52 ವರ್ಷಗಳ ಬಳಿಕ ಚುನಾವಣಾ ರಾಜಕೀಯ ತೊರೆದ ಪವಾರ್
ಪುಣೆ, ನವೆಂಬರ್ 12: ಮುಂದಿನ ಲೋಕಸಭೆ ಚುನಾವಣೆ 2019 ನೀವು ಸ್ಪರ್ಧಿಸುತ್ತೀರಾ? ಎಂದು ಕೇಳಿದ ಪ್ರಶ್ನೆಗೆ 'ಈಗ ಯಾವ ಎಲೆಕ್ಷನ್ ಸ್ಪರ್ಧಿಸಲ್ಲ' ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಅಧ್ಯಕ್ಷ, 77 ವರ್ಷದ ಶರದ್ಪವಾರ್ ಪ್ರತಿಕ್ರಿಯಿಸಿದ್ದಾರೆ.
ಶರದ್ ಪವಾರ್ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರು ಸುಳಿವು ನೀಡಿದ್ದರು.
ಈಗ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಳಿದ ಪ್ರಶ್ನೆಗೆ ಖುದ್ದು ಶರದ್ ಪವಾರ್ ಅವರೇ ಉತ್ತರಿಸಿದ್ದಾರೆ. 'ನಾನು ಕಾಲೇಜು ದಿನಗಳಲ್ಲೇ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದೆ. ಆ ನಂತರ ವಿಧಾನಸಭೆ, ಲೋಕಸಭೆಗೆ ಆಯ್ಕೆಯಾಗಿದ್ದೆ. 52 ವರ್ಷದಿಂದ ನಾನು ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ' ಎಂದು ತಮ್ಮ ರಾಜಕೀಯ ಜೀವನದ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನೀವು ಪುಣೆಯಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪವಾರ್ ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.
ಪುಣೆಯಲ್ಲಿ ಪಕ್ಷದ ಕೆಲವು ಕಾಯಕರ್ತರು ಸ್ಪರ್ಧಿಸುವಂತೆ ಮನವಿ ಮಾಡಿದ್ದರು. ಆದರೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗೆ ತಮ್ಮ ಹೆಸರು ಪ್ರಸ್ತಾವ ಮಾಡದಂತೆ ಸೂಚಿಸಿದರು ಎಂದು ಅಜಿತ್ ಪವಾರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಹಾರಾಷ್ಟ್ರದಲ್ಲಿ ನಲವತ್ತೆಂಟು ಲೋಕಸಭಾ ಕ್ಷೇತ್ರಗಳಿದ್ದು, ಐವತ್ತು-ಐವತ್ತು ಅನುಪಾತದಲ್ಲಿ ಕಾಂಗ್ರೆಸ್ ಜತೆಗೆ ಸ್ಥಾನ ಹಂಚಿಕೆಗೆ ಎನ್ ಸಿಪಿ ಮಾತುಕತೆ ನಡೆಸುತ್ತಿದೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಇಪ್ಪತ್ತೇಳು ಹಾಗೂ ಎನ್ ಸಿಪಿ ಇಪ್ಪತ್ತೊಂದು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಈಗಾಗಲೇ ಕಾಂಗ್ರೆಸ್-ಎನ್ ಸಿಪಿ ಲೋಕಸಭೆ ಚುನಾವಣೆಗೆ ಪ್ರತ್ಯೇಕವಾಗಿ ತಯಾರಿ ಆರಂಭಿಸಿವೆ.












Click it and Unblock the Notifications