ಅವ್ಯವಸ್ಥೆಯ ಆಗರವಾದ ಬಿಸಿಎಂ ಹಾಸ್ಟೆಲ್: 5ವರ್ಷಗಳಿಂದ ಖಾಲಿ ಬಿದ್ದಿರುವ ಮೇಲ್ವಿಚಾರಕ ಹುದ್ದೆ
ರಾಯಚೂರು ಡಿಸೆಂಬರ್ 19: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿರುವ ಡಿ. ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯ ಮೂಲಸೌಕರ್ಯ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ.
ಕಳೆದ 5 ವರ್ಷಗಳಿಂದ ವಸತಿ ನಿಲಯ ಮೇಲ್ವಿಚಾರಕ ಹುದ್ದೆ ಖಾಲಿ ಇದೆ. ಖಾಲಿ ಇರುವ ಹುದ್ದೆಗೆ ಶಿಕ್ಷಣ ಇಲಾಖೆಯ ನಿಯಮಾವಳಿ ಗಾಳಿಗೆ ತೂರಿ ಶಿಕ್ಷಕರೊಬ್ಬರನ್ನು ಎರವಲು ಸೇವೆಗೆ ನಿಯೋಜಿಸಲಾಗಿದೆ. ಇದರಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಸಿಗಬೇಕಾದ ಸೌಕರ್ಯ ಒದಗಿಸುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ.
'ವಸತಿ ನಿಲಯದಲ್ಲಿ ಅಡುಗೆ ಸಿದ್ಧಡಿಸಲು ಹಾಗೂ ಅಡುಗೆ ಸಹಾಯಕರು ಸೇರಿ ಮೂವರು ಇರಬೇಕು. ಅದರಲ್ಲಿ ಒಬ್ಬರು ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ. ಉಳಿದಂತೆ ದಿನಗೂಲಿ ಕೆಲಸಗಾರರು ಇದ್ದಾರೆ. ವಸತಿ ನಿಲಯದಲ್ಲಿ ಒಟ್ಟು 50 ವಿದ್ಯಾರ್ಥಿಗಳು ಮಂಜೂರಾತಿ ಇದ್ದರೂ ನಿತ್ಯ 30 ವಿದ್ಯಾರ್ಥಿಗಳು ಮಾತ್ರ ಉಳಿದುಕೊಳ್ಳುತ್ತಾರೆ ಎನ್ನಲಾಗಿದೆ.

ಇನ್ನು ವಸತಿ ನಿಲಯದ ಸಿಬ್ಬಂದಿ ಬೆಳಿಗ್ಗೆ ಉಪಾಹಾರ ತುಂಬಾ ಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಮಧ್ಯಾಹ್ನ ಉಳಿದ ಊಟವನ್ನೇ ರಾತ್ರಿ ಊಟಕ್ಕೆ ಬಡಿಸುತ್ತಾರೆ. ಊಟ ಮತ್ತು ಉಪಾಹಾರದಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸದೆ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

'ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಅನಾರೋಗ್ಯ ಉಂಟಾದರೆ, ವಿದ್ಯಾರ್ಥಿಗಳೇ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಎಸ್ಬಿಎಂ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಕಳಪೆ ಮಟ್ಟದ ಟ್ಯಾಂಕ್ ಹಾಗೂ ಕಿರಿದಾಗಿ ಕಟ್ಟಡ ಮಾಡಿರುವುದರಿಂದ ಕುಸಿದು ಹೋಗಿದೆ. ವಿದ್ಯಾರ್ಥಿಗಳು ಬಳಕೆ ಮಾಡದಷ್ಟು ಹದಗೆಟ್ಟು ಹೋಗಿದೆ. ಅಲ್ಲದೇ ವಸತಿ ನಿಲಯದಲ್ಲಿ ಪ್ಯಾನ್ ಮತ್ತು ಬೆಳಕಿನ ವ್ಯವಸ್ಥೆ ಇದ್ದು ಇಲ್ಲದಂತಾಗಿದೆ. ಇದರಿಂದ ಓದು, ಬರಹಕ್ಕೆ ತೀವ್ರ ತೊಂದರೆಯಾಗಿದೆ' ಎಂದು ವಿದ್ಯಾರ್ಥಿಗಳು ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಹೇಳಿಕೊಂಡಿದ್ದಾರೆ.












Click it and Unblock the Notifications