ವಿದ್ಯಾರ್ಥಿನಿಗೆ ಶಾಯಿರಿ, ಗಿಫ್ಟ್ ನೀಡಿದ ಶಿಕ್ಷಕ ಜೈಲಿಗೆ

ತನ್ನ ವಿದ್ಯಾರ್ಥಿನಿಗೆ 8 ಪುಟಗಳ ಪ್ರೇಮ ಪತ್ರ ಬರೆದಿದ್ದ. ತನ್ನ ಪ್ರೇಮ ನಿವೇದಿಸಿಕೊಳ್ಳಲು ಅದರಲ್ಲಿ ಶಾಯಿರಿಗಳನ್ನೂ ಗೀಚಿಸಿದ್ದ. ಸಾಲದು ಅಂತ ಖರ್ಚಿಗೆ ಮಡಕ್ಕೋ ಅಂತ 5 ಸಾವಿರ ರೂಪಾಯಿಯನ್ನೂ ಕಳಿಸಿದ್ದ! ಇಷ್ಟೆಲ್ಲಾ ಮೆಟಿರಿಯಲಿಸ್ಟಿಕ್ ಎವಿಡೆನ್ಸ್ ಇರುವಾಗ ಪೊಲೀಸರು ಸುಮ್ಮನೆ ಬಿಡುತ್ತಾರಾ? ಆ ಭಾವನಾಜೀವಿಯನ್ನು ಎತ್ತಿ ಒಳಕ್ಕೆ ಹಾಕಿದ್ದಾರೆ!
ಪ್ರೇಮಪೀಡಿತ ಆರೋಪಿ ಭಾನುದಾಸ್ ಶಿಂಗಡೆಯನ್ನು ವಲ್ಚಂದನಗರದ ಪೊಲೀಸರು ಇದೀಗ ಬಂಧಿಸಿಟ್ಟುಕೊಂಡಿದ್ದಾರೆ. ಕೋರ್ಟು ಸಹಾ ಸದ್ಯಕ್ಕೆ ಆತನಿಗೆ ಜಾಮೀನು ನೀಡಲು ನಿರಾಕರಿಸಿದೆ.
ಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಕವಿಪುಂಗವನೂ ಆದ ಭಾನುದಾಸ 10ನೇ ತರಗತಿಯ ವಿದ್ಯಾರ್ಥಿನಿಗೆ ಶಾಯಿರಿ ತುಂಬಿದ ಪತ್ರ ಗೀಚಿ, ತನ್ನ ಪ್ರೇಮವನ್ನು ನಿವೇದಿಸಿಕೊಂಡಿದ್ದ.
ಪ್ರೇಮಪೀಡಿತ ಭಾನುದಾಸ ಏನು ಮಾಡಿದ್ದನೆಂದರೆ ತರಗತಿಯ ಎಲ್ಲ ಮಕ್ಕಳ ಹೋಂವರ್ಕ್ ನೋಟ್ ಪುಸ್ತಕಗಳನ್ನು ತೆಗೆದುಕೊಂಡಿದ್ದ. ಹೋಂವರ್ಕ್ ಎಲ್ಲಾ ನೋಡಿ, ಎಲ್ಲರಿಗೂ ಪುಸ್ತಕಗಳನ್ನು ವಾಪಸ್ ಮಾಡಿದ್ದ. ಆದರೆ ಒಬ್ಬ ವಿದ್ಯಾರ್ಥಿನಿಯ ನೋಟ್ ಪುಸ್ತಕವನ್ನು ತಡವಾಗಿ ವಾಪಸ್ ಮಾಡಿದ್ದ. ಆದರೆ ಆ ಪುಸ್ತಕಕ್ಕೆ ಬಣ್ಣದ ಪೇಪರ್ ಸುತ್ತಿ ಅಂದಚೆಂದಗೊಳಿಸಿದ್ದ!
ಗಾಬರಿಗೊಂಡ ಬಾಲಕಿ ಅನುಮಾನದಿಂದಲೇ ಪುಸ್ತಕದ ರ್ಯಾಪರ್ ಬಿಚ್ಚಿ ನೋಡಿದಾಗ ಒಳಗೆ 8 ಪುಟಗಳ ಪತ್ರ ಮತ್ತು 5 ಸಾವಿರ ಕ್ಯಾಷ್ ಕಂಡಿದ್ದಾಳೆ. ಪತ್ರವನ್ನು ಓದತೊಡಗಿದ ವಿದ್ಯಾರ್ಥಿನಿ ಅದರಲ್ಲಿನ ಪ್ರೇಮ ಭಾಷೆಯನ್ನು ಕಂಡು ಬೆಚ್ಚಿಬಿದ್ದಿದ್ದಾಳೆ. 'ಅಮ್ಮಿ ಶಾಲೆಯಲ್ಲಿ ನೀನಿಲ್ಲದಿದ್ದರೆ ನನಗೆ ಪಾಠ ಮಾಡೋಕ್ಕೆ ಆಗೋಲ್ಲ. ನಿನ್ನನ್ನು ತುಂಬಾ ಅಂದರೆ ತುಂಬಾ ಇಷ್ಟಪಡ್ತಿದ್ದೀನಿ. ಐ ಲವ್ ಯು' ಎಂದೆಲ್ಲಾ ಭೂಪ ಬರೆದಿದ್ದ.
ಆದರೆ ಆಕೆ ನಿಜಕ್ಕೂ ದಂಗುಬಡಿದಿದ್ದು ಕ್ಯಾಷ್ ನೋಡಿದಾಗ. ಆದರೆ ಭೂಪ ಅದಕ್ಕೂ ಉಪಾಯ ಕಂಡುಹಿಡಿದಿದ್ದ. 'ಅಮ್ಮಿ ರಸ್ತೇಯಲ್ಲಿ ಈ ದುಡ್ಡು ಬಿದ್ದಿತ್ತು ಎಂದು ನಿಮ್ಮ ಮನೆಯವರಿಗೆ ತಿಳಿಸಿಬಿಡು' ಎಂದು ಹೇಳಿ ಕೊಟ್ಟಿದ್ದ.
ಮುಂದೆ ಪ್ರಿನ್ಸಿಪಾಲ್, ಪೋಷಕರು ಕೊನೆಗೆ ಕೊನೆಗೆ ಪೊಲೀಸರಿಗೂ ವಿಷಯ ತಿಳಿದುಬಂದಿದೆ. ಪ್ರಿನ್ಸಿಪಾಲರು ಶಿಕ್ಷಕ ಭಾನುದಾಸ್ ಶಿಂಗಡೆಯನ್ನು ಮೊದಲು ಅಮಾನತು ಮಾಡಿ, ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.












Click it and Unblock the Notifications