ಪ್ಲಾಸ್ಟಿಕ್ ನಿಷೇಧ, ಕ್ಲಿಕ್ ಆಯ್ತು ಪುಣೆ ಹೋಟೆಲ್ ಮಾಲಿಕರ ಹೊಸ ಉಪಾಯ
ಪುಣೆ, ಜೂನ್ 26: ಮಾಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದ್ದು ಹಲವು ಹೊಟೇಲ್ ಮಾಲಿಕರನ್ನು ಕಂಗೆಡಿಸಿದೆ. ಪಾರ್ಸೆಲ್ ಸೇವೆಗಳನ್ನು ನೀಡಲಾಗದೆ ಹೋಟೆಲ್ ಗಳು ಸಂಕಷ್ಟ ಅನುಭವಿಸುತ್ತಿದ್ದರೆ, ಜೊಮ್ಯಾಟೊ ಮತ್ತು ಸ್ವಿಗ್ಗಿ ತಮ್ಮ ಕಾರ್ಯವನ್ನೇ ಸ್ಥಗಿತಗೊಳಿಸಿವೆ.
ಆದರೆ ಇದಕ್ಕೆ ಪರ್ಯಾಯ ಉಪಾಯವನ್ನು ಕಂಡುಕೊಂಡಿದ್ದಾರೆ ಪುಣೆಯ ಹೋಟೆಲ್ ಮಾಲಿಕರೊಬ್ಬರು.
ಪುಣೆಯ ಹೋಟೆಲ್ ಒಂದರ ಮಾಲಿಕರಾದ ಗಣೇಶ್ ಶೆಟ್ಟಿ ಗ್ರಾಹಕರಿಗೆ ಆಹಾರಗಳನ್ನು ವಿತರಿಸಲು ಸ್ಟೀಲ್ ಡಬ್ಬಿಗಳ ಮೊರೆ ಹೋಗಿದ್ದಾರೆ. ಇದಕ್ಕೆ ಅವರು ವಿಶೇಷ ಸೂತ್ರವೊಂದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧದಿಂದ 15,000 ಕೋಟಿ ರೂ. ನಷ್ಟ
ಹೋಟೆಲ್ ನಿಂದ ಡಬ್ಬಿಗಳಲ್ಲಿ ಆಹಾರ ಒಯ್ಯುವವರು ಭದ್ರತಾ ಹಣವಾಗಿ 200 ರೂಪಾಯಿಗಳನ್ನು ಕಟ್ಟಬೇಕು. ಆಹಾರ ಕೊಂಡೊಯ್ದ ಡಬ್ಬಿ ಹಿಂತಿರುಗಿಸಿದರೆ ಆ 200 ರೂಪಾಯಿಗಳನ್ನು ವಾಪಸ್ ನೀಡಲಾಗುತ್ತದೆ.
ಇದಕ್ಕೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಒಮ್ಮೆಗೆ 200 ರೂ. ಕಟ್ಟಲು ಹಣಕ್ಕಾಗಿ ಹಿಂದೆ ಮುಂದೆ ನೋಡಿದರೆ, ಇನ್ನು ಕೆಲವರಿಗೆ ಡಬ್ಬಿ ವಾಪಸ್ ನೀಡಬೇಕಲ್ಲ ಎಂಬುದು ತಲೆ ನೋವಾಗಿದೆ. ಆದರೆ ಇದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಒಂದಷ್ಟು ಗ್ರಾಹಕರು ಈ ತೀರ್ಮಾನವನ್ನು ಸ್ವಾಗತಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಪೂರ್ಣ ನಿಷೇಧ, ಕರ್ನಾಟಕದಲ್ಲಿ ಯಾವಾಗ?
ಸರಕಾರದ ಪ್ಲಾಸ್ಟಿಕ್ ಬಳಕೆ ನಿಷೇಧ ತೀರ್ಮಾನಕ್ಕೆ ಹೋಟೆಲ್ ಮಾಲಿಕರು ಸ್ವಾಗತ ವ್ಯಕ್ತಪಡಿಸಿದ್ದಾರೆ. ಆದರೆ ನಮಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಒಂದಷ್ಟು ಸಮಯ ನೀಡಬೇಕಾಗಿತ್ತು. ಒಮ್ಮಿಂದೊಮ್ಮೆ ಈ ನಿಷೇಧ ಜಾರಿಗೆ ಬಂದಿರುವುದರಿಂದ ಗ್ರಾಹಕರಿಗೂ ತೊಂದರೆಯಾಗಲಿದೆ ಎಂದು ಗಣೇಶ್ ಶೆಟ್ಟಿ ಸ್ವಲ್ಪ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲೂ ಕೆಲವು ಹೋಟೆಲ್ ಮಾಲಿಕರು ಈ ರೀತಿಯ ಡಬ್ಬಿಗಳಲ್ಲಿ ಆಹಾರ ನೀಡುವ ಮಾದರಿಯನ್ನು ಪಾಲಿಸುತ್ತಿದ್ದಾರೆ. ಪರಿಸರ ಸ್ನೇಹಿಯಾದ ಈ ಮಾದರಿಯನ್ನು ಉಳಿದವರೂ ಪಾಲಿಸಬೇಕಿದೆ.