ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
ರಾಯಚೂರು ಜಿಲ್ಲೆಯ "ಆ" ಒಂದು ತಾಲೂಕಿನ ವಿವಿಧೆಡೆ ಸರ್ಕಾರದ ಭೂಒಡೆತನ ಯೋಜನೆ ಅಡಿಯಲ್ಲಿ ಮಂಜೂರಾದ ಭೂಮಿಯನ್ನು ಬಡ ಫಲಾನುಭವಿಗಳಿಗೆ ಹಸ್ತಾಂತರಿಸುವಲ್ಲಿ ವಂಚನೆ ನಡೆಯುತ್ತಿದೆ.
ರಾಯಚೂರು, ಜನವರಿ, 31: ಮಾನ್ವಿ ತಾಲೂಕಿನ ವಿವಿಧೆಡೆ ಸರ್ಕಾರದ ಭೂಒಡೆತನ ಯೋಜನೆ ಅಡಿಯಲ್ಲಿ ಮಂಜೂರಾದ ಭೂಮಿಯನ್ನು ಬಡ ಫಲಾನುಭವಿಗಳಿಗೆ ಹಸ್ತಾಂತರಿಸುವಲ್ಲಿ ಪ್ರಭಾವಿಗಳು, ಮಧ್ಯವರ್ತಿಗಳು ಅಡ್ಡಿಪಡಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.
ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಭೂಮಾಲೀಕರಿಂದ ಖರೀದಿಸಿ ಅರ್ಹ ಫಲಾನುಭವಿಗಳ ಹೆಸರಿನಲ್ಲಿ ಭೂಮಿಯನ್ನು ನೋಂದಣಿ ಮಾಡಿಸಲಾಗಿತ್ತು. ನೋಂದಣಿ ಮಾಡಿಸಿ ಎರಡು ವರ್ಷಗಳು ಕಳೆದರೂ ಕೂಡ ಅನೇಕ ಕಡೆ ಫಲಾನುಭವಿಗಳಿಗೆ ಭೂಮಿ ಹಸ್ತಾಂತರ ಆಗದಿರುವುದು ರೈತಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಹಿರೇಕೊಟ್ಟೆಕಲ್ ಹೋಬಳಿಯ ತಡಕಲ್ ಸೀಮಾದ ಸರ್ವೆ ನಂಬರ್ 119 ಹಾಗೂ ಸರ್ವೆ ನಂಬರ್ 120ರ ವ್ಯಾಪ್ತಿಯ ಜಮೀನುಗಳನ್ನು 2020-21ನೇ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಭೂಒಡೆತನ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿತ್ತು.

15 ಫಲಾನುಭವಿಗಳಿಗೆ ಭೂಮಿ ಮಂಜೂರು
ತಡಕಲ್ ಗ್ರಾಮದ ಪರಿಶಿಷ್ಟ ಜಾತಿಯ ಭೂರಹಿತ 15 ಫಲಾನುಭವಿಗಳಿಗೆ ತಲಾ 1 ಹೆಕ್ಟೇರ್ ಭೂಮಿ ಮಂಜೂರಾಗಿತ್ತು.
ಫಲಾನುಭವಿಗಳ ಹೆಸರಿನಲ್ಲಿ ಭೂಮಿ ನೊಂದಣಿ ಆಗಿ ಪಹಣಿಯಲ್ಲಿ ಹೆಸರನ್ನೂ ಕೂಡ ಸೇರ್ಪಡೆ ಮಾಡಲಾಗಿದೆ. ಆದರೆ, ಸದರಿ ಹಂಚಿಕೆಯಾದ ಜಮೀನುಗಳನ್ನು ಸ್ಥಳೀಯ ಪ್ರಭಾವಿ ವ್ಯಕ್ತಿಗಳು ಹಾಗೂ ಮಧ್ಯವರ್ತಿಗಳು ಫಲಾನುಭವಿಗಳಿಗೆ ನೀಡದೆ ಸಾಗುವಳಿಗೆ ಅಡ್ಡಿಪಡಿಸುತ್ತಿದ್ದಾರೆ. ಭೂಮಿ ಮಂಜೂರಾಗಿ ಎರಡು ವರ್ಷಗಳು ಕಳೆದರೂ ಫಲಾನುಭವಿಗಳು ಭೂಮಿಯಲ್ಲಿ ಸಾಗುವಳಿ ಮಾಡಲು ಸಾಧ್ಯವಾಗದೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫಲಾನುಭವಿಗಳು ಹಾಗೂ ಸಿಪಿಐ (ಎಂಎಲ್) ಪಕ್ಷದ ತಾಲೂಕು ಸಮಿತಿಯ ಪದಾಧಿಕಾರಿಗಳು ಜನವರಿ 23ರಂದು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರವಿಕುಮಾರ್ ಫಲಾನುಭವಿಗಳಿಗೆ ಹಂಚಿಕೆಯಾದ ಜಮೀನುಗಳ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಫಲಾನುಭವಿಗಳಿಗೆ ಜಮೀನು ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ತೆರಳಿದ್ದಾರೆ. ತಮಗೆ ಮಂಜೂರಾದ ಭೂಮಿ ಹಸ್ತಾಂತರ ಮಾಡಿ ಸಾಗುವಳಿ ಮಾಡಲು ಅವಕಾಶ ಕಲ್ಪಿಸುವ ಕುರಿತು ತಾಲೂಕು ಆಡಳಿತದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಫಲಾನುಭವಗಳು ಮನವಿ ಮಾಡಿದ್ದಾರೆ.












Click it and Unblock the Notifications