ಸಾಮೂಹಿಕ ವಿವಾಹಗಳ ಮೂಲಕ ಸಮ ಸಮಾಜ ನಿರ್ಮಾಣ ಸಾಧ್ಯ: ಸಿದ್ದರಾಮಯ್ಯ
ರಾಯಚೂರು, ಮೇ21: ಸಾಮೂಹಿಕ ವಿವಾಹಗಳ ಮೂಲಕ ಸಮ ಸಮಾಜ ನಿರ್ಮಾಣ ಸಾಧ್ಯವಾಗಬಲ್ಲದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದ ಗುರುವಿನ ಕುಟುಂಬದಿಂದ ಶುಕ್ರವಾರ ಆಯೋಜಿಸಿದ್ದ 75 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು. ಸಂವಿಧಾನದ ಮೂಲ ಅಶಯವು ಈ ಮೂಲಕ ನೆರವೇರಬಲ್ಲದು. ಜಾತಿ ವ್ಯವಸ್ಥೆಯನ್ನು ದೇವರು ಸೃಷ್ಟಿಸಿಲ್ಲ. ಆದರೆ ಮನುಷ್ಯರು ಜಾತಿ ವ್ಯವಸ್ಥೆ ಸೃಷ್ಟಿಸಿಕೊಂಡು ಅಸಮಾನತೆ ಪೋಷಿಸುತ್ತಿದ್ದಾರೆ. ಇದರಿಂದ ಬಡವರು ಬಡವರಾಗಿಯೇ ಉಳಿದಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದು ಹೇಳಿದರು.
ಸಮಾನವಾಗಿ ಬಾಳಬೇಕು ಎಂಬುದು ಸಮಾಜದಲ್ಲಿ ಪ್ರತಿಯೊಬ್ಬರಲ್ಲಿ ಬಂದರೆ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ. ಕೆಲವರು ಸಮಾಜ ಒಡೆಯುವ ಕೆಲಸ ಮಾಡಿ, ವಿಜೃಂಭಿಸುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಮಾನವ ಧರ್ಮದ ಶ್ರೇಷ್ಠತೆಯನ್ನು ಸಾರಬೇಕಿದೆ. ಈ ಸಾಮೂಹಿಕ ವಿವಾಹದಲ್ಲಿ ಭಾಗಿಯಾದವರಿಗೆಲ್ಲ ಸಮಾನ ಮನಸ್ಸು ಸೃಷ್ಟಿಯಾಗಲಿ ಎಂದು ಹೇಳಿದರು. ಸ್ವಾರ್ಥಕ್ಕಾಗಿ ಧರ್ಮ ಹಾಗೂ ಜಾತಿಗಳ ಹೆಸರಿನಲ್ಲಿ ಭಾವನೆಗಳನ್ನು ಕೆರಳಿಸುತ್ತಿದ್ದು, ಈ ಅಪಾಯಕ್ಕೆ ತಡೆಯೊಡ್ಡಬೇಕಿದೆ. ಸ್ವಾರ್ಥ ರಾಜಕೀಯಕ್ಕಾಗಿ ಸಮಾಜವನ್ನು ಬಲಿಕೊಡುತ್ತಿರುವುದು ಕಳವಳಕಾರಿ ಎಂದರು.
ಮದುವೆ ಮಾಡುವುದು ಈ ಕಾಲದಲ್ಲಿ ಸುಲಭವಲ್ಲ. ಯಾವುದೇ ಕಾರಣಕ್ಕೂ ಬಡವರು ಶ್ರೀಮಂತರನ್ನು ಅನುಸರಿಸಿ, ದುಂದುವೆಚ್ಚದ ಮದುವೆ ಮಾಡಬಾರದು. ದುಬಾರಿ ಮದುವೆ ಮಾಡಿದ ಬಡವರು ಸಾಲಗಾರ ರಾಗುತ್ತದೆ. ಮದುವೆಯಲ್ಲಿ ಶ್ರೀಮಂತರು ತಮ್ಮ ಸಂಪತ್ತನ್ನು ಪ್ರದರ್ಶಿಸುತ್ತಾರೆ. ಸರಳ ರೀತಿಯಲ್ಲಿ ಮದುವೆ ಮಾಡಿದರೂ ಪತಿ, ಪತ್ನಿ ಆಗುತ್ತಾರೆ ಎಂಬುದನ್ನು ನೆನಪಿಡಬೇಕು ಎಂದು ಕಿವಿಮಾತು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಮಠದ ಪೀಠಾಧಿಪತಿ ವೀರಪ್ರಸನ್ನ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ, ಸಮಾಜದಲ್ಲಿ ಸಂಘರ್ಷ ಒಳ್ಳೆಯದಲ್ಲ. ಪ್ರತಿಯೊಬ್ಬರೂ ಪ್ರೀತಿ, ಸೌಹಾರ್ದದಿಂದ ಬದುಕಬೇಕು ಎಂದರು.'ಇದುವರೆಗೂ ಸಿದ್ದರಾಮಯ್ಯ ರಂಭಾಪುರ ಮಠಕ್ಕೆ ಯಾವತ್ತೂ ಬಂದಿಲ್ಲ. ಈ ಮದುವೆ ಕಾರ್ಯಕ್ರಮಕ್ಕೆ ನಾನು ಮತ್ತು ಅವರು ಬಂದಿದ್ದು ಯೋಗಾಯೋಗ. ಸಿದ್ದರಾಮಯ್ಯ ರಂಭಾಪುರಿ ಮಠಕ್ಕೆ ಭೇಟಿ ನೀಡಬೇಕು' ಎಂದು ಆಹ್ವಾನಿಸಿದರು.
ಬೂದಿ ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಬೂದಿಬಸವೇಶ್ವರ ಶಿವಾಚಾರ್ಯ, ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ , ನವಲಕಲ್ ಮಠದ ಸೋಮನಾಥ ಶಿವಾಚಾರ್ಯ, ಗುರುವಿನ ಸಿದ್ದಯ್ಯಸ್ವಾಮಿ , ಶಾಸಕರಾದ ಬಸನಗೌಡ ದದ್ದಲ, ಬಸನಗೌಡ ತುರ್ವಿಹಾಳ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಎಐಸಿಸಿ ಕಾರ್ಯ ದರ್ಶಿ ಎನ್.ಬೋಸರಾಜ, ಮುಖಂಡರಾದ ಹಂಪನಗೌಡ ಬಾದರ್ಲಿ , ಕೆ.ವಿರೂಪಾಕ್ಷ ಪ್ಪ , ಬಸನಗೌಡ ಬಾದರ್ಲಿ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಮತ್ತಿತರರು ಇದ್ದರು.
ಕನ್ನಡಕ ಕಳೆದುಕೊಂಡ ಸಿದ್ದರಾಮಯ್ಯ!
ದೇವದುರ್ಗ ತಾಲ್ಲೂಕಿನ ಗಬ್ಬೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭಕ್ಕೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಥಳೀಯ ಬೂದಿಬಸವೇಶ್ವರ ಮಠದ ದರ್ಶನ ಪಡೆದರು. ಮಠದಿಂದ ಹೊರಬಂದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪಾದರಕ್ಷೆಯನ್ನು ತಮ್ಮ ಕೈಯಲ್ಲಿ ಹಿಡಿದು ತೊಡಿಸಿದರು. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಮರಳುವಾಗ ಸಿದ್ದರಾಮಯ್ಯ ಅವರ ಕನ್ನಡಕವೂ ಕಳೆದುಹೋಯಿತು.