ಪುಣೆಯ ಕಾರ್ಖಾನೆಯಲ್ಲಿ ಅಗ್ನಿ ಅವಘಡ, 18 ಮಂದಿ ಸಾವು
ಪುಣೆ, ಜೂನ್ 7: ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಅಗ್ನಿ ದುರಂತ ಸಂಭವಿಸಿದ್ದು 18 ಮಂದಿ ಮೃತಪಟ್ಟಿರುವ ಘಟನೆ ಪುಣೆಯಲ್ಲಿ ನಡೆದಿದೆ. ಪುಣೆಯಿಂದ 40 ಕಿಲೋ ಮೀಟರ್ ದೂರದ ಉರವಾಡೆ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿರುವ ಎಸ್ವಿಎಸ್ ಅಕ್ವಾ ಟೆಕ್ನಾಲಜೀಸ್ ಸಂಸ್ಥೆಗೆ ಸಂಬಂಧಿಸಿದ ಕಾರ್ಖಾನೆ ಈ ಅಗ್ನಿ ಅವಘಡಕ್ಕೆ ಒಳಗಾಗಿದೆ. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಪುಣೆಯ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ದೇಶ್ಮುಖ್ ಘಟನೆಯ ಸಂಜೆ ಆರು ಗಂಟೆಯ ಸುಮಾರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಸುಮಾರು 15 ಮಂದಿ ಕಾರ್ಮಿಕರು ಕಾರ್ಖಾನೆಯ ಒಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದಿದ್ದರು. ಈವರೆಗೂ 8 ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಅವರು ವಿವರಿಸಿದರು. ಆದರೆ ಈಗ ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
"ಮುಲ್ಶಿ ತಾಲೂಕಿನ ಪಿರಂಗುಟ್ ಬಳಿಯ ಉರಾವಾಡೆ ಗ್ರಾಮದರುವ ಎಸ್ವಿಎಸ್ ಆಕ್ವಾ ಕಂಪನಿಯಲ್ಲಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 15 ಕಾರ್ಮಿಕರು ಒಳಗೆ ಸಿಲುಕಿರುವ ಶಂಕೆಯಿದೆ. ನಿಉ ಶುದ್ಧೀಕರಿಸಲು ಕ್ಲೋರಿನ್ ಡೈಯಾಕ್ಸೈಡ್ ಟ್ಯಾಬ್ಗಳನ್ನು ಕಂಪನಿ ಉತ್ಪಾದಿಸುತ್ತಿತ್ತು. ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ತಲುಪಿದ್ದು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೆ 8 ಮೃತದೇಹಗಳನ್ನು ಹೊರ ತೆಗೆಯಲಾಗಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ದೇಶ್ಮುಖ್ ವಿವರಿಸಿದ್ದರು.

ಅಗ್ನಿ ಶಾಮಕ ದಳದ ಅಧಿಕಾರಿ ದೇವೇಂದ್ರ ಫೋಟ್ಪೋಡೆ ನೀಡಿದ ಪ್ರಕಾರ 37 ಜನರು ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದರಲ್ಲಿ 18 ಮಂದಿಯ ಮೃತದೇಹಗಳನ್ನು ತೆಗೆಯಲಾಗಿದ್ದು ಉಳಿದವರನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಸ್ಥಳೀಯ ಶಾಸಕ ಸಂಗ್ರಾಮ್ ತೋಪ್ಟೆ ಪ್ರತಿಕ್ರಿಯಿಸಿದ್ದು "41 ಜನ ಕಾರ್ಮಿಕರು ಇಂದು ಮುಂಜಾನೆ ಕೆಲಸಕ್ಕೆ ಹಾಜರಾಗಿದ್ದಾರೆ. ಈಗ 17ಕ್ಕೂ ಹೆಚ್ಚಿನ ಜನರು ನಾಪತ್ತೆಯಾಗಿದ್ದಾರೆ. ಈ ನಾಪತ್ತೆಯಾದವರಲ್ಲಿ 15 ಮಂದಿ ಮಹಿಳೆಯರು" ಎಂದು ಮಾಹಿತಿ ನೀಡಿದ್ದಾರೆ. 8 ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.












Click it and Unblock the Notifications