ರಾಯಚೂರಿನಲ್ಲಿ ಶಾಸಕರ ಮಳೆಹಾನಿ ಪರಿಶೀಲನೆ ವೇಳೆಯೇ ಕುಸಿದ ಸೇತುವೆ
ರಾಯಚೂರು, ಸೆಪ್ಟೆಂಬರ್ 28: ಮಳೆಯಿಂದಾದ ಅನಾಹುತಗಳನ್ನು ಶಾಸಕರು ಪರಿಶೀಲನೆ ಮಾಡುವ ಸಂದರ್ಭದಲ್ಲೇ ಸೇತುವೆ ಕುಸಿದಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಇಂದು ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಇಂದು ಸಿರವಾರ ತಾಲೂಕಿನ ನುಗಡೋಣಿ ಹೊಸೂರಿನಲ್ಲಿ ಘಟನೆ ನಡೆದಿದೆ. ಸೆಪ್ಟೆಂಬರ್ 26ರಂದು ಸುರಿದ ಭಾರೀ ಮಳೆಗೆ ಹೊಸೂರಿನಲ್ಲಿ ಸೇತುವೆಯೊಂದು ಅರ್ಧ ಕುಸಿದು ವಾಹನ ಸಂಚಾರ ಬಂದ್ ಆಗಿತ್ತು. ಸಿರವಾರದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಬಂದ್ ಆಗಿದ್ದರಿಂದ ಜನರು ಸಂಚಾರಕ್ಕೆ ಕಷ್ಟಪಡುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಮಳೆ ಹಾನಿ ಹಾಗೂ ಸೇತುವೆ ಪರಿಶೀಲನೆ ನಡೆಸುತ್ತಿದ್ದರು.
ಇದೇ ಸಂದರ್ಭ ಆ ಸೇತುವೆ ಮತ್ತೆ ಕುಸಿದಿದೆ. ಇದರಿಂದ ಹನುಮಂತ ಹಾಗೂ ಶಿವರಾಮರೆಡ್ಡಿ ಎಂಬ ಇಬ್ಬರು ಗ್ರಾಮಸ್ಥರು ಗಾಯಗೊಂಡಿದ್ದಾರೆ. ಶಾಸಕರು ಬಂದಿದ್ದರಿಂದ ಹೆಚ್ಚು ಜನರೂ ಸ್ಥಳದಲ್ಲಿ ಸೇರಿದ್ದರು. ಹೀಗಾಗಿ ಮೊದಲೇ ಕುಸಿದಿದ್ದ ಸೇತುವೆ ಭಾರ ತಾಳದೆ ಇನ್ನಷ್ಟು ಕುಸಿದು ಬಿದ್ದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ತಮ್ಮ ಕಾರಿನಲ್ಲೇ ಶಾಸಕ ವೆಂಕಟಪ್ಪ ನಾಯಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಹನುಮಂತ ಹಾಗೂ ಶಿವರಾಮರೆಡ್ಡಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದಾರೆ.












Click it and Unblock the Notifications