ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಅಪಾಯಮಟ್ಟದಲ್ಲಿ ಹರಿಯುತ್ತಿವೆ ಕೃಷ್ಣಾ, ತುಂಗಭದ್ರಾ ನದಿ
ರಾಯಚೂರು,ಆಗಸ್ಟ್ 12 : ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ನೀರಿನ ಹರಿವು ಭಾರಿ ಏರಿಕೆಯಾಗಿದೆ. ಪ್ರವಾಹದ ಭೀತಿಯಿಂದ ನದಿತೀರದ ಗ್ರಾಮಗಳಲ್ಲಿ ಹಾಗೂ ಸೇತುವೆಗಳಿರುವ ಕಡೆಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ 2.19 ಲಕ್ಷ ಕ್ಯುಸೆಕ್ ಅಡಿ ನೀರು ಹೊರಬಿಡಲಾಗುತ್ತಿದೆ. ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಈಗ ಸುಮಾರು 50 ಕಿಮೀ ಬಳಸಿ ಜಲದುರ್ಗ ಮಾರ್ಗದ ಮೂಲಕ ಲಿಂಗಸುಗೂರಿಗೆ ತಲುಪಬೇಕಿದೆ. ಮಹಾರಾಷ್ಟ್ರದ ಕೃಷ್ಣಾ ನದಿ ಕೊಳ್ಳಗಳಲ್ಲಿ ಮತ್ತೆ ಮಳೆ ಮುಂದುವರಿದಿದ್ದು, ಪ್ರವಾಹವು ಹೆಚ್ಚಳವಾಗುವ ಸಾಧ್ಯತೆ ಇದೆ.
ರಾಜ್ಯದ ಬೆಳಗಾವಿ, ವಿಜಯಪುರದಲ್ಲೂ ಮಳೆ ಬೀಳುತ್ತಿರುವುದರಿಂದ ಕೃಷ್ಣಾನದಿಗೆ ಸತತವಾಗಿ ನೀರು ಹರಿದು ಬರುತ್ತಿದೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಮಳೆನೀರು ಡೋಣಿ ನದಿಗೆ ಸೇರುತ್ತಿದ್ದು, ಡೋಣಿ ನದಿಯು ಲಿಂಗಸುಗೂರು ಪಕ್ಕದಲ್ಲಿ ಕೃಷ್ಣಾನದಿಯಲ್ಲಿ ಸಂಗಮವಾಗುತ್ತದೆ. ಅಲ್ಲದೆ, ಭೀಮಾನದಿ ಮೂಲಕ ಬರುವ ನೀರು ಕೂಡಾ ರಾಯಚೂರು ಪಕ್ಕದಲ್ಲಿ ಕೃಷ್ಣಾನದಿ ಸೇರಿಕೊಳ್ಳುತ್ತದೆ.

ಲಿಂಗಸುಗೂರು ತಾಲ್ಲೂಕು ನಂತರದಲ್ಲಿ ಕೃಷ್ಣಾನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ದೇವದುರ್ಗ, ರಾಯಚೂರು ತಾಲ್ಲೂಕುಗಳ ಮೂಲಕ ಹರಿಯುವ ಕೃಷ್ಣೆಯು ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಹೋಗಲಿದೆ. ಕರ್ನಾಟಕ-ತೆಲಂಗಾಣ ಗಡಿಭಾಗ ಕೃಷ್ಣಾನದಿಗೆ ನಿರ್ಮಿಸಿರುವ ಜುರಾಲಾ ಪ್ರಿಯದರ್ಶಿನಿ ಜಲಾಶಯದಿಂದ ಆಂಧ್ರದ ಕಡೆಗೆ ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.
ತುಂಗಾಭದ್ರಾ ನದಿಯಲ್ಲೂ ಪ್ರವಾಹ
ತುಂಗಭದ್ರಾ ನದಿಯಲ್ಲೂ ಈ ವರ್ಷ ಪ್ರವಾಹಮಟ್ಟ ಕಳೆದ ವರ್ಷಕ್ಕಿಂತಲೂ ಅಧಿಕವಾಗಿದೆ. ಸಿಂಧನೂರು, ಮಾನ್ವಿ ಮತ್ತು ರಾಯಚೂರು ತಾಲ್ಲೂಕುಗಳ ಮೂಲಕ ಹರಿದು ಆಂಧ್ರದತ್ತ ಸಾಗುತ್ತಿದ್ದು, ನದಿತೀರದುದ್ದಕ್ಕೂ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನದಿಯತ್ತ ತೆರಳದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ತೆಲಂಗಾಣ, ಆಂಧಪ್ರದೇಶ ಮತ್ತು ಕರ್ನಾಟಕ ಗಡಿಭಾಗದ ರಾಜಲಬಂಡಾ ಸೇತುವೆ ಬಳಿಯೂ ಅಧಿಕಾರಿಗಳು ನಿಗಾ ವಹಿಸಿದ್ದಾರೆ.

ತುಂಗಭದ್ರಾದಿಂದ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ತುಂಗಭದ್ರಾದಲ್ಲಿ ನೀರು ಹರಿದುಬರುತ್ತಿದೆ. ಮಾನ್ವಿ ತಾಲ್ಲೂಕಿನ ನದಿತೀರದ ಕೆಲವು ಗ್ರಾಮಗಳ ಕೃಷಿಬೆಳೆ ನೀರುಪಾಲಾಗಿವೆ. ಯಾವುದೇ ಜೀವ, ಆಸ್ತಿ ಹಾನಿಯಾಗಿಲ್ಲ ಎಂದು ವರದಿಯಾಗಿದೆ.












Click it and Unblock the Notifications