ಮೋದಿ ಮೇಲೆ ದಾಳಿ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಬಂಧನ
ಪಾಟ್ನಾ, ಜುಲೈ 14; ಬಿಹಾರದ ಪಾಟ್ನಾದಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ ಉಗ್ರರಿಗೆ 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ತರಬೇತಿ ನೀಡಲಾಗುತ್ತಿತ್ತು.
ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿಯ ಸಂದರ್ಭದಲ್ಲಿ ಅವರನ್ನು ಗುರಿಯಾಗಿಸಿ ದಾಳಿ ನಡೆಸುವ ಸಂಚು ಕೂಡ ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ. ಬಂಧಿತ ಜೋಡಿಯನ್ನು ಅಥರ್ ಪರ್ವೇಜ್ ಮತ್ತು ಎಂಡಿ ಜಲಾಲುದ್ದೀನ್ ಎಂದು ಗುರುತಿಸಲಾಗಿದೆ.
ಪ್ರಧಾನಿ ಮೋದಿ ಭೇಟಿಗೆ 15 ದಿನಗಳ ಮೊದಲು ಶಂಕಿತ ಭಯೋತ್ಪಾದಕರಿಗೆ ಫುಲ್ವಾರಿ ಷರೀಫ್ನಲ್ಲಿ ತರಬೇತಿ ನೀಡಲಾಗುತ್ತಿತ್ತು. ಅವರು ಜುಲೈ 6 ಮತ್ತು 7 ರಂದು ಪ್ರಧಾನಿ ಮೋದಿಯನ್ನು ಗುರಿಯಾಗಿಸಲು ಸಂಚು ರೂಪಿಸಲು ಸಭೆಗಳನ್ನು ನಡೆಸಿದ್ದರು ಎಂದು ತಿಳಿದು ಬಂದಿದೆ. ಶಂಕಿತ ಉಗ್ರರ ಫುಲ್ವಾರಿ ಷರೀಫ್ ಕಚೇರಿ ಮೇಲೆ ಬಿಹಾರ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಪೊಲೀಸರು ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವುಗಳಲ್ಲಿ '2047 ಇಂಡಿಯಾ ಇಸ್ಲಾಮಿಕ್ ಆಳ್ವಿಕೆ ಇಂಡಿಯಾ ಇಸ್ಲಾಮಿಕ್ ಕಡೆಗೆ' ಎಂಬ ದಾಖಲೆ ಸಹ ಸಿಕ್ಕಿದೆ. ಪೊಲೀಸರು ಬಂಧಿತರ ವಿಚಾರಣೆ ನಡೆಸುತ್ತಿದ್ದಾರೆ.

ಶಂಕಿತ ಇಬ್ಬರು ಉಗ್ರರ ಬಂಧನ
ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಸಂಭಾವ್ಯ ಭಯೋತ್ಪಾದಕ ಘಟಕ ಕಾರ್ಯನಿರ್ವಹಿಸುತ್ತಿದೆ ಎಂದು ಗುಪ್ತಚರದಳಕ್ಕೆ ಮಾಹಿತಿ ಸಿಕ್ಕಿತು. ನಂತರ ಪೊಲೀಸರು ಮತ್ತು ಕೇಂದ್ರದ ಏಜೆನ್ಸಿಗಳು ಜುಲೈ 11ರಂದು ನಯಾ ಟೋಲಾ ಪ್ರದೇಶದ ಮೇಲೆ ದಾಳಿ ನಡೆಸಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಕೇರಳ, ಯುಪಿ ಯುವಕರಿಗೆ ತರಬೇತಿ
ಈ ತರಬೇತಿ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚಿನ ಯುವಕರು ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಇತರ ರಾಜ್ಯದವರು. ಭಯೋತ್ಪಾದಕ ದಾಳಿ ಸಂಚು ರೂಪಿಸಲು ತರಬೇತಿ ಪಡೆಯಲು ಬರುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಬಂಧಿತರು ಪಾಕಿಸ್ತಾನ, ಬಾಂಗ್ಲಾದೇಶ, ಟರ್ಕಿ ಸೇರಿದಂತೆ ಹಲವು ಇಸ್ಲಾಮಿಕ್ ರಾಷ್ಟ್ರಗಳಿಂದ ತರಬೇತಿ ಪಡೆದ ಉಗ್ರರು ದೇಶದಲ್ಲಿ ತಂಗಿದ್ದಾಗ ದೇಶವಿರೋಧಿ ಅಭಿಯಾನ ನಡೆಸಲು ಹಣ ಪಡೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

PFI ಯೊಂದಿಗೆ ಸಂಪರ್ಕ
"ಬಂಧಿತರನ್ನು ಜಾರ್ಖಂಡ್ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅಥರ್ ಪರ್ವೇಜ್ ಎಂದು ಗುರುತಿಸಲಾಗಿದೆ. ಅವರು PFI ಯೊಂದಿಗೆ ಸಂಪರ್ಕ ಹೊಂದಿದ್ದಾರೆಂದು ತನಿಖೆಯಿಂದ ಬಯಲಾಗಿದೆ. ಜಲಾವುದ್ದೀನ್ ಈ ಹಿಂದೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಯೊಂದಿಗೆ ಸಂಬಂಧ ಹೊಂದಿದ್ದರು" ಎಂದು ಫುಲ್ವಾರಿ ಷರೀಫ್ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ( ಎಎಸ್ಪಿ) ಮನೀಶ್ ಕುಮಾರ್ ಹೇಳಿದರು.

ಎನ್ಐಎಯಿಂದ ತನಿಖೆ
"ಅವರು ಸ್ಥಳೀಯರಿಗೆ ಕತ್ತಿ ಮತ್ತು ಚಾಕುಗಳನ್ನು ಹೇಗೆ ಬಳಸಬೇಕೆಂದು ಕಲಿಸುತ್ತಿದ್ದರು. ಕೋಮುಗಲಭೆಗೆ ಪ್ರಚೋದನೆ ನೀಡುತ್ತಿದ್ದರು. ಇತರ ರಾಜ್ಯಗಳ ಜನರು ಪಾಟ್ನಾದಲ್ಲಿ ಅವರನ್ನು ಭೇಟಿ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಆ ಸಂದರ್ಶಕರು ಬಿಹಾರ ರಾಜಧಾನಿಯ ಹೋಟೆಲ್ಗಳಲ್ಲಿ ತಂಗಿದ್ದಾಗ ತಮ್ಮ ಹೆಸರನ್ನು ಬದಲಾಯಿಸುತ್ತಿದ್ದರು. ಅವರ ಗುರುತನ್ನು ಮರೆಮಾಚುತ್ತಿದ್ದರು" ಎಂದು ಅವರು ಹೇಳಿದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪಾಟ್ನಾ ಭಯೋತ್ಪಾದನಾ ಘಟಕದ ತನಿಖೆಗೆ ಸೇರಿದೆ. ಈ ಪ್ರಕರಣದಲ್ಲಿ ಮೂರನೇ ಶಂಕಿತನನ್ನು ಎನ್ಐಎ ಕೂಡ ಬಂಧಿಸಿದೆ.












Click it and Unblock the Notifications