ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ತೇಜಸ್ವಿ ಯಾದವ್ ಸವಾಲು
ಪಾಟ್ನಾ, ಅಕ್ಟೋಬರ್.14: ಬಿಹಾರದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಿಎಂ ನಿತೀಶ್ ಕುಮಾರ್ ಅವರಿಗೆ ಪ್ರತಿಪಕ್ಷ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ತೇಜಸ್ವಿ ಯಾದವ್ ಸವಾಲು ಹಾಕಿದ್ದಾರೆ.
ರಾಘೋಪುರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಬಳಿಕ ಅವರು ಮಾತನಾಡಿದರು. ತವರಿನ ನಳಂದಾ ಜಿಲ್ಲೆಯ ಯಾವುದೇ ಕ್ಷೇತ್ರವನ್ನು ನಿತೀಶ್ ಕುಮಾರ್ ಅವರು ಆಯ್ಕೆ ಮಾಡಿಕೊಳ್ಳಲಿ. ಅದೇ ಕ್ಷೇತ್ರದಲ್ಲಿ ಅವರ ವಿರುದ್ಧ ನಾನು ಸ್ಪರ್ಧಿಸುವುದಕ್ಕೆ ಸಿದ್ಧ ಎಂದು ತೇಜಸ್ವಿ ಯಾದವ್ ಸವಾಲು ಹಾಕಿದ್ದಾರೆ. ಬಿಹಾರವು "ಬದಲಾವಣೆಯತ್ತ ಸಾಗುತ್ತಿದೆ", ನಿತೀಶ್ ಕುಮಾರ್ ಅವರು ತಮ್ಮ ತಂಡವನ್ನು ಬದಲಾಸಿದ್ದಕ್ಕೆ ಜನರು ಸರಿಯಾಗಿ ಪ್ರತ್ಯುತ್ತರವನ್ನು ನೀಡುತ್ತಾರೆ ಎಂದು ಕಿಡಿ ಕಾರಿದ್ದಾರೆ.

2017ರಲ್ಲಿ ಆರ್ ಜೆಡಿ ಜೊತೆಗಿನ ನಂಟು ಕಟ್:
ಕಳೆದ 2015ರ ಬಿಹಾರ ವಿಧಾನಸಭ ಚುನಾವಣೆಯಲ್ಲಿ 243 ಕ್ಷೇತ್ರಗಳ ಪೈಕಿ ರಾಷ್ಟ್ರೀಯ ಜನತಾ ಪಕ್ಷವೊಂದೇ 80 ಸ್ಥಾನಗಳನ್ನು ಪಡೆದುಕೊಂಡಿದ್ದು, ಅತಿದೊಡ್ಡ ಪಕ್ಷ ಎನಿಸಿತ್ತು. ಜೆಡಿಯು 71 ಹಾಗೂ ಕಾಂಗ್ರೆಸ್ 27 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ 2017ರಲ್ಲಿ ಆರ್ ಜೆಡಿ ಜೊತೆಗೆ ಗುರುತಿಸಿಕೊಂಡಿದ್ದ ಸಿಎಂ ನಿತೀಶ್ ಕುಮಾರ್ ದಿಢೀರನೇ ಮೈತ್ರಿ ಕಡಿದುಕೊಂಡು ಎನ್ ಡಿಎ ಜೊತೆಗೆ ಸೇರಿಕೊಂಡರು. ಇದಕ್ಕೂ ಮೊದಲು 2013ರಲ್ಲಿ ನರೇಂದ್ರ ಮೋದಿ ಅವರನ್ನು ಎನ್ ಡಿಎ ಮೈತ್ರಿಕೂಟದ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ ನಿತೀಶ್ ಕುಮಾರ್ ಎನ್ ಡಿಎ ಜೊತೆಗಿನ ದೋಸ್ತಿಗೆ ಗುಡ್ ಬೈ ಹೇಳಿದ್ದರು.
ಕಳೆದ ಸಪ್ಟೆಂಬರ್.25ರಂದು ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸಿತು. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.












Click it and Unblock the Notifications