ಭಾರತ್ ಜೋಡೋಗೆ ಕಾಂಗ್ರೆಸ್ ಜೋಶ್ನಲ್ಲಿ ತಯಾರಿ; ರಾಯಚೂರಿನಲ್ಲಿ ವೇದಿಕೆ ಸಜ್ಜು!
ರಾಯಚೂರು, ಸೆಪ್ಟೆಂಬರ್, 02: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷೆಯ 'ಭಾರತ್ ಜೋಡೋ ಪಾದಯಾತ್ರೆ' ಯಶಸ್ವಿಗೆ ರಾಯಚೂರು ಜಿಲ್ಲಾ ಕಾಂಗ್ರೆಸ್ ಘಟಕದಿಂದ ಭರದ ಸಿದ್ಧತೆ ನಡೆಸಿದೆ. ಪಕ್ಷದ ಜಿಲ್ಲಾ ಮಟ್ಟದ ನಾಯಕರು ಪಾದಯಾತ್ರೆಯ ಯಶಸ್ವಿಗೆ ಈಗಿನಿಂದಲೇ ಕಾರ್ಯಪ್ರವೃತ್ತವಾಗಿದ್ದಾರೆ. ಗ್ರಾಮ ಪಂಚಾಯತಿ ಮಟ್ಟದಿಂದ ಪಕ್ಷ ಸಂಘಟಿಸಲು ಮುಂದಾಗಿದ್ದಾರೆ.
12 ರಾಜ್ಯಗಳಲ್ಲಿ ಸಾಗುವ ಪಾದಯಾತ್ರೆ
ಮುಂಬರುವ ವಿವಿಧ ಚುನಾವಣೆ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ಮಹತ್ವವನ್ನು ಪಡೆದಿದೆ. ಕನ್ಯಾಕುಮಾರಿ-ಕಾಶ್ಮೀರ ಮಾರ್ಗದಲ್ಲಿ ಸಾಗುವ ಈ ಪಾದಯಾತ್ರೆ ಸೆಪ್ಟೆಂಬರ್ 7ರಿಂದ ಆರಂಭ ಆಗಲಿದೆ. ಬಳ್ಳಾರಿ, ಆಲೂರು ನಗರಗಳ ಮೂಲಕ ಹಾದು ಬರುವ ಪಾದಯಾತ್ರೆ ರಾಯಚೂರಿನಿಂದ ಮುಂದೆ ಸಾಗಲಿದ್ದು, ಸ್ಥಳೀಯ ನಾಯಕರಲ್ಲಿ ಹೊಸ ಹುರುಪು ತಂದಿದೆ. ರಾಹುಲ್ ಗಾಂಧಿ ಅವರು ನಿತ್ಯ 25 ಕಿಲೋ ಮೀಟರ್ ಕ್ರಮಿಸಲಿದ್ದಾರೆ.
'ಭಾರತ್ ಜೋಡೋ ಪಾದಯಾತ್ರೆ' ಮೂಲಕ ಬರೋಬ್ಬರಿ 3,500 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ಕ್ರಮಿಸಲಿದ್ದು, ಇಡೀ ದೇಶದ ಗಮನ ಸೆಳೆಯಲಿದ್ದಾರೆ. ಆಯ್ದ 12 ರಾಜ್ಯಗಳಲ್ಲಿ ಸಾಗುವ ಪಾದಯಾತ್ರೆ ಸಾಗಲಿದೆ. ಈ ವೇಳೆ ಅಲ್ಲಲ್ಲಿ ಬಹಿರಂಗ ಸಮಾವೇಶ, ರ್ಯಾಲಿ ಆಯೋಜಿಸಲು ಕಾಂಗ್ರೆಸ್ ಉದ್ದೇಶಿಸಿದೆ. ರಾಯಚೂರು ಜಿಲ್ಲೆಯಲ್ಲಿ ಪಾದಯಾತ್ರೆ ಸಾಗಲಿರುವ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಕರೆತರಲು ಜಿಲ್ಲಾ ಕಾಂಗ್ರೆಸ್ ಈಗಿನಿಂದಲೇ ತಯಾರಿ ನಡೆಸುತ್ತಿದೆ.

ರಾಯಚೂರಿನಲ್ಲಿ ನಡೆಯುವ ಸಮಾವೇಶಕ್ಕೆ ಪ್ರತಿ ಗ್ರಾಮ ಪಂಚಾಯತಿಯಿಂದ ಒಬ್ಬೊಬ್ಬ ಕಾಂಗ್ರೆಸ್ ನಾಯಕನ ನೇತೃತ್ವದಲ್ಲಿ ಕಾರ್ಯಕರ್ತರನ್ನು ಕರೆತರಲು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ ಪಾದಯಾತ್ರೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರೂ ಭಾಗವಹಿಸುವಂತೆ ಸೂಚಿಸಿದ್ದಾರೆ.
ಸಿದ್ದರಾಮಯ್ಯನವರ ಮಾದರಿಯಲ್ಲಿ ಪಾದಯಾತ್ರೆ
ಈ ಹಿಂದೆ ಬೆಂಗಳೂರಿನಿಂದ ಬಳ್ಳಾರಿವರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಾದಯಾತ್ರೆಯನ್ನು ನಡೆಸಿದ್ದರು. ಸಿದ್ದರಾಮಯ್ಯರಂತೆಯೇ ರಾಹುಲ್ ಗಾಂಧಿ ಅವರು ನಡೆಸುವ ಪಾದಯಾತ್ರೆ ವೇಳೆ ಅಲ್ಲಲ್ಲಿ ಅವರೊಂದಿಗೆ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ. ಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ ಮತ್ತೆ ಪಕ್ಷದಲ್ಲಿ ಬಣ ರಾಜಕೀಯ ಎದ್ದು ಕಾಣುತ್ತಿದೆ.

ಹಾಗಾಗಿ ಮುಂಬರುವ ಚುನಾವಣೆಗೆ ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವುದು ಇದೀಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಿಲ್ಲೆಯ ಕೆಲ ವಿಧಾನಸಭೆ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಕಡೆ ಬಣ ರಾಜಕೀಯ ಜೀವಂತವಾಗಿದೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರ ಪಾದಯಾತ್ರೆ ರಾಯಚೂರು ಮೂಲಕವೇ ಸಾಗುತ್ತಿದ್ದು, ಇದು ಪಕ್ಷಕ್ಕೆ ಹೊಸ ಶಕ್ತಿ ತುಂಬುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.
'ಭಾರತ್ ಜೋಡೋ' ಪಾದಯಾತ್ರೆ ರಾಯಚೂರು ಜಿಲ್ಲೆಯ ಮೂಲಕವೇ ಸಾಗಲು ಸಜ್ಜಾಗಿದ್ದು, ಪಾದಯಾತ್ರೆ ಯಶಸ್ಸಿಗೆ ಈಗಾಗಲೇ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸರಣಿ ಸಭೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿಯೂ ಸಿದ್ಧತೆಗಳು ಚುರುಕುಗೊಂಡಿವೆ. ಜಿಲ್ಲೆಯಲ್ಲಿ ಪಕ್ಷದ ಎಲ್ಲ ನಾಯಕರೂ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 'ಭಾರತ್ ಜೋಡೋ' ಪಾದಯಾತ್ರೆ
"ಇಡೀ ದೇಶದ ಒಳಿತಿಗಾಗಿ ಕಾಂಗ್ರೆಸ್ ಹಮ್ಮಿಕೊಂಡಿರುವ 'ಭಾರತ್ ಜೋಡೋ' ಯಾತ್ರೆಯಲ್ಲಿ ಪಕ್ಷಾತೀತವಾಗಿ ಎಲ್ಲ ಸಮಾಜ, ಸಮುದಾಯದವರು ಭಾಗವಹಿಸಲು ಅವಕಾಶ ನೀಡಲಾಗಿದೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ 'ಭಾರತ್ ಜೋಡೋ' ಯಾತ್ರೆ ಕುರಿತು ಪಕ್ಷದ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆ ನಡೆಸಲಾಗಿತ್ತು. ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶದ ಉದ್ದಗಲಕ್ಕೂ 3,500 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ ಎಂದರು.
ಕರ್ನಾಟಕದಲ್ಲಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 29ರವರೆಗೆ 21 ದಿನಗಳ ಕಾಲ 511 ಕಿಲೋ ಮೀಟರ್ ದೂರ ಪಾದಯಾತ್ರೆ ಸಾಗಲಿದೆ. ದೇಶವನ್ನು ಒಗ್ಗೂಡಿಸಲು ರೂಪಿಸಿರುವ ಈ ಯಾತ್ರೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಲು ಅವಕಾಶ ಇದೆ. ಕನ್ನಡಪರ ಸಂಘಟನೆಗಳು, ಚಿತ್ರರಂಗ, ಸಾಹಿತ್ಯ, ರಂಗಭೂಮಿ, ರೈತರು, ಕಾರ್ಮಿಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಎಲ್ಲ ಸಮುದಾಯ, ವರ್ಗ, ಕ್ಷೇತ್ರಗಳ ಜನರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.












Click it and Unblock the Notifications