯಚೂರು, ಫೆಬ್ರವರಿ. 03: ವಿಧಾನಸಭಾ ಚುನಾವಣೆಗೂ ಮುನ್ನ ಪಂಚರತ್ನ ರಥ ಯಾತ್ರೆ ನಡೆಸುತ್ತಿರುವ ಜಾತ್ಯತೀತ ಜನತಾ ದಳ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಾಗಿ ಪದೇ ಪದೇ ಘೋಷಿಸುತ್ತಿದೆ. ತಾವು ಅಧಿಕಾರಕ್ಕೆ ಬಂದರೆ ಎಂತಹ ಬದಲಾವಣೆ ತರುತ್ತೇವೆ ಎಂಬುದನ್ನು ಹೇಳುತ್ತಿದ್ದು, ರಾಯಚೂರಿನಲ್ಲಿ ಹೊಸ ಘೋಷಣೆಯೊಂದನ್ನು ಮಾಡಿದ್ದಾರೆ.
ಗುಜರಾತ್ ಮಾಡೆಲ್ ಎಂಬುದನ್ನು ಮುನ್ನಲೆಗೆ ತಂದು ಮತ ಯಾಚಿಸಿದ್ದ ಬಿಜೆಪಿಯಂತೆ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ಜಾತ್ಯತೀತ ಜನತಾ ದಳ ಕೂಡ ತಮ್ಮ ಮಿತ್ರ ಪಕ್ಷ ಭಾರತ್ ರಾಷ್ಟ್ರ ಸಮಿತಿಯ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡುವುದಾಗಿ ತಿಳಿಸಿದೆ.
ರಾಯಚೂರು: ಶಿವರಾಜ್ ಪಾಟೀಲ್ ಪ್ರಾಬಲ್ಯ ಕೊನೆಗೊಳಿಸಲು ವಿಪಕ್ಷಗಳ ತಂತ್ರ
ಜಾತ್ಯತೀತ ಜನತಾ ದಳದ ನಾಯಕ ಎಚ್ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ತೆಲಂಗಾಣ ರಾಜ್ಯದಲ್ಲಿನ ಮಾದರಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಜನರನ್ನು ಲೂಟಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ರಾಯಚೂರಿನಲ್ಲಿ ನಡೆದ ಪಂಚರತ್ನ ರಥ ಯಾತ್ರೆಯಲ್ಲಿ ಮಾತನಾಡಿರುವ ಕುಮಾರಸ್ವಾಮಿ, "ಈ ಪ್ರದೇಶವು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದೆ. ಆದರೆ, ಅದನ್ನು ಪರಿಹರಿಸಲು ಯಾವುದೇ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ನಾವು ತೆಲಂಗಾಣದೊಂದಿಗೆ ನಮ್ಮ ಗಡಿಯನ್ನು ಹಂಚಿಕೊಂಡಿದ್ದೇವೆ. ಅಲ್ಲಿನ ಸರ್ಕಾರದ 'ಮಿಷನ್ ಭಗೀರಥ' ಯೋಜನೆಯನ್ನು ನೋಡುತ್ತಿದ್ದೇವೆ. ಈ ಯೋಜನೆ ತೆಲಂಗಾಣದ ಪ್ರತಿ ಮನೆಗೂ ನೀರು ಒದಗಿಸಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಂತಹ ಯೋಜನೆಗಳನ್ನು ಇಲ್ಲಿಯೂ ಜಾರಿಗೊಳಿಸಲಾಗುವುದು. ತೆಲಂಗಾಣದ ಕಾಳೇಶ್ವರಂ ಯೋಜನೆಯು ದೇಶದ ಪ್ರತಿಯೊಬ್ಬ ರಾಜಕೀಯ ನಾಯಕನ ಕೇಸ್ ಸ್ಟಡಿ ಆಗಿರಬೇಕು" ಎಂದು ಹೇಳಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ವಾಗ್ದಾನ ನೀಡಿದ್ದರು. ಕುಮಾರಸ್ವಾಮಿ ಅವರು ತೆಲಂಗಾಣ ಸಿಎಂಗೆ ಧನ್ಯವಾದ ಅರ್ಪಿಸಿ, ಈ ಬೆಂಬಲವು ರಾಷ್ಟ್ರ ರಾಜಕಾರಣದಲ್ಲಿ ಹೊಸ ಭರವಸೆ ಸೃಷ್ಟಿಸುತ್ತದೆ ಎಂದು ಹೇಳಿದ್ದರು.
ಜನವರಿಯಲ್ಲಿ ತೆಲಂಗಾಣದ ಖಮ್ಮಮ್ನಲ್ಲಿ ನಡೆದ ಭಾರತ್ ರಾಷ್ಟ್ರ ಸಮಿತಿಯ (ಬಿಆರ್ಎಸ್) ಸಭೆಗೆ ಕುಮಾರಸ್ವಾಮಿ ಗೈರಾಗಿದ್ದರು. ಹೀಗಾಗಿ ಕುಮಾರಸ್ವಾಮಿ ಮತ್ತು ಬಿಆರ್ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಊಹಿಸಲಾಗಿದೆ. ಆದರೆ, ವದಂತಿಗಳನ್ನು ತಳ್ಳಿ ಹಾಕಿದ್ದ ಕುಮಾರಸ್ವಾಮಿ ಜೆಡಿಎಸ್ ಪಕ್ಷ ಬಿಆರ್ಎಸ್ನೊಂದಿಗೆ ಇದೆ ಎಂದು ಸ್ಪಷ್ಟಪಡಿಸಿದ್ದರು.
ಇನ್ನು ಶುಕ್ರವಾರದಿಂದ ಕಾಂಗ್ರೆಸ್ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭಿಸಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತ್ಯೇಕ ಬಸ್ ಪ್ರವಾಸ ಕೈಗೊಂಡಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಾಯಕರ ತಂಡ ಉತ್ತರ ಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದು, ದಕ್ಷಿಣ ಜಿಲ್ಲೆಗಳಲ್ಲಿ ಡಿ.ಕೆ. ಶಿವಕುಮಾರ್ ತಂಡ ಪ್ರವಾಸ ಮಾಡಲಿದ್ದಾರೆ.